ಮುಂದಿನ 72 ಗಂಟೆಗಳ ಕಾಲ ಪಾಟ್ನಾ ಬಿಟ್ಟು ಹೋಗಬೇಡಿ, ಶಾಸಕರಿಗೆ ನಿತೀಶ್ ಕುಮಾರ್ ಆದೇಶ!

Published : May 23, 2022, 01:52 PM ISTUpdated : May 23, 2022, 02:46 PM IST
ಮುಂದಿನ 72 ಗಂಟೆಗಳ ಕಾಲ ಪಾಟ್ನಾ ಬಿಟ್ಟು ಹೋಗಬೇಡಿ, ಶಾಸಕರಿಗೆ ನಿತೀಶ್ ಕುಮಾರ್ ಆದೇಶ!

ಸಾರಾಂಶ

ಬಿಹಾರದ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸೂಚನೆ ಕಾಣುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಆಗಾಗ್ಗೆ ಸಭೆ ನಡೆಸುತ್ತಿದ್ದು,  ಮುಂದಿನ 72 ಗಂಟೆಗಳ ಕಾಲ ಪಾಟ್ನಾದಿಂದ ಹೊರಗೆ ಹೋಗದಂತೆ ಅವರು ತಮ್ಮ ಶಾಸಕರಿಗೆ ಸೂಚನೆ ನೀಡಿದ್ದಾರೆ. ಇದು ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಂದಿನ 72 ಗಂಟೆಗಳಲ್ಲಿ ನಿತೀಶ್ ಕುಮಾರ್ ಏನಾದರೂ ದೊಡ್ಡ ಸಾಹಸ ಮಾಡಲಿದ್ದಾರೆಯೇ ಎನ್ನುವ ಪ್ರಶ್ನೆ ಇದರಿಂದ ಉದ್ಭವಿಸಿದೆ.  

ಪಾಟ್ನಾ (ಮೇ.23): ಶೀಘ್ರದಲ್ಲಿಯೇ ಬಿಹಾರ ರಾಜಕೀಯದಲ್ಲಿ(Bihar Politics) ಸಂಚಲನವಾಗಬಲ್ಲುದು ಎನ್ನುವ ಸೂಚನೆ ಸಿಕ್ಕಿದೆ. ಒಂದೆಡೆ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ನಡೆಸಿದೆ. ಮತ್ತೊಂದೆಡೆ, ಈಗ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ನಿತೀಶ್ ಕುಮಾರ್ (Nitish Kumar)  ಅವರು ತಮ್ಮ ಪಕ್ಷದ ಜನತಾ ದಳ ಯುನೈಟೆಡ್ (ಜೆಡಿಯು) ಶಾಸಕರಿಗೆ ಮುಂದಿನ 72 ಗಂಟೆಗಳ ಕಾಲ ಪಾಟ್ನಾದಲ್ಲಿ ಇರುವಂತೆ ಆದೇಶ ಹೊರಡಿಸಿದ್ದಾರೆ. 

ಸಿಎಂ ನಿತೀಶ್ ಆದೇಶದ ನಂತರ ರಾಜಕೀಯ ಸಂಚಲನ ಉಂಟಾಗಿದೆ. ಮುಂದಿನ 72 ಗಂಟೆಗಳು ಬಿಹಾರದ ರಾಜಕೀಯಕ್ಕೆ ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಮುಖಂಡರು ಮತ್ತು ಶಾಸಕರೊಂದಿಗೆ ಆಗಾಗ್ಗೆ ಸಭೆ ನಡೆಸುತ್ತಿದ್ದಾರೆ. ಸಿಎಂ ನಿತೀಶ್ ಅವರ ಕ್ರಿಯಾಶೀಲತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಮೇಲಾಟದ ಚರ್ಚೆಯೂ ಜೋರಾಗಿದೆ. ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟು ಮತ್ತೊಮ್ಮೆ ಆರ್‌ಜೆಡಿ (RJD) ಜೊತೆ ಸರ್ಕಾರ ರಚಿಸಲು ಯೋಜಿಸುತ್ತಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ 72 ಗಂಟೆಗಳಲ್ಲಿ ಉತ್ತರ ಸಿಗಬಹುದು ಎಂದು ನಂಬಲಾಗಿದೆ. ರಾಜ್ಯದ ರಾಜಕೀಯ ಯಾವ ಕಡೆ ಕೂರಲಿದೆ ಎಂಬುದು ಮುಂದಿನ 72 ಗಂಟೆಗಳಲ್ಲಿ ನಿರ್ಧಾರವಾಗಲಿದೆ.

ಸಿಎಂ ನಿತೀಶ್ ಕುಮಾರ್ ಅವರು ಒಂದು ದಿನ ಮುಂಚಿತವಾಗಿ ಪಕ್ಷದ ಕಚೇರಿಯಲ್ಲಿ ತಮ್ಮ ಸಚಿವರು ಮತ್ತು ಶಾಸಕರು ಹಾಗೂ ಮಾಜಿ ಶಾಸಕರನ್ನು ಭೇಟಿ ಮಾಡಿದ್ದಾರೆ. ಈ ಸಭೆಯ ನಂತರ, ಲಾಲು ಕುಟುಂಬದ ಮೇಲಿನ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, ದಾಳಿ ಯಾರು ಮಾಡಿದ್ದಾರೋ ಅವರಯಯ ಮಾತ್ರ ಹೇಳಲು ಸಾಧ್ಯವಾಗುತ್ತದೆ. ನಿತೀಶ್ ಅವರ ಹೇಳಿಕೆಯು ಲಾಲು ಕುಟುಂಬದ ಮೇಲಿನ ದಾಳಿಗೆ ಬಿಜೆಪಿಯನ್ನು ದೂಷಿಸುವಂತಿದೆ ಎಂದು ಹೇಳಲಾಗಿದೆ.

ಹೊಸ ಹಗರಣದಲ್ಲಿ ಸಿಲುಕಿದ ಲಾಲೂ ಕುಟುಂಬ: ಸಿಬಿಐನಿಂದ 15 ಸ್ಥಳಗಳಲ್ಲಿ ಶೋಧ

ಬಿಹಾರದಲ್ಲಿ ಕಳೆದ ಒಂದು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಒಟ್ಟಿಗೆ ಮೂರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಭೆಗಳಲ್ಲಿ ಉಭಯ ನಾಯಕರು ಪರಸ್ಪರ ಆರಾಮವಾಗಿರುವಂತೆ ತೋರಿತು. ಗಮನಿಸಬೇಕಾದ ಸಂಗತಿಯೆಂದರೆ, ನಿತೀಶ್ ಕುಮಾರ್ ಅವರಿಗೆ ಇಫ್ತಾರ್ ಕೂಟಕ್ಕೆ ಸೇರಲು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಅವರಿಂದ ಆಹ್ವಾನವಿತ್ತು, ಸಾಮಾನ್ಯವಾಗಿ ಇದರಲ್ಲಿ ನಿತೀಶ್ ಕುಮಾರ್ ಭಾಗವಹಿಸುತ್ತಿರಲಿಲ್ಲ. ಆದರೆ, ಈ ಬಾರಿ ನಿತೀಶ್ ಕುಮಾರ್ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ತಮ್ಮ ಮನೆಯಿಂದ ರಾಬ್ರಿ ದೇವಿ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು.

ಬಿಹಾರದಿಂದ ರಾಜ್ಯಸಭೆಗೆ ಕನ್ನಡಿಗ ಅನಿಲ್ ಹೆಗ್ಡೆಗೆ ಟಿಕೆಟ್ ನೀಡಿದ ಜೆಡಿಯು

ಆರ್ ಜೆಡಿ ಬಳಿಕ ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಇಫ್ತಾರ್ ಪಾರ್ಟಿ ಆಯೋಜನೆ ಮಾಡಿತ್ತು. ಇದಕ್ಕೆ ತೇಜಸ್ವಿ ಯಾದವ್ ಸೇರಿದಂತೆ ಲಾಲೂ ಪ್ರಸಾದ್ ಅವರ ಎಲ್ಲಾ ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿತ್ತು. ಜೆಡಿಯು ನೀಡಿದ್ದ ಇಫ್ತಾರ್ ಪಾರ್ಟಿಗೆ ತೇಜಸ್ವಿ ಯಾದವ್ ತೆರಳಿದ್ದರಿಂದ ಜೆಡಿಯು ಹಾಗೂ ಆರ್ ಜೆಡಿ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಬಂದಿತ್ತು. ಅದಲ್ಲದೆ, ರಾಜ್ಯದಲ್ಲಿ ಜಾತಿಗಣತಿಯ ವಿಚಾರದಲ್ಲಿ ನಿತೀಶ್ ಕುಮಾರ್ ಹಾಗ ತೇಜಸ್ವಿ ಯಾದವ್ ನಡುವೆ ಗೌಪ್ಯವಾಗಿ ಮಾತುಕತೆಯೂ ನಡೆದಿದೆ. ಜಾತಿ ಗಣತಿಯ ವಿಚಾರದಲ್ಲಿ ಮಾತನಾಡಲು ಮುಖ್ಯಮಂತ್ರಿ ಅವರ ಸಮಯ ಬೇಕಿತ್ತು ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ತೇಜಸ್ವಿ ಯಾದವ್ ಗೆ ಅಪಾಯಿಂಟ್ ಮೆಂಟ್ ಸಿಕ್ಕಿತ್ತು. ಕೇವಲ 24 ಗಂಟೆಯ ಒಳಗಾಗಿ ತೇಜಸ್ವಿ ಯಾದವ್ ಹಾಗೂ ನಿತೀಶ್ ಕುಮಾರ್ ಮಾತುಕತೆ ನಡೆಸಿದ್ದರು. ಈ ಸಭೆಯಲ್ಲಿ ತಾವು ಜಾತಿ ಗಣತಿಯ ಪರವಾಗಿ ಇರುವುದಾಗಿ ತಿಳಿಸಿದ್ದು, ಶೀಘ್ರದಲ್ಲಿ ಸರ್ವಪಕ್ಷ ಸಭೆಯಲ್ಲಿ ಇದರ ಬಗ್ಗೆ ಮಾತನಾಡುವುದಾಗಿ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!