ಅನರ್ಹ ಶಾಸಕ ಶಂಕರ್‌ಗೆ ಟಿಕೆಟ್ ಕಟ್: ರಾಣೇಬೆನ್ನೂರ್‌ಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ

By Web DeskFirst Published Nov 14, 2019, 3:53 PM IST
Highlights

ರಾಣೇಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅನರ್ಹ ಶಾಸಕ ಆರ್. ಶಂಕರ್‌ಗೆ ನಿರಾಸೆಯಾಗಿದೆ. ರಾಣೇಬೆನ್ನೂರು ಕ್ಷೇತ್ರದ ಉಪಚುನಾವಣೆ ಟಿಕೆಟ್‌ನ್ನು ಬಿಜೆಪಿ ಪ್ರಭಾವಿ ಸಚಿವನ ಪುತ್ರನಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಿಸಿದೆ. ಇನ್ನು ಶಂಕರ್‌ಗೆ ಸಿಎಂ ಯಡಿಯೂರಪ್ಪ ಬಂಪರ್ ಆಫರ್‌ ಘೋಷಿಸಿದ್ದಾರೆ. ಹಾಗಾದ್ರೆ ರಾಣೇಬೆನ್ನೂರು ಟಿಕೆಟ್ ಯಾರಿಗೆ..? ಶಂಕರ್‌ ಏನು ಆಫರ್‌..? ಮುಂದೆ ಓದಿ..

ಬೆಂಗಳೂರು (ನ.14): ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಒಟ್ಟು 17 ಅನರ್ಹ ಶಾಸಕರು ಇಂದು (ಗುರುವಾರ) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ನಿರೀಕ್ಷೆಯಂತೆ ಗುರುವಾರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.ಆದ್ರೆ,15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ರಾಣೇಬೆನ್ನೂರು ಹಾಗೂ ಶಿವಾಜಿನಗರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಬೈ ಎಲೆಕ್ಷನ್: 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಆದರೂ ರಾಣೇಬೆನ್ನೂರು ಕ್ಷೇತ್ರಕ್ಕೆ ಆರ್. ಶಂಕರ್ ಕೈಬಿಟ್ಟು ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.

ಆರ್‌ ಶಂಕರ್‌ಗೆ ಬಂಪರ್ ಆಫರ್:

"

ಹೌದು...ರಾಣೇಬೆನ್ನೂರು ಬಿಜೆಪಿ ಟಿಕೆಟ್‌ನ್ನು ಕಾಂತೇಶ್‌ಗೆ ನೀಡಿ, ಆರ್‌. ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿಗಿರಿ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

ಇಂದು (ಗುರುವಾರ) ತುಮಕೂರಿನಲ್ಲಿ ಮಾತನಾಡಿದ ಬಿಎಸ್‌ವೈ, ಶಂಕರ್‌ ಅವರನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಣೇಬೆನ್ನೂರು ಟಿಕೆಟ್‌ ಗೊಂದಲಕ್ಕೆ ತೆರೆ ಎಳೆದರು. ಹಾಗಾದ್ರೆ. ಈಶ್ವರಪ್ಪ ಮಗ ಕಾಂತೇಶ್‌ಗೆ ರಾಣೇಬೆನ್ನೂರು ಬೈ ಎಲೆಕ್ಷನ್‌ ಟಿಕೆಟ್‌ ಪಕ್ಕಾ ಎಂದಂತಾಗಿದೆ.

2018ರಲ್ಲಿ ರಾಣೇಬೆನ್ನೂರು ವಿಧಾನಸಭಾ ಚುನಾವಣೆಯಲ್ಲಿ ಆರ್‌.ಶಂಕರ್‌ ಕೆಪಿಜೆಪಿ ಪಕ್ಷದಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿ ಮಂತ್ರಿಗಿರಿ ಪಡೆದುಕೊಂಡಿದ್ದರು.

ಆದ್ರೆ, ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಆರ್‌. ಶಂಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಸ್ಫೀಕರ್ ರಮೇಶ್ ಕುಮಾರ್‌ ಶಂಕರ್ ಅವರನ್ನು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಶಂಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಸಹ ಅನರ್ಹರು ಎಂದು ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿತ್ತು. ಆದ್ರೆ ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಕೋರ್ಟ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತೊಂದು ಬಾಕಿ ಇರುವ ಬೆಂಗಳೂರಿನ ಶಿವಾಜಿನಗರ ಕ್ಷೇತ್ರಕ್ಕೆ ಅನರ್ಹ ಶಾಸಕ ರೇಷನ್ ಬೇಗ್ ಕೈಬಿಟ್ಟು ಬೇರೆ ಅಭ್ಯರ್ಥಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

 ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!