ಬೆಂಗಳೂರು (ಜು.26): ಪಕ್ಕದ ಗೋವಾ ರಾಜ್ಯದಲ್ಲಿ ಕನ್ನಡಿಗರಿಗೆ ವಾಹನ ಖರೀದಿಸಲು ಮತ್ತು ಅವುಗಳ ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನು ರೂಪಿಸಲು ಹೊರಟಿರುವ ಗೋವಾ ಮುಖ್ಯಮಂತ್ರಿಗೆ ಪ್ರಧಾನಿ ಮೋದಿ ಕರೆದು ಬುದ್ಧಿ ಹೇಳಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಗೋವಾ ಸರ್ಕಾರದ ಈ ಕುಬ್ಜ ನೀತಿಯನ್ನು ಎಲ್ಲರೂ ವಿರೋಧಿಸಬೇಕು ಮತ್ತು ಖಂಡಿಸಬೇಕು. ಭಾರತದ ಪ್ರಜೆಗಳು ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ವಾಸಿಸುವ ಅವಕಾಶ ನೀಡಿರುವ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಗೋವಾ ಸಿಎಂಗೆ ಎಲ್ಲಾ ಬಿಜೆಪಿ ನಾಯಕರು ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ಗೋವಾ ರಾಜ್ಯದ ಸ್ಥಳೀಯ ಸಂಘಟನೆಗಳು ಕನ್ನಡಿಗರನ್ನು ಮೊದಲಿನಿಂದಲೂ ಅತಂತ್ರಗೊಳಿಸುವ ಹಾಗೂ ಹೊರದಬ್ಬುವ ಹುನ್ನಾರಾದಲ್ಲಿ ಹಲವು ವರ್ಷಗಳಿಂದ ತೊಡಗಿವೆ. ಈಗ ಸ್ವತಃ ಸರ್ಕಾರವೇ ಇಂತಹ ಸಂವಿಧಾನ ಬಾಹಿರ ಕೃತ್ಯದಲ್ಲಿ ತೊಡಗಿರುವುದು ನಿಜಕ್ಕೂ ಭಾರತ ಮಾತೆಗೆ ಮಾಡುವ ದ್ರೋಹ. ಹಲವು ದಶಕಗಳಿಂದ ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಗಣನೀಯ ಪಾತ್ರ ವಹಿಸಿರುವ ಕನ್ನಡಿಗರು ಈ ರೀತಿಯ ಅನ್ಯಾಯಕ್ಕೆ ಒಳಗಾಗುವುದನ್ನು ನಾವೆಂದೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ರಾಜ್ಯ ಇದೇ ನೀತಿ ಅನುಸರಿಸಿದರೆ ದೇಶದಲ್ಲಿ ಅಂತಃಕಲಹ ಭುಗಿಲೆದ್ದು, ದೇಶವೇ ಆತಂಕಕಾರಿ ಪರಿಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ದೇಶದ ಪ್ರಧಾನಿ ಕೂಡಲೇ ಮಧ್ಯಪ್ರವೇಶ ಮಾಡಿ ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲಿನ ಈ ರೀತಿಯ ದಬ್ಬಾಳಿಕೆ, ದೌರ್ಜನ್ಯ ನೀತಿ ತಡೆಗಟ್ಟಲು ಮುಂದಾಗಬೇಕು ಎಂದು ಚಂದ್ರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.