ಬಿಜೆಪಿ ಅಪಪ್ರಚಾರದ ನಡುವೆ ಪ್ರೀತಿಯ ರಾಜಕಾರಣ ಗೆಲ್ಲಿಸಿದ ಜನ: ಶಾಸಕ ರಾಜೇಗೌಡ

By Kannadaprabha NewsFirst Published Jun 6, 2023, 2:00 AM IST
Highlights

ಕಳೆದ ಬಾರಿ ಕೊರೊನಾ ಮತ್ತು ಅತಿವೃಷ್ಟಿಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ವಿರೋಧ ಪಕ್ಷದ ಶಾಸಕನಾಗಿ ಇದ್ದುಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಸ್ಮರಿಸಿದರು.

ಕೊಪ್ಪ (ಜೂ.06): ಕಳೆದ ಬಾರಿ ಕೊರೊನಾ ಮತ್ತು ಅತಿವೃಷ್ಟಿ ಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ವಿರೋಧ ಪಕ್ಷದ ಶಾಸಕನಾಗಿ ಇದ್ದುಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಸ್ಮರಿಸಿದರು.

ಪಟ್ಟಣದ ತಮ್ಮ ಸಮರ್ಪಣ ಶಾಸಕರ ಕಚೇರಿ ಉದ್ಘಾಟಿಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಬಿಜೆಪಿಯವರ ನಿರಂತರ ಅಪಪ್ರಚಾರ, ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹರಿಸಿದ ಭ್ರಷ್ಟಾಚಾರದ ಹಣದ ಹೊಳೆ ಇದೆಲ್ಲದರ ನಡುವೆಯೂ ಕ್ಷೇತ್ರದ ಜನತೆ ಪ್ರೀತಿಯ ರಾಜಕಾರಣದ ಕೈ ಹಿಡಿದಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಅಭಿವೃದ್ಧಿಗಳಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಈ ಬಾರಿ ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್‌ ಸರ್ಕಾರವಿದ್ದು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್‌ ಶೆಟ್ಟಿ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರವಹಿಸಿಕೊಂಡ ಪ್ರಥಮ ಕ್ಯಾಬಿನೆಟ್‌ ಸಭೆಯಲ್ಲಿಯೇ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆ ಈಡೇರಿಸಿದ್ದಾರೆ. ದಿಟ್ಟನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಬೂತ್‌ ಮಟ್ಟದಲ್ಲಿ ಜನಜಾಗೃತಿ ಮೂಡಿಸಲಾಗುವುದು. ಜಾತಿ ಪಕ್ಷ ಬೇಧಗಳಿಲ್ಲದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಲಾಗುವುದು. ಮಲೆನಾಡು ಭಾಗಕ್ಕೆ ಅವಶ್ಯವಿರುವ ಅರಣ್ಯ ವ್ಯವಸ್ಥಾಪನಾ ಕಚೇರಿಯನ್ನು ಕೊಪ್ಪ ಪಟ್ಟಣಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿಯವರ ಭ್ರಷ್ಟಾಚಾರ ಹಾಗೂ ಮಿತಿಮೀರಿದ ಅಹಂಕಾರಕ್ಕೆ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಅಂಶುಮಂತ್‌ರವರ ಪ್ರಾಮಾಣಿಕ ಪ್ರಯತ್ನದಿಂದ ಜಿಲ್ಲೆಯ ಎಲ್ಲಾ 5 ಸ್ಥಾನಗಳನ್ನು ಕಾಂಗ್ರೆಸ್ಸಿಗೆ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದ ಬಿಜೆಪಿ ಮಾಜಿ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರ ಮನೆಯಿರುವ ಬೂತ್‌ನಲ್ಲಿಯೇ ಜನ ಕಾಂಗ್ರೆಸ್‌ಗೆ 3 ಮತಗಳ ಲೀಡ್‌ ನೀಡುವ ಮೂಲಕ ಬಿಜೆಪಿ ಜನವಿರೋಧಿ ಅಲೆಯನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಯೋಜನೆಗಳನ್ನು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದವರು ಪಡೆದು ಕೊಳ್ಳಬಹುದು. ಕಾಂಗ್ರೆಸ್‌ ಪಕ್ಷಬೇಧ ಮಾಡುವುದಿಲ್ಲ ಎಂದರು.

ಸಂವಿಧಾನದ ಪ್ರಕಾರ ಕೆಲಸ ಮಾಡದಿದ್ದರೆ ಬಾರುಕೋಲಿನಿಂದ ಬಾರಿಸುತ್ತೇನೆ: ಸಚಿವ ಮಹದೇವಪ್ಪ

ಜಿಲ್ಲಾಧ್ಯಕ್ಷ ಡಾ.ಅಂಶುಮಂತ್‌ ಮಾತನಾಡಿ ಕಾಂಗ್ರೆಸ್‌ ಜನಪರವಾಗಿರುವ ಪಕ್ಷ. ಪ್ರಣಾಳಿಕೆಯನ್ನು ಸಮರ್ಪಕ ಅನುಷ್ಠಾನ ಹಾಗೂ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಲು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದರು. ಖಾಸಗಿ ಕಾರ್ಯಕ್ರಮಕ್ಕೆ ಕೊಪ್ಪಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇ ಗೌಡರವರು ಶಾಸಕರ ಕಚೇರಿಗೆ ಆಗಮಿಸಿ ರಾಜೇಗೌಡರಿಗೆ ಶುಭ ಹಾರೈಸಿದರು. ಶೃಂಗೇರಿ ಕ್ಷೇತ್ರ ಚುನಾವಣಾ ಸಮಿತಿ ಉಸ್ತುವಾರಿ ಉಪಾಧ್ಯಕ್ಷ ಓಣಿತೋಟ ರತ್ನಾಕರ್‌, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್‌, ಚಿಂತನ್‌ ಬೆಳಗೊಳ, ಪ.ಪಂ ಸದಸ್ಯರಾದ ಮೈತ್ರಾ ಗಣೇಶ್‌, ರಶೀದ್‌, ತ್ವಹೀದ್‌ ಮುಂತಾದವರಿದ್ದರು.

click me!