
ವಿಧಾನಪರಿಷತ್ತು (ಜು.20): ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ 'ಪ್ರಗತಿಪಥ' ಎಂಬ ಹೊಸ ಯೋಜನೆ ರೂಪಿಸಲಾಗಿದ್ದು, ಇದರಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25 ರಿಂದ 30 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪ್ರಶೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಮೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಗ್ರಾಮೀಣ ಭಾಗದಲ್ಲಿ 62,157 ಕಿ.ಮೀ. ಡಾಂಬರೀಕರಣ ರಸ್ತೆ, 22,060 ಕಿ.ಮೀ. ಜಲ್ಲಿ ರಸ್ತೆ ಮತ್ತು 1.14 ಲಕ್ಷ ಕಿ.ಮೀ. ಮಣ್ಣಿನ ರಸ್ತೆ ಇದೆ.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ವಾಜಪೇಯಿ ಅವರ ಕಾಲದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ (ಪಿಎಂಜಿಎಸ್ವೈ) ರೀತಿ ರಾಜ್ಯ ಸರ್ಕಾರದಿಂದ ಪ್ರಗತಿಪಥ ಎಂಬ ದೊಡ್ಡ ಯೋಜನೆ ರೂಪಿಸಲಾಗಿದೆ. ಇದರಡಿ ಪ್ರತೀ ವರ್ಷ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲೂ ತಲಾ 25ರಿಂದ 30 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಮಾಡಲಾಗುವುದು. ರಸ್ತೆ ನಿಮಾರ್ಣದ ಗುತ್ತಿಗೆ ಪಡೆದವರೇ ಮುಂದಿನ 5 ವರ್ಷ ಆ ರಸ್ತೆಗಳ ನಿರ್ವಹಣೆ ಯನ್ನೂ ಮಾಡಬೇಕಾಗುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಬಲ್ಮೀಸ್ ಬಾನು, ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಅನೇಕ ವರ್ಷಗಳಿಂದ ಡಾಂಬರೀಕರಣ ಇಲ್ಲ. ಗುಂಡಿಗಳನ್ನು ಮುಚ್ಚಿಲ್ಲ, ರೈತರು, ಗ್ರಾಮೀಣ ಜನರು, ಶಾಲಾ ವಾಹನಗಳ ಸಂಚಾರಕ್ಕೆ ಸಮಸ್ಯೆಯಾ ಗುತ್ತಿದೆ. ಹಿಂದೆ ಪಿಎಂಜಿಎಸ್ವೈ ಯೋಜನೆ ಯಡಿ ಅಭಿವೃದ್ಧಿಪಡಿಸಿದ ರಸ್ತೆಗಳ ನಿರ್ವಹಣೆ ಕೂಡ ಆಗುತ್ತಿಲ್ಲ. ಈ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿದವರಿಗೆ ಅವುಗಳ ನಿರ್ವಹಣೆಗೆ ಸರ್ಕಾರ ಖಡಕ್ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
Valimiki Scam: ಸಿದ್ದರಾಮಯ್ಯ ರಾಜೀನಾಮೆ ಸನ್ನಿಹಿತ: ವಿಜಯೇಂದ್ರ ಭವಿಷ್ಯ
ಜಲಜೀವನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ: ಮತ್ತೊಬ್ಬ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಇದೇ ವೇಳೆ ಉತ್ತರ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣ ಭಾಗದ ಕುಡಿವ ನೀರು ಯೋಜನೆ ಜಲಜೀವನ್ ಮಿಷನ್ನಲ್ಲಿ (ಜೆಜೆಎಂ) ಹಲವೆಡೆ ಕಳಪೆ ಕಾಮಗಾರಿಗಳು ನಡೆದಿರುವ ಬಗ್ಗೆ ಮಧ್ಯಂತರ ವರದಿ ಬಂದಿದೆ. ಅಂತಿಮ ವರದಿ ಬಳಿಕ ಎಲ್ಲೆಲ್ಲಿ ಕಳಪೆ ಕಾಮಗಾರಿ ನಡೆದಿದೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.