
ಬೆಂಗಳೂರು : ‘ನವೆಂಬರ್ಗೆ ಕ್ರಾಂತಿ ನಡೆಯಲಿದೆ ಎಂದು ಯಾವ ನಾಯಕರೂ ಮಾತನಾಡಿ ದಣಿಯುವುದು ಬೇಡ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡುತ್ತೇವೆಯೋ ಅದಕ್ಕೆ ಮಾತ್ರ ಬೆಲೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಏನು ಮಾತನಾಡಿಕೊಂಡಿದ್ದೇವೆಯೋ ಅದರ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮತ್ತು ನಿಮ್ಮ ನಡುವೆ ಒಮ್ಮತವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಮ್ಮತದಲ್ಲಿ ಇರುವ ಕಾರಣಕ್ಕೇ ವಿಧಾನಸಭಾ ಚುನಾವಣೆಯಲ್ಲಿ ಮೊದಲು 135 ಸ್ಥಾನದಲ್ಲಿ ಜಯಗಳಿಸಿದ್ದೆವು. ಬಳಿಕ 136, 139 ಆಗಿ ಈಗ 140 ಆಗಿದೆ ಎಂದರು.
ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ನವರು ನಡೆಸಿದ ಪ್ರತಿಭಟನೆಗೆ ಪೊಲೀಸರು ರಕ್ಷಣೆ ನೀಡುತ್ತಿರುವುದು, ಪ್ರತಿಭಟನಾಕಾರರೊಂದಿಗೆ ಸೆಲ್ಫೀ ತೆಗೆಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರ ಬಳಿ ಮಾಹಿತಿ ಇರಬಹುದು. ಎಂಇಎಸ್ನವರೂ ಕನ್ನಡಿಗರೇ. ಅವರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತೇವೆ. ಕರ್ನಾಟಕದಲ್ಲಿ ಇರಬೇಕಾದರೆ ಕನ್ನಡಿಗರಾಗಿ ಇರಲೇಬೇಕು ಎಂದು ಸ್ಪಷ್ಟಪಡಿಸಿದರು.---
ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು ಕಸ ಎಸೆದವರ ಮನೆ ಮುಂದೆಯೇ ಕಸ ತಂದು ಸುರಿಯುತ್ತಿರುವ ಕುರಿತು ಪ್ರತಿಕ್ರಿಯಿಸಿ, ಯಾರು ರಸ್ತೆಯಲ್ಲಿ ಕಸ ಎಸೆಯುತ್ತಾರೆಯೋ ಅವರ ಮೇಲೆ ಕಣ್ಣಿಟ್ಟು ದಂಡ ವಸೂಲಿ ಮಾಡುತ್ತಿದ್ದೇವೆ. ಕಸದ ಗಾಡಿ ಬಾರದಿದ್ದರೆ ಕರೆ ಮಾಡಿದರೆ ಬರುತ್ತದೆ ಎಂದು ಶಿವಕುಮಾರ್ ತಿಳಿಸಿದರು.
- ಕಳೆದ ಹಲವು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ಕುರಿತು ಹೇಳಿಕೆಗಳ ಪೈಪೋಟಿ
- ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ. ಕ್ರಾಂತಿ ಬಗ್ಗೆ ಯಾರೂ ಮಾತನಾಡುವುದು ಬೇಡ
- ನಾನು, ಸಿಎಂ ಏನು ಮಾತನಾಡುತ್ತೇವೋ ಅದಕ್ಕೆ ಮಾತ್ರ ಬೆಲೆ ಎಂದು ಡಿಸಿಎಂರಿಂದ ಸ್ಪಷ್ಟನೆ
- ನಾವು ಏನು ಮಾತನಾಡಿಕೊಂಡಿದ್ದೇವೆಯೋ ಅದರ ಪ್ರಕಾರ ನಡೆಯುತ್ತೇವೆ. ಒಮ್ಮತವಿದೆ: ಡಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.