ಭ್ರಷ್ಟಾಚಾರ, ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ: ಪ್ರಮೋದ್ ಮುತಾಲಿಕ್

By Kannadaprabha NewsFirst Published Mar 14, 2024, 2:00 AM IST
Highlights

ಅರವತ್ತು ವರ್ಷಗಳ ಕಾಲ ದೇಶವಾಳಿದ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ದೇಶದ ಅಭಿವೃದ್ಧಿಯನ್ನು ಕಡೆಗಣಿಸಿ ದೇಶದ ಖಜಾನೆಯನ್ನು ಲೂಟಿ ಮಾಡಿ, ಸಂಪತ್ತನ್ನು ಹೊರದೇಶಗಳ ಬ್ಯಾಂಕ್ ಗಳಲ್ಲಿ ಸಾಗಿಸಿ, ದೇಶದ ಖಜಾನೆಯನ್ನು ಖಾಲಿ ಮಾಡಿದ್ದವು. ಇದೇ ಇವರ ದೊಡ್ಡ ಸಾಧನೆಯಾಗಿದೆ: ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಕನಕಪುರ(ಮಾ.14): ಸ್ವಾತಂತ್ರ್ಯ ನಂತರ ಸುದೀರ್ಘವಾಗಿ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಭಾರತ ದೇಶದಲ್ಲಿ ಅರಾಜಕತೆ, ಭ್ರಷ್ಟಾಚಾರ, ಭಯೋತ್ಪಾದನೆಗಳಿಗೆ ಕುಮ್ಮಕ್ಕು ನೀಡಿದ್ದೇ ದೊಡ್ಡ ಕೊಡುಗೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಟೀಕಿಸಿದರು.

ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಸೇನಾ ವತಿಯಿಂದ ಜರುಗಿದ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ನಿರುದ್ಯೋಗ, ಬಡತನ, ಭಯೋತ್ಪಾದನೆ ತಾಂಡವವಾಡಿತ್ತು. ಅವರ 15 ಅಂಶಗಳ ಬಡತನ ನಿವಾರಣೆ ಕಾರ್ಯಕ್ರಮ ದೇಶದ ಜನರ ಬದುಕನ್ನು ಬೆಳಗದೆ ಕತ್ತಲೆಯೆಡೆಗೆ ದೂಡಿತ್ತು ಎಂದು ಆರೋಪಿಸಿದರು.

ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ: ಪ್ರಮೋದ್ ಮುತಾಲಿಕ್ ಕಿಡಿ

ಭಾರತದ ಕಾಶ್ಮೀರಕ್ಕೆ 370 ಆರ್ಟಿಕಲ್ ನೀಡುವ ಮೂಲಕ ನಾಗರಿಕರು, ಸೈನಿಕರು, ಪೊಲೀಸರು ಸೇರಿದಂತೆ ಲಕ್ಷಾಂತರ ಜನರ ಮಾರಣ ಹೋಮವಾಯಿತು. ಅಂದಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರನ್ನು ಅಲಹಾಬಾದ್ ಹೈಕೋರ್ಟ್ ಭ್ರಷ್ಟಾಚಾರಿಯಂದು ತೀರ್ಪು ನೀಡಿತು. ಅರವತ್ತು ವರ್ಷಗಳ ಕಾಲ ದೇಶವಾಳಿದ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ದೇಶದ ಅಭಿವೃದ್ಧಿಯನ್ನು ಕಡೆಗಣಿಸಿ ದೇಶದ ಖಜಾನೆಯನ್ನು ಲೂಟಿ ಮಾಡಿ, ಸಂಪತ್ತನ್ನು ಹೊರದೇಶಗಳ ಬ್ಯಾಂಕ್ ಗಳಲ್ಲಿ ಸಾಗಿಸಿ, ದೇಶದ ಖಜಾನೆಯನ್ನು ಖಾಲಿ ಮಾಡಿದ್ದವು. ಇದೇ ಇವರ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ಕಾಶ್ಮೀರ ಸಮಸ್ಯೆ, ಶ್ರೀರಾಮ ಮಂದಿರ ಸಮಸ್ಯೆ ಹಾಗೂ ರೈತರ, ಕಾರ್ಮಿಕರ ಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸೋರಿ ಹೋಗುತ್ತಿದ್ದ ತೆರಿಗೆಗಳಿಗೆ ಕಡಿವಾಣ ಹಾಕಿ ಬರಿದಾದ ಖಜಾನೆಯನ್ನು ಭರ್ತಿ ಮಾಡಿ ವಿಶ್ವವೇ ಬೆರಗಾಗುವಂತೆ ಮಾಡಿದ್ದಾರೆ. ಅಲ್ಲದೆ ದೇಶದಿಂದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಿ ದೇಶದಲ್ಲಿ ಶಾಂತಿಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ನಂ.1 ಸಂಸದ ಅಂದ್ರೆ ಪ್ರತಾಪ ಸಿಂಹ ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರ, ವಾಣಿಜ್ಯ ನಗರಿ ಮುಂಬೈ, ಬೆಂಗಳೂರು ಸೇರಿ ಹಲವಾರು ಕಡೆ ಉಗ್ರಗಾಮಿಗಳನ್ನು ನುಸುಳಲು ಅನುಕೂಲವಾಯಿತು. ಸ್ವಾತಂತ್ರ್ಯ ನಂತರ ದೇಶದ ಜನರು ನಿರ್ಭೀತಿಯಿಂದ ಜೀವನ ಸಾಗಿಸುವುದೇ ಕಷ್ಟದ ಪರಿಸ್ಥಿತಿಯಾಗಿತ್ತು. ನರೇಂದ್ರ ಮೋದಿ ದೇಶದ ಹೊರಗೆ ಹಾಗೂ ಒಳಗೆ ಅವಿತಿದ್ದ ದೇಶದ್ರೋಹಿ ಉಗ್ರಗಾಮಿಗಳನ್ನು ದಮನ ಮಾಡಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶ್ರೀರಾಮ ಸೇನಾ ಅಧ್ಯಕ್ಷ ನಾಗಾರ್ಜುನಗೌಡ, ಬಿಜೆಪಿ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ನಾಗಾನಂದ, ನಗರಾಧ್ಯಕ್ಷ ಕೆ. ಮಂಜು, ಗ್ರಾಮಾಂತರ ಅಧ್ಯಕ್ಷ ಮುರುಳಿ, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ರಾಜೇಶ್, ವಿಭಾಗೀಯ ಅಧ್ಯಕ್ಷ ಅಮರನಾಥ, ನಗರಾಧ್ಯಕ್ಷ ಭಾಸ್ಕರ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು, ಹಿರಿಯ ಮುಖಂಡ ಸಿದ್ದ ಮರಿಗೌಡ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಚಿನ್ನಸ್ವಾಮಿ ಉಪಸ್ಥಿತರಿದ್ದರು.

click me!