
ದಾವಣಗೆರೆ. (ಮೇ.30) : ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪೂರ್ವದಲ್ಲಿ ನೀಡಲಾಗಿರುವ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸಲಿದೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕ ಎಸ್ ರಾಮಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ 5 ಗ್ಯಾರಂಟಿಗಳನ್ನು ಪ್ರಕಟಿಸಿದ್ದು ಶೀಘ್ರ ಅನುಷ್ಠಾನಗೊಳ್ಳಲಿವೆ. ಅದರಂತೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆಯಿಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar), ಸಂಪುಟದ ಸದಸ್ಯರುಗಳು ಅಧಿಕಾರ ಪ್ರತಿಜ್ಞಾವಿಧಿ ಸ್ವೀಕರಿಸಿದ ಮೊದಲ ಸಂಪುಟ ಸಭೆಯಲ್ಲಿಯೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕ್ರಮ ತೆಗೆದುಕೊಂಡಿದ್ದು, ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ರೂಪುರೇಶೆಗಳನ್ನು ಬಿಡುವಿಲ್ಲದೇ ತಯಾರು ಮಾಡುತ್ತಿದ್ದಾರೆ,
ಆದರೆ ಸೋಲಿನ ಹತಾಷೆಯಲ್ಲಿರುವ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ನಮ್ಮ ಪಕ್ಷ ನುಡಿದಂತೆ ಈ ಹಿಂದೆಯೂ ನಡೆದಿದೆ. ಈಗಲೂ ಸಹ ನುಡಿದಂತೆ ನಡೆಯಲಿದೆ, ಸರ್ಕಾರ ರಚನೆಯಾಗಿ 15 ದಿನದಲ್ಲೇ ಈ ರೀತಿಯ ಟೀಕೆ ಮಾಡುವುದು ತರವಲ್ಲ. ಸೋಲಿನ ಹತಾಷೆಯಿಂದ ಕೆಲವು ಪ್ರತಿಪಕ್ಷದ ನಾಯಕರುಗಳು ಕೆಲವೆಡೆ ಜನರನ್ನು ಸರ್ಕಾರದ ವಿರುದ್ಧ ಎತ್ತಿಗಟ್ಟುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಬಸ್ ನಲ್ಲಿ ಫ್ರೀ, ಯಾವುದೇ ಕಂಡೀಶನ್ ಇಲ್ಲ: ಸಾರಿಗೆ ಸಚಿವ ರೆಡ್ಡಿ
ನಮ್ಮ ಯೋಜನೆಗಳ ಬಗ್ಗೆ ಕೇಳುವ ಬಿಜೆಪಿ ನಾಯಕರುಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಗೆ ತಲಾ ಒಬ್ಬಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ತಿಳಿಸಿ 9 ವರ್ಷ ಕಳೆದರೂ ಅದರ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಹರಿಹಾಯ್ದರು. ಪಕ್ಷ ನೀಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ಸಹ ಅಸ್ತಿತ್ವಕ್ಕೆ ಬರಲಿವೆ. ಜನರ ಆಶಯಗಳಿಗೆ ಸರ್ಕಾರ ಸ್ಪಂದಿಸಲಿದೆ, ಯಾವುದೇ ಅಪಪ್ರಚಾರಗಳಿಗೆ ಜನತೆ ಕಿವಿಗೊಡದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ, ಬಿ. ರೇವಣಸಿದ್ದಪ್ಪ, ಮುರುಗೇಶಪ್ಪ, ಎಂ. ನಾಗೇಂದ್ರಪ್ಪ, ಜಿ. ಕೃಷ್ಣಮೂರ್ತಿ, ಶಶಿ ರೆಡ್ಡಿ, ರೆಹಮಾನ್ ಖಾನ್, ಪ್ರಸನ್ನ ಬೆಳಕೆರೆ, ಗಣೇಶ್ ಮೆಹರ್ವಾಡೆ, ಅಬು ಸಲೇಹಾ ಇನ್ನಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.