Karnataka Politics: ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್‌

By Kannadaprabha NewsFirst Published Dec 1, 2021, 10:54 AM IST
Highlights

*    ಶಿಗ್ಗಾಂವಿ, ಸವಣೂರ ಪುರಸಭೆ, ಗ್ರಾಪಂ ಸದಸ್ಯರಿಗೆ ಮತಯಾಚನೆ
*   ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ
*   ಸಚಿವರು, ಶಾಸಕರು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ
 

ಶಿಗ್ಗಾಂವಿ(ಡಿ.01): ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ(Corruption), ಆಡಳಿತ ವೈಫಲ್ಯ, ರೈತ ಹಾಗೂ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿವೆ. ಇವರಿಗೆ ಜನ ಏಕೆ ಆಶೀರ್ವಾದ ಮಾಡಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದರು.

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಗ್ಗಾಂವಿ, ಸವಣೂರ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತಯಾಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಏಳು ವರ್ಷಗಳಿಂದಲೂ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ. ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕೊಟ್ಟಿಲ್ಲ. ಜೊತೆಗೆ ಸದಸ್ಯರ ಗೌರವಧನವನ್ನೂ ಹೆಚ್ಚಿಸಿಲ್ಲ ಎಂದು ಆರೋಪಿಸಿದರು.

ಪ್ರಸಕ್ತ ಚುನಾವಣೆಯಲ್ಲಿ(Vidhan Parishat Election) ರಾಜ್ಯದಲ್ಲಿ(Karnataka) 14ಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌(Congress) ಗೆಲ್ಲಲಿದೆ. ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ. ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾಗೂ ಮನೆಗಳು ಹಾನಿಯಾಗಿ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಸಚಿವರು, ಶಾಸಕರು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದರು.

Council Election Karnataka :ಗೆಲ್ಲುವ ಪಣದಿಂದ ಫೀಲ್ಡಿಗಿಳಿದ ಮಾಜಿ ಮುಖಂಡರು

ಹಾನಗಲ್ಲ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ(Shrinivas Mane) ಮಾತನಾಡಿ, ಸ್ಥಳೀಯ ಸಮಸ್ಯೆಗಳ ಅರಿವು ಹೊಂದಿರುವ ಸದಸ್ಯರು ಜನರ ಜೊತೆಗೆ ಮುಖಾಮುಖಿ ಆಗಬೇಕಾಗುತ್ತದೆ. ಸುಸಜ್ಜಿತ ರಸ್ತೆ, ಸಮರ್ಪಕ ವಿದ್ಯುತ್‌ ಪೂರೈಕೆ, ಶೌಚಾಲಯ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಒಕ್ಕೊರಲ ಅಭಿಪ್ರಾಯವನ್ನು ಪ್ರತಿನಿಧಿಸುವ ಹಾಗೂ ಸಮಸ್ಯೆ ನಿವಾರಣೆಗೆ ಕಟಿಬದ್ಧರಾಗಿರುವ ಸಲೀಂ ಅಹ್ಮದ್‌ ಅವರನ್ನು ಚುನಾಯಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಕೋರಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಜನರ ಭಾವನೆಗಳನ್ನು ಗೌರವಿಸುವ ವ್ಯಕ್ತಿತ್ವದ ಸಲೀಂ ಅಹ್ಮದ್‌ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬಹುಮತದ ಗೆಲುವಿಗೆ ಶ್ರಮಿಸೋಣ. ಈ ಮೂಲಕ ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಮುಂದಿನ ತಾಪಂ, ಜಿಪಂ ಚುನಾವಣೆಗೆ ಮುನ್ನುಡಿ ಬರೆಯೋಣ ಎಂದು ಹೇಳಿದರು.

ಮುಖಂಡರಾದ ಸಂಜೀವಕುಮಾರ ನೀರಲಗಿ, ಶ್ರೀಕಾಂತ್‌ ದುಂಡಿಗೌಡ್ರ, ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ, ಷಣ್ಮುಖ ಶಿವಳ್ಳಿ ಮಾತನಾಡಿದರು. ಕಾಂಗ್ರೆಸ್‌ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್‌. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮುಖಂಡರಾದ ಅಲ್ತಾಫ್‌ ಕಿತ್ತೂರು, ನಾಗಪ್ಪ ತಿಪ್ಪಕ್ಕನವರ, ಪ್ರಕಾಶ ಹಾದಿಮನಿ, ಹನುಮರಡ್ಡಿ ನಡುವಿನಮನಿ, ಶಿವಾನಂದ ಬಾಗೂರು, ಗುರುನಗೌಡ ಪಾಟೀಲ, ರಬ್ಬಾನಿ ತರೀನ್‌, ಬಾಗು ಭಗ್ವತಿ, ವಸಂತಾ ಬಾಗೂರು, ಗೌಸ್‌ಖಾನ್‌ ಮುನ್ಸಿ, ಮಂಜುನಾಥ ಮಣ್ಣಣ್ಣವರ, ಹನುಮಂತ ಬಂಡಿವಡ್ಡರ ಉಪಸ್ಥಿತರಿದ್ದರು. ಶ್ರೀಕಾಂತ ಪೂಜಾರ, ಸುಧೀರ ಅಂಗಡಿ, ಎಸ್‌.ಎಫ್‌. ಮಣಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಜನಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಶ್ರಮಿಸುವೆ

ಹಾನಗಲ್ಲ(Hangal):  ಗ್ರಾಪಂ ಸದಸ್ಯರಾದಿಯಾಗಿ ಜನಪ್ರತಿನಿಧಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಗೌರವ ಧನವನ್ನು ಹೆಚ್ಚಿಸುವುದು ನನ್ನ ಆದ್ಯತೆಯಾಗಿದೆ ಎಂದು ವಿಧಾನ ಪರಿಷತ್‌ ಚುನಾವಣಾ ಅಭ್ಯರ್ಥಿ ಸಲೀಂ ಅಹ್ಮದ ಖೇದ ವ್ಯಕ್ತಪಡಿಸಿದರು.

ಮಂಗಳವಾರ ಹಾನಗಲ್ಲಿನ ನೂರಾನಿ ಹಾಲ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಧಾರವಾಡ(Dharwad) ವಿಧಾನ ಪರಿಷತ್‌ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರ(Election Campaign) ಸಭೆಯಲ್ಲಿ ಮಾತನಾಡಿದ ಅವರು, ನನ್ನ ಗೆಲುವಿಗೆ ಜನಪ್ರತಿನಿಧಿಗಳು ಸಹಕರಿಸುವ ಮೂಲಕ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಅಭಿವೃದ್ಧಿಗೆ ಶಕ್ತಿ ತುಂಬಬೇಕು. ಈ ಜಿಲ್ಲೆಗಳ ಜನರ ಧ್ವನಿಯಾಗಿ ಕೆಲಸ ಮಾಡುವೆ. ಪಂಚಾಯಿತಿಗಳಿಗೆ ಅತಿ ಹೆಚ್ಚು ಅಭಿವೃದ್ಧಿ ಅನುದಾನ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುವೆ. ಪಕ್ಷದ ಹಿರಿಯ ನಾಯಕರ ನಿಕಟ ಸಂಪರ್ಕ ಹಾಗೂ ಅವರ ಮಾರ್ಗದರ್ಶನ ಒಳ್ಳೆಯ ಕೆಲಸ ಮಾಡಲು ಸಹಕರಿಸಿದೆ. ಇದರ ಲಾಭವನ್ನು ಈ ಭಾಗದ ಜನತೆಗೆ ಮಾಡಿ ಕೊಡುವೆ ಎಂದರು.

Council Election Karnataka : ಬಿಎಸ್‌ವೈ ಎಂಟ್ರಿ - ಇಲ್ಲೀಗ ಬಿಜೆಪಿಯದ್ದೆ ಗೆಲುವಿನ ನಿರೀಕ್ಷೆ

ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಈಗ ಬಿಜೆಪಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದ್ದು, ಇನ್ನು ಮುಂದಿನ ಚುನಾವಣೆಗಳು ಕಾಂಗ್ರೆಸ್‌ ಗೆಲುವಿನ ಚುನಾವಣೆಗಳು. ಇದಕ್ಕಾಗಿ ಕಾರ್ಯಕರ್ತರು ಮೈಮರೆಯದೆ ಜಾಗ್ರತರಾಗಿರಬೇಕು ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಬಿದ್ದು ಹೋದ ಮನೆಗಳ ಸಮೀಕ್ಷೆ ನೆರೆಹಾವಳಿಯ ನಷ್ಟ, ಬಡವರಿಗೆ ಮನೆ ವಿತರಣೆ, ಶೌಚಾಲಯಗಳ ಬಿಲ್‌ ಪಾವತಿ, ಬೀದಿ ದೀಪ ದುರಸ್ತಿ ಹೀಗೆ ನೂರಾರು ಕೆಲಸಗಳು ಕಾದು ನಿಂತಿವೆ. ಹಾನಗಲ್ಲ ತಾಲೂಕಿನ ಜನರ ಋುಣ ತೀರಿಸಲು ಶಕ್ತಿ ತುಂಬಲು ನನಗೆ ಅತ್ಯಂತ ಸಹಕಾರಿಯಾಗಿರುವ ಸಲೀಂಅಹ್ಮದ ಅವರನ್ನು ಗೆಲ್ಲಿಸಲು ತಾವೆಲ್ಲ ಕೈ ಕೋಡಿಸಿರಿ ಎಂದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌.ಎಸ್‌. ಪಾಟೀಲ, ಪುಟ್ಟಪ್ಪ ನರೇಗಲ್‌, ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಉಪಾಧ್ಯಕ್ಷ ರವಿ ಹನುಮನಕೊಪ್ಪ, ಮುಖಂಡರಾದ ಯಲ್ಲಪ್ಪ ಕಿತ್ತೂರ, ಸತೀಶ ದೇಶಪಾಂಡೆ, ನಿಂಗಪ್ಪ ಪೂಜಾರ, ಯಾಸೀರಖಾನ ಪಠಾಣ, ಹಾಶಂಪೀರ ಇನಾಮದಾರ, ಯಾಸೀರ ಅರಾಫತ ಮಕಾನದಾರ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮಾರುತಿ ಪುರ್ಲಿ, ಕಲವೀರಪ್ಪ ಪವಾಡಿ, ಅನಿತಾ ಶಿವೂರ, ಆರಿಫ್‌ ಲೋಹಾರ, ಫಯಾಜ ಲೋಹಾರ, ರಜಾಖ ಮುಲ್ಲಾ ಮೊದಲಾದವರು ಇದ್ದರು.
 

click me!