Karnataka Assembly Election 2023: ಬೆಳಗಾವಿ ಗಡಿಭಾಗದಲ್ಲಿ ಗಿಫ್ಟ್‌ ರಾಜಕೀಯ ಜೋರು..!

By Kannadaprabha NewsFirst Published Nov 25, 2022, 9:00 AM IST
Highlights

ಮತದಾರ ಪ್ರಭುಗಳ ಓಲೈಕೆಗೆ ರಾಜಕಾರಣಿಗಳು ನಾನಾ ಕಸರತ್ತು ನಡೆಸಿದ್ದಾರೆ. ಗಡಿಭಾಗದಲ್ಲಿ ಹಾಲಿ ಶಾಸಕರಿಂದಲೇ ಗಿಫ್ಟ್‌ ರಾಜಕೀಯ ಶುರುವಾಗಿದೆ. 

ಶ್ರೀಶೈಲ ಮಠದ

ಬೆಳಗಾವಿ(ನ.25):  ವಿಧಾನಸಭೆ ಚುನಾವಣೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಆಗಲೇ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿವೆ. ಮತದಾರ ಪ್ರಭುಗಳ ಓಲೈಕೆಗೆ ರಾಜಕಾರಣಿಗಳು ನಾನಾ ಕಸರತ್ತು ನಡೆಸಿದ್ದಾರೆ. ಗಡಿಭಾಗದಲ್ಲಿ ಹಾಲಿ ಶಾಸಕರಿಂದಲೇ ಗಿಫ್ಟ್‌ ರಾಜಕೀಯ ಶುರುವಾಗಿದೆ. ಮಹಿಳಾ ಮತದಾರರ ಓಲೈಕೆಗೆ ಹಳದಿ ಕುಂಕಮ ಕಾರ್ಯಕ್ರಮ, ಯುವ ಮತದಾರರ ಓಲೈಕೆಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಗುತ್ತಿದೆ. ವಿಶೇಷವಾಗಿ ಹಳದಿ ಕುಂಕಮ ಕಾರ್ಯಕ್ರಮ ಮಹಿಳಾ ಪ್ರತಿನಿಧಿಗಳು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲೇ ನಡೆಯುತ್ತಿವೆ.

ಉಚಿತವಾಗಿ ಟಿಪಿನ್‌ ಬಾಕ್ಸ್‌, ಸೀರೆ, ಕನ್ನಡಕ, ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವ ಕಾರ್ಯಸದ್ದಿಲ್ಲದೇ ನಡೆಯುತ್ತಿದೆ. ಮಹಿಳಾ ಮತದಾರರ ಓಲೈಕೆ ಕಾರ್ಯ ಗಡಿಭಾಗದ ನಿಪ್ಪಾಣಿ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಗಳಲ್ಲೇ ನಡೆಯುತ್ತಿವೆ. ಹಳದಿ ಕುಂಕಮ ಕಾರ್ಯಕ್ರಮದ ಮೂಲಕ ಮಹಿಳಾ ಮತದಾರರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ತಂತ್ರವೂ ಇದರಲ್ಲಿ ಅಡಗಿದೆ. ಕೆಲವೆಡೆಗಳಲ್ಲಿ ಅಂಗಾರ, ಭಂಡಾರ ಹಿಡಿದು ತಮಗೆ ಮತ ನೀಡುವಂತೆ ದೇವರ ಸಮ್ಮುಖದಲ್ಲಿ ಆಣೆ ಮಾಡಿಸಲಾಗುತ್ತಿದೆ.

ಭಯೋತ್ಪಾದನಾ ಚಟುವಟಿಕೆ ಕಾಂಗ್ರೆಸ್‌ನ ಪಾಪದ ಕೂಸುಗಳು: ಶಾಸಕ ಪಿ.ರಾಜೀವ್ ಆರೋಪ

ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುತ್ತಿರುವ ನಿಪ್ಪಾಣಿ, ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಅರಿಶಿನ ಕುಂಕುಮ ರಾಜಕೀಯ ಜೋರಾಗಿದೆ. ಇದರ ಜೊತೆಗೆ ಉಚಿತವಾಗಿ ಟಿಪಿನ್‌, ಲಂಚ್‌ ಬಾಕ್ಸ್‌ ಹಂಚುವ ಕಾರ್ಯವೂ ಎಗ್ಗಿಲ್ಲದೇ ಸಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ, ವಿಧಾನ ಪರಿಷತ್‌ ಸದಸ್ಯ ಕ್ಷೇತ್ರದ ಜನತೆಗೆ ಉಚಿತವಾಗಿ ಟಿಪಿನ್‌ ಬಾಕ್ಸ್‌ ವಿತರಿಸುತ್ತಿದ್ದಾರೆ.

ಡಾ.ಅಂಜಲಿ ನಿಂಬಾಳ್ಕರ ಅವರು ಕ್ಷೇತ್ರದಲ್ಲಿನ ಮತದಾರರಿಗೆ ಉಚಿತವಾಗಿ ಟಿಪಿನ್‌ ಬಾಕ್ಸ್‌ ವಿತರಿಸುತ್ತಿದ್ದಾರೆ. ಅಲ್ಲದೇ, ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇನ್ನು ಖಾನಾಪುರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ದಿಲೀಪಕುಮಾರ ಅವರು ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚಿಕೆ ಮಾಡುತ್ತಿದ್ದರೆ, ಬಿಟೆಪಿ ಇನ್ನೋರ್ವ ಟಿಕೆಟ್‌ ಆಕಾಂಕ್ಷಿ ಡಾ.ಸೋನಾಲಿ ಸರ್ನೋಬಾತ್‌ ಅವರು ಖಾನಾಪುರ ಕ್ಷೇತ್ರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸುತ್ತಿದ್ದಾರೆ. ಅಲ್ಲದೇ, ಅಗತ್ಯಇರುವವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿದ್ದಾರೆ.

ಇನ್ನು ಬೆಳಗಾವಿ ಬಿಜೆಪಿಯ ಉತ್ತರ ಶಾಸಕ ಅನಿಲ ಬೆನಕೆ ಮತ್ತು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಯುವ ಸಮುದಾಯದ ಮೇಲೆ ಕಣ್ಣಿಟ್ಟಿದ್ದು, ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಣೆ ಮಾಡುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರದಲ್ಲಿನ ಶಾಸಕರು ಮಹಿಳಾ ಮತದಾರರ ಓಲೈಕೆಗೆ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಉಚಿತವಾಗಿ ಟಿಪಿನ್‌ ಬಾಕ್ಸ್‌ ಹಂಚಿಕೆ ಮಾಡುವ ಮೂಲಕ ಮತದಾರರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಆರೋಪಿಸಿದ್ದರು.

click me!