
ಅರಕಲಗೂಡು: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಶಿಸ್ತುಪಾಲನಾ ಸಮಿತಿ ಇರುತ್ತದೆ. ಯಾರ್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣಕರ್ತರಾಗುತ್ತಾರೆ. ಇವೆಲ್ಲವೂ ಕೂಡ ಆ ಸಮಿತಿಯಲ್ಲಿ ಚರ್ಚೆಯಾಗುತ್ತವೆ. ಬೀದಿಯಲ್ಲಿ ನಿಂತ್ಕೊಂಡು ಬೀದಿ ರಂಪಾಟ ಮಾಡಿಕೊಂಡು ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಮಾತನಾಡಬೇಡಿ ಅನ್ನೋದಿದೆ. ಮುಂದಿನ ದಿನಗಳಲ್ಲಿ ಇಂತಹವರಿಗೆ ತಿದ್ದಿ ಬುದ್ಧಿ ಹೇಳುತ್ತಾರೆಂಬ ನಂಬಿಕೆ ಹೊಂದಿದ್ದೇನೆ ಎಂದು ಮೈತ್ರಿ ವಿಚಾರದ ಬಗ್ಗೆ ಪ್ರೀತಂಗೌಡ ಹೇಳಿಕೆಗೆ ನಿಖಿಲ್ ತಿರುಗೇಟು ನೀಡಿದರು.
ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ನಿರ್ಮಿಸಿರುವ ದೇವಾಲಯ ಉದ್ಘಾಟನೆಗೆ ಸೋಮವಾರ ಆಗಮಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಜನತಾದಳಪಕ್ಷದ ನಾಯಕತ್ವ ಹಿಡಿದಿರೋದು ಕುಮಾರಣ್ಣನವರು. ದೇವೇಗೌಡ್ರ ಮಾರ್ಗದರ್ಶನದಲ್ಲಿ ಮತ್ತು ರೇವಣ್ಣ ಅವರ ಶಕ್ತಿಯಿಂದ ಚುಕ್ಕಾಣಿ ಹಿಡಿದಿದ್ದಾರೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಇಪ್ಪತ್ತು ವರ್ಷ ಕಳೆದಿದೆ. ಕುಮಾರಣ್ಣ ಕೊಟ್ಟ ಆಡಳಿತವನ್ನು ಜನದಿಂದಲೇ ಕೇಳಿದ್ದೇನೆ. ಈ ಸರ್ಕಾರದ ದುರಾಡಳಿತ, ನಡವಳಿಕೆಯಿಂದ ಜನ ಬೇಸತ್ತಿದ್ದಾರೆ. ಎಲ್ಲೋದ್ರೂ ಜನರು ಕುಮಾರಣ್ಣ ಅಧಿಕಾರ ಹಿಡಿಯಬೇಕು ಎಂದು ಹೇಳುತ್ತಾರೆ. ಇದು ನಮ್ಮ ಕಾರ್ಯಕರ್ತರ ಅಪೇಕ್ಷೆ ಅಷ್ಟೆ ಅಲ್ಲಾ ಜನರ ಅಭಿಪ್ರಾಯ ಕೂಡ ಆಗಿದೆ ಎಂದರು.
"ಎಂಡ್ ಆಫ್ ದಿ ಡೇ ಎನ್ಡಿಎ ಮಿತ್ರಪಕ್ಷದಲ್ಲಿ ಇದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಒಂದಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಹತ್ತೊಂಬತ್ತು ಜನರನ್ನ ಗೆಲ್ಲಿಸಿಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗೋ ವಿಚಾರವನ್ನ ಕಾಲ ಬಂದಾಗ ಬಿಜೆಪಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ" ಎಂದು ಹೇಳಿದರು.
ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡರ ವಿಚಾರಕ್ಕೆ ನಿಖಿಲ್ ಪ್ರತಿಕ್ರಿಯಿಸಿ, ನಿಮ್ಮ ಹತ್ತಿರ ಮುಚ್ಚುಮರೆ ಮಾಡುವುದಕ್ಕೆ ಆಗುವುದಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿರುವ ಕ್ಷೇತ್ರ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಇರಿಸುಮುರಿಸು ತಂದಿರುವುದು ಸತ್ಯ. ಏನೇ ಬಗೆಹರಿಯುವುದಾದರೂ ಕಾಲ ನಿರ್ಣಯ ಮಾಡುತ್ತೆ ಪಕ್ಷದ ವರಿಷ್ಠರು ಇದರ ಬಗ್ಗೆ ಮಾತನಾಡುತ್ತಾರೆ. ಕ್ಷೇತ್ರದ ಗೌರವ ಕಾಪಾಡಲು ಆಯಾ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷದ ನಾಯಕತ್ವದ ಚುಕ್ಕಾಣಿ ಹಿಡಿದಿರುವರು ಕುಮಾರಸ್ವಾಮಿ ಅವರ ನಾಯಕತ್ವ ಈ ರಾಜ್ಯಕ್ಕೆ ಬೇಕು ಎಂದು ಕಾರ್ಯಕರ್ತರು ಬೇಡಿಕೆ ಇಡುತ್ತಿದ್ದಾರೆ. ನಾನು ಕಾರ್ಯಕರ್ತನಾಗಿ ಅದೇ ಅಭಿಪ್ರಾಯವನ್ನು ಮಂಡಿಸುತ್ತೇನೆ. ಮುಂದಿನ ಚುನಾವಣೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತದೆ. ಜನರ ಭಾವನೆ ಕೂಡ ಇದೆ ಆಗಿದೆ ಎಂದು ತಿಳಿಸಿದರು.
ಶಾಸಕ ಎ. ಮಂಜು ಮಾತನಾಡಿ, ಎನ್ಡಿಎ ಮೈತ್ರಿ ಜೊತೆ ಇಬ್ಬರೂ ಇದ್ದೇವೆ. ಏನೇ ಇತ್ಯರ್ಥ ಆದ್ರೂ ನರೇಂದ್ರ ಮೋದಿ, ಕುಮಾರಸ್ವಾಮಿ, ದೇವೇಗೌಡರ ನೇತೃತ್ವದಲ್ಲಿ ಆಗುತ್ತೆ. ಚಿಹ್ನೆ ಮೇಲೆ ನಡೆಯುವ ಚುನಾವಣೆಗಳು ಒಟ್ಟಿಗೋ ಹೋಗಬೇಕು ಎಂಬ ನಿರ್ಣಯ ಆಗಿದೆ. ಕಾರ್ಯಕರ್ತ ಇಚ್ಛೆಯಾಗಿದ್ದು ಇದು ಇಬ್ಬರ ಕೋರ್ ಕಮಿಟಿಯಲ್ಲೂ ತೀರ್ಮಾನ ಆಗಿದೆ. ಅದನ್ನು ಬಿಟ್ಟು ಏಕಾಏಕಿ ಹೇಳೋದು ಸರಿಯಲ್ಲ ಎಂದು ಹಿಂದಿನ ದಿನಗಳಲ್ಲಿ ಅವರು ಹೇಳಿದ ಮಾತನ್ನು ನೆನಪು ಮಾಡಿಕೊಳ್ಳಬೇಕು. 49,999 ವೋಟು ಬಂದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಇಲ್ಲಿ ಯಾರೂ ದೊಡ್ಡೋರಲ್ಲಾ ಮತದಾರರೇ ದೊಡ್ಡೋರು ಪಕ್ಷದ ಹೈಕಮಾಂಡ್ ದೊಡ್ಡೋರು. ಅವರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಪ್ರೀತಂ ಗೌಡ ವಿರುದ್ಧ ಎ. ಮಂಜು ಆಕ್ರೋಶ ವ್ಯಕ್ತಪಡಿಸಿದರು.
ನಾನು ಈಗ ಮಾತಾಡಿದ್ರೆ ಅಗೌರವ ತಂದಹಾಗೆ ಆಗುತ್ತೆ. ಹೈಕಮಾಂಡ್ ತೀರ್ಮಾನವನ್ನ ಪಾಲಿಸಬೇಕು. ಈಗೊಂದು, ಆಗೊಂದು ಮಾತಾಡೋದನ್ನ ನೋಡಿದ್ದೇನೆ. ನಾನು ಬಿಜೆಪಿ ಜೊತೆ ಪಾರ್ಲಿಮೆಂಟ್ಗೆ ನಿಂತಾಗ ಯಾರ ಜೊತೆ ಸಖ್ಯ ಬೆಳೆಸಿದ್ರು, ನನ್ನನ್ನ ಸೋಲಿಸೋಕೆ ಏನೆಲ್ಲಾ ಮಾಡಿದ್ರು, ಪಕ್ಷ ವಿರೋಧಿ ಚಟುವಟಿಕೆ ಹೇಗೆ ಮಾಡಿದ್ರು ನಾನು ದೂರು ಕೊಡಲಿಲ್ಲ ಬದಲಾವಣೆಯಾಗಲಿ ರಾಜಕೀಯ ಶಾಶ್ವತವಲ್ಲ. ಎಲ್ಲೋ ಒಂದ್ ಕಡೆ ಪಕ್ಷವನ್ನು ಬಿಡುವ ತರ ಮಾತನಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಸಿಟ್ಟಿಂಗ್ ಎಂಎಲ್ಎಗಳಿಗೆ ಟಿಕೆಟ್ ಕೊಡಬೇಕು ಅಂತಾ ತೀರ್ಮಾನ ಆಗಿದೆ. ಟಿಕೆಟ್ ಸಿಗೊಲ್ಲ ಅನ್ನೋ ಹತಾಶೆಯಲ್ಲಿ ಹೀಗೆ ಮಾತನಾಡ್ತಿರ್ಬೇಕು. ಎಲ್ಲಾ ವ್ಯಕ್ತಿಗಳಿಗಿಂತ ಪಕ್ಷ ದೊಡ್ಡದು ಎನ್ನೋದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಶಿವಲಿಂಗೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಜೆಡಿಎಸ್ ಶಾಸಕ ಎ ಮಂಜು, ಶಿವಲಿಂಗೇಗೌಡ ಆಡು ಭಾಷೆ ಪದ ಬಳಕೆ ಮಾಡಿದ್ದೇನೆ ಎಂಬ ಹೇಳಿಕೆ ವಿಚಾರಕ್ಕೆ ಆಡು ಭಾಷೆಯಲ್ಲಿ ಮಾತನಾಡೋಕೆ ಅದು ಅರಳಿಕಟ್ಟೆ ಅಲ್ಲ ಅದು ಅಸೆಂಬ್ಲಿ, 4 ಬಾರಿ ಶಾಸಕರಾಗಿರೋ ಶಿವಲಿಂಗೇಗೌಡಗೆ ಹೇಗೆ ಮಾತನಾಡಬೇಕು ಅರಿವೇ ಇಲ್ಲದೇ ಹೋದರೆ ಹೊಸಬರ ಕಥೆ ಹೇಗೆ? ಅವರು ಅಸಂವಿಧಾನಿಕ ಅಶ್ಲೀಲ ಪದ ಬಳಕೆ ಮಾಡಿರೋದು ಇದೇ ಮೊದಲೇನಲ್ಲ, ಮಾತನಾಡಿ ದೊಡ್ಡವನಾಗುತ್ತೇನೆಂದುಕೊಂಡರೆ ಅದು ಅವರ ಸಣ್ಣತನ, ಅವರ ಮಾತುಗಳು ಅವರಿಗೆ ಅಗೌರವ ಅಲ್ಲ ಬದಲಿಗೆ ಅರಸೀಕೆರೆ ಜನರಿಗೆ ತೋರಿದ ಅಗೌರವ. ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗುಂಡು ಹೋಡ್ಕಂಡ್ ಸತ್ತಂಗೆ, ರಾಜಕಾರಣಿಗಳು ಸಾಯಬೇಕಾಗುತ್ತೇ, ಒಬ್ಬ ತಹಸೀಲ್ದಾರ್ ಆಗಿರೋ ಮಹಿಳೆ ಬಗ್ಗೆ ಮಾತನಾಡಿರೋದೇ ತಪ್ಪು, ಯಾರಿಗೆ ಕ್ಷಮೆ ಕೇಳದೆ ಹೋದರು ಪರವಾಗಿಲ್ಲ ಅರಸೀಕೆರೆ ಮತ ಕ್ಷೇತ್ರದ ಜನತೆಗೆ ಕ್ಷಮೆ ಕೇಳಬೇಕು. ಹಳ್ಳಿ ಸೊಗಡಿನ ಬಗ್ಗೆ ಮಾತನಾಡೋಕೆ ಅದು ಅರಳಿಕಟ್ಟೆ ಅಲ್ಲ ಅಸೆಂಬ್ಲಿ. ಒಬ್ಬ ಶಾಸಕರಾಗಿ ಹಾಗೆ ಮಾತನಾಡೋದು ಶೋಭೆ ಅಲ್ಲ ಇದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.