
ರಾಮಕೃಷ್ಣ ದಾಸರಿ
ರಾಯಚೂರು (ಡಿ.28) : ಮಾಜಿ ಸಚಿವ ಬಳ್ಳಾರಿಯ ಜನಾರ್ದನರೆಡ್ಡಿ ಅವರನ್ನು ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಭೇಟಿಯಾಗಿದ್ದಾರೆ ಎನ್ನುವ ಪುಕಾರು ಜೋರು ಪಡೆದುಕೊಂಡಿದ್ದು ಈ ಕುರಿತಂತೆ ಕಾರ್ಯಕರ್ತರಲ್ಲಿ ಎಲ್ಲೆಡೆ ಚರ್ಚೆನಡೆಯುತ್ತಿದೆ.
ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮಸ್ಕಿ ವಿಶೇಷತೆಯನ್ನು ಪಡೆದುಕೊಂಡಿದೆ. ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಭೂತರಲ್ಲಿ ಮಸ್ಕಿ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್(Pratapagowda patil) ಅವರು ಸಹ ಒಬ್ಬರಾಗಿದ್ದಾರೆ. ಇದೀಗ ಹೊಸ ಪಕ್ಷವನ್ನು ಘೋಷಣೆ ಮಾಡಿರುವ ಜನಾರ್ದನ ರೆಡ್ಡಿ(janardanareddy) ಅವರನ್ನು ಪ್ರತಾಪಗೌಡ ಪಾಟೀಲ್ ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಮಸ್ಕಿ ಸೇರಿದಂತೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(kalyanarajya pragati paksha)_ ಘೋಷಣೆ ಪೂರ್ವದಲ್ಲಿ ಮಸ್ಕಿ ಸೇರಿ ವಿವಿಧ ಪ್ರದೇಶಗಳಿಗೆ ತೆರಳಿ ಬೆಂಬಲಿಗರ, ಕಾರ್ಯತರ್ಕರೊಂದಿಗೆ ಸಭೆಗಳನ್ನು ನಡೆಸಿದ್ದ ಜನಾರ್ದನರೆಡ್ಡಿ ಅವರು ನಂತರ ಹೊಸ ಪಕ್ಷ ಹುಟ್ಟುಹಾಕಿರುವುದರ ಬಗ್ಗೆ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಜನಾರ್ದನರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ.
ಬಳ್ಳಾರಿ-ವಿಜಯನಗರ : ಎಲ್ಲ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ!
ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಅವರು ಆಪರೇಷನ್ ಕಮಲಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷಾಂತರಗೊಂಡು ಬಿಜೆಪಿಗೆ ಬಂದಿದ್ದರು. ನಂತರ ನಡೆದ ಮಸ್ಕಿ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇದೀಗ ರೆಡ್ಡಿಯವರನ್ನು ಸಂಪರ್ಕಿಸಿದ್ದಾರೆ ಎನ್ನುವ ವದಂತಿ ಹರಡುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಕ್ಷೇತ್ರದ ಮತದಾರರು ಸತ್ಯವೋ - ಮಿಥ್ಯವೋ ಎಂಬ ಚರ್ಚೆಯಲ್ಲಿದ್ದಾರೆ.
ಪುಕಾರಿಗೆ ತೆರೆ ಎಳೆದ ಗೌಡ್ರು:
ಪ್ರತಾಪಗೌಡ ಪಾಟೀಲ್ ಅವರು ಬಳ್ಳಾರಿ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಪುಕಾರು ಎಲ್ಲೆಡೆ ಹಬ್ಬುತ್ತಿದ್ದಂತೆ ಎಚ್ಚೆತ್ತ ಗೌಡರು ವಿಡಿಯೋ ಸಂದೇಶವನ್ನು ರವಾನಿಸಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಮಸ್ಕಿ ಕ್ಷೇತ್ರದ ಮತದಾರ ಬಂಧುಗಳೇ ನಾನು ಜನಾರ್ದನರೆಡ್ಡಿ ಅವರನ್ನು ಭೇಟಿಯಾಗಿದ್ದೇನೆ ಎಂದು ಟಿವಿ ಮಾಧ್ಯಮಗಳಲ್ಲಿ ಸುದ್ದಿ ಪ್ರಚಾರವಾಗಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಪ್ರವಾಸದಲ್ಲಿ ಇರುವುದರಿಂದ ಈ ಸುದ್ದಿಯನ್ನು ನಾನು ನೋಡಿರಲಿಲ್ಲ. ಆದರೆ ಕಾರ್ಯಕರ್ತರು ವಾಟ್ಸ್ಆಪ್ ಗ್ರೂಪ್ಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಾಗ ಗಮನಕ್ಕೆ ಬಂದಿದ್ದು, ಅದಕ್ಕಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಾನು ಯಾವುದೇ ಸಂದರ್ಭದಲ್ಲಿಯೂ ಜನಾರ್ದನರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಅವರೊಂದಿಗೆ ಮಾತನೂ ಸಹ ಆಡಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ತಪ್ಪಾದ ಮಾಹಿತಿಯಾಗಿದೆ. ಕಾರ್ಯಕರ್ತರು ಅನ್ಯತಾ ಭಾವಿಸಬಾರದು. ನಾವು ಬಿಜೆಪಿಯಲ್ಲಿಯೇ ಇದ್ದು, ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿಯಿಂದಲೆಯೇ ಚುನಾವಣೆಗೆ ಸ್ಪರ್ಧಿಸುವುದಾಗಿ ಗೌಡರು ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ರೆಡ್ಡಿ-ಗೌಡರ ಭೇಟಿ ಪುಕಾರು ಕೇವಲ ಮಸ್ಕಿ ಕ್ಷೇತ್ರವಷ್ಟೇ ಅಲ್ಲದೇ ಈ ಭಾಗದ ವಿವಿಧ ಜಿಲ್ಲೆಗಳಲ್ಲಿಯೂ ಸಹ ಸಾಕಷ್ಟುಚರ್ಚೆಯನ್ನುಂಟು ಮಾಡಿತ್ತು ಕೊನೆಗೆ ಪ್ರತಾಪಗೌಡ ಪಾಟೀಲ್ ಅವರೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದು, ಕಾರ್ಯಕರ್ತರ ಚರ್ಚೆ ಮಾತ್ರ ಮುಂದುವರಿದಿದೆ.
ಜನಾರ್ದನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನ: ಸಚಿವ ಶ್ರೀರಾಮುಲು
ನಾನು ರೆಡ್ಡಿ ಅವರನ್ನು ಭೇಟಿಯಾಗಿಲ್ಲ, ಅವರೊಂದಿಗೆ ಮಾತು ಸಹ ಆಡಿಲ್ಲ, ಈ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಚಾರ ಪಡಿಸಲಾಗಿದೆ. ಕಾರ್ಯಕರ್ತರು ಅನ್ಯತಾ ಭಾವಿಸಬಾರದು, ನಾನು ಬಿಜೆಪಿಯಲ್ಲಿಯೇ ಕೆಲಸ ಮಾಡುತ್ತಿದ್ದು ಇದೇ ಪಕ್ಷದಿಂದಲೆಯೇ ಸ್ಪರ್ಧಿಸುವೆ.
- ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ, ಮಸ್ಕಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.