
ಬೆಂಗಳೂರು(ಜು.25): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್ ಮಂಡನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವ ಇಲಾಖೆಗಳಿಗೆ ಸೂಕ್ತ ಅನುದಾನ ನೀಡದೇ, ಗ್ಯಾರಂಟಿಗಳ ಜಾರಿಗಾಗಿ ಎಸ್ಸಿ-ಎಸ್ಟಿಸಮುದಾಯಕ್ಕೆ ಮೀಸಲಿಟ್ಟಅನುದಾನ ವರ್ಗಾವಣೆ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿ ವೇಗಕ್ಕೆ ಬ್ರೇಕ್ ಹಾಕಿದ್ದಾರೆ.
ಕೃಷಿಗೆ ಸಿಗದ ಬೆಂಬಲ
ಈ ಸರ್ಕಾರ ಕೃಷಿಗೆ ಯಾವುದೇ ರೀತಿಯ ಬೆಂಬಲವನ್ನೂ ಕೊಟ್ಟಿಲ್ಲ. ಫೆಬ್ರವರಿ ತಿಂಗಳಲ್ಲಿ ನಮ್ಮ ಬಜೆಟ್ನಲ್ಲಿ ಕೃಷಿಗೆ 9456 ಕೋಟಿ ರು. ಮೀಸಲಿಟ್ಟಿದ್ದನ್ನು ಕಡಿತಗೊಳಿಸಿ 5860 ಕೋಟಿ ರು.ಗೆ ಇಳಿಸಿದ್ದಾರೆ. ಇದು ರೈತ ವಿರೋಧಿ ನೀತಿ. ನಮ್ಮ ಸರ್ಕಾರ ಪ್ರಾರಂಭ ಮಾಡಿರುವ ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆ ಹಾಗೂ ಫೆಬ್ರವರಿ ಬಜೆಟ್ನಲ್ಲಿ ಘೋಷಿಸಿರುವ ಭೂಸಿರಿ ಯೋಜನೆ, 56 ಲಕ್ಷ ಸಣ್ಣ ರೈತರಿಗೆ 180 ಕೋಟಿ ರು. ಮೊತ್ತದ ಜೀವನಜ್ಯೋತಿ ವಿಮಾ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ 2013-18ರವರೆಗೆ 4257 ರೈತರ ಆತ್ಮಹತ್ಯೆಯಾಗಿದೆ.
ಸಾಲದ ಶೂಲಕ್ಕೆ ತಳ್ಳುವ ರಿವರ್ಸ್ ಗೇರ್ ಬಜೆಟ್: ಮಾಜಿ ಸಿಎಂ ಬೊಮ್ಮಾಯಿ
ಜಲ ಸಂಪನ್ಮೂಲಕ್ಕಿಲ್ಲ ಅನುದಾನ
ಜಲ ಸಂಪನ್ಮೂಲ ಇಲಾಖೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಇಲಾಖೆಗೆ ಸುಮಾರು 3500 ಕೋಟಿ ರು. ಕಡಿಮೆ ಮಾಡಿದ್ದಾರೆ. ಎಸ್ಸಿಪಿ-ಟಿಎಸ್ಪಿ ಯೋಜನೆ ಅಡಿ ನಮ್ಮ ಅವಧಿಯಲ್ಲಿ ಜಲ ಸಂಪನ್ಮೂಲ ಇಲಾಖೆಗೆ 1700 ಕೋಟಿ ರು. ಒದಗಿಸಿದ್ದೆವು. ನೀವು ಕೇವಲ 100 ಕೋಟಿ ರು. ನೀಡಿದ್ದೀರಿ.
ಯುಕೆಪಿಗೆ ಆದ್ಯತೆ ನೀಡಿಲ್ಲ. ಎತ್ತಿನಹೊಳೆ ಯೋಜನೆಗೆ ಕೇವಲ 960 ಕೋಟಿ ಮಾತ್ರ ಇಟ್ಟಿದ್ದೀರಿ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕಡಿಮೆ ಮಾಡಿದ್ದೀರಿ. ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನಕ್ಕೆ ಈ ವರ್ಷ ಹಣ ಇಲ್ಲ ಅಂತ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ!
ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿ, ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ ್ಯ ಮಾಡಿದ್ದಾರೆ. ನಮ್ಮ ಬಜೆಟ್ನಲ್ಲಿ ಶಾಲಾ ಮಕ್ಕಳಿಗೆ 1000 ಹೊಸ ಬಸ್ ನಿಡುವುದಾಗಿ ನಾವು ಹೇಳಿದ್ದೆವು. ಅದನ್ನು ಕೈ ಬಿಡಲಾಗಿದೆ. ಪದವಿವರೆಗೂ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡುವುದಾಗಿ ನಾವು ಘೋಷಿಸಿದ್ದೆವು.
ಕಳೆದ ವರ್ಷ ಅನುಮೋದನೆಯಾದ 8000 ಸ್ಕೂಲು ಕಾಲೇಜು ರೂಮುಗಳನ್ನು ಮಾತ್ರ ಪೂರ್ಣಗೊಳಿಸುತ್ತಿದ್ದೀರಿ. ಈ ವರ್ಷ ಯಾವುದೇ ಹೊಸ ಕೊಠಡಿ ನಿರ್ಮಾಣ ಮಾಡುತ್ತಿಲ್ಲ. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಾನು 250 ಕೋಟಿ ರು. ಮೀಸಲಿಟ್ಟಿದ್ದೆ. ನೀವು ಅದನ್ನು ಎನ್ಆರ್ಇಜಿಗೆ ಸೇರಿಸಿದ್ದೀರಿ. ಇದರಿಂದ ಯಾವುದೇ ಪ್ರಗತಿ ಮಾಡಲು ಸಾಧ್ಯವಿಲ್ಲ. ಇನ್ನು ಎನ್ಇಪಿ ರದ್ದು ಮಾಡಿರುವುದು ಅತ್ಯಂತ ಆಘಾತಕಾರಿ. ಐದು ಎಂಜಿನಿಯರಿಂಗ್ ಕಾಲೇಜು ಐಐಟಿಗೆ ಅಪ್ಗ್ರೇಡ್ ಮಾಡಿರುವುದನ್ನು ಕೈಬಿಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಾವು ಜಾರಿಗೆ ತಂದಿದ್ದ ಸ್ತ್ರೀ ಸಾಮರ್ಥ್ಯ ಯೋಜನೆ, ಸಂಜೀವಿನಿ ಯೋಜನೆಯನ್ನು ಪೂರ್ಣ ಕೈಬಿಡಲಾಗಿದೆ. ಈ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಾರಿಗೆ ಸುಮಾರು 30 ಸಾವಿರ ಕೋಟಿ ರು. ಅಗತ್ಯವಿದೆ ಎಂದು ಹೇಳಿ ವಾಸ್ತವಿಕವಾಗಿ ಬಜೆಟ್ನಲ್ಲಿ 24 ಸಾವಿರ ಕೋಟಿ ರು. ಮಾತ್ರ ಒದಗಿಸಿದ್ದು, ಈ ಯೋಜನೆಯ ಅನುಷ್ಠಾನದ ಬಗ್ಗೆ ಅನುಮಾನ ಮೂಡುವಂತಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ನಾವು 5000 ಕೋಟಿ ರು. ಅನುದಾನ ಕೊಟ್ಟಿದ್ದೆವು, ನೀವೂ ಕೊಟ್ಟಿರುವುದು ಸ್ವಾಗತಾರ್ಹ. ಆದರೆ, ನಿಮ್ಮ ಹಿಂದಿನ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಯಾವತ್ತೂ ಮೀಸಲಿಟ್ಟಹಣ ಬಳಕೆ ಮಾಡಿಲ್ಲ. ಬಜೆಟ್ ಗಾತ್ರ ಹೆಚ್ಚಾಗಿರುವುದರಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕನಿಷ್ಠ 7000 ಸಾವಿರ ಕೋಟಿ ರು. ಮಿಸಲಿಡಬೇಕಿತ್ತು.
ನಮ್ಮ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಬಗ್ಗೆ ಈ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು, ಅದಕ್ಕೆ ಅನುದಾನ ನೀಡಬೇಕು.
ಆರ್ಡಿಪಿಆರ್ ಅನುದಾನ ಕಡಿತ
ಆರ್ಡಿಪಿಆರ್ ಇಲಾಖೆಯ ಅನುದಾನವನ್ನು 20 ಸಾವಿರದಿಂದ 18 ಸಾವಿರಕ್ಕೆ ಇಳಿಸಲಾಗಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮ ಪಂಚಾಯತಿ ಅನುದಾನ ಹೆಚ್ಚಳ ಮಾಡಿದ್ದೆವು. ಅದನ್ನು ಕಡಿಮೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡುವಲ್ಲಿ ಈ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಕಂಡುಬರುತ್ತಿದೆ.
ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ
ಗ್ಯಾರಂಟಿಗಳಿಗೆ ಎಸ್ಸಿಪಿ-ಟಿಎಸ್ಪಿ ಹಣ
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರವೇ ಬಜೆಟ್ನಲ್ಲಿ ಹೇಳಿರುವಂತೆ ಸುಮಾರು 57 ಸಾವಿರ ಕೋಟಿ ರು. ಅಗತ್ಯವಿದೆ. ಅಷ್ಟೊಂದು ಹಣ ಒದಗಿಸಲು ರಾಜ್ಯ ಸರ್ಕಾರ ಪರದಾಡುವಂತಾಗಿದ್ದು, ಅಬಕಾರಿ ಸೇರಿದಂತೆ ಎಲ್ಲ ತೆರಿಗೆಗಳನ್ನು ಹೆಚ್ಚಳ ಮಾಡಿದರೂ, ಹಣ ಹೊಂದಿಸಲು ರಾಜ್ಯ ಸರ್ಕಾರ ಕಾನೂನು ಬಾಹಿರ ಮಾರ್ಗ ಅನುಸರಿಸುತ್ತಿದೆ. ಎಸ್ಸಿಪಿ-ಟಿಎಸ್ಪಿ ಯೋಜನೆ ಅಡಿ, ಜಲ ಸಂಪನ್ಮೂಲ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಎಸ್ಸಿಪಿ, ಟಿಎಸ್ಪಿಯ ಸುಮಾರು 13000 ಕೋಟಿ ರು. ವರ್ಗಾಯಿಸಿದ್ದು, ಎಸ್ಸಿ-ಎಸ್ಟಿಸಮುದಾಯಕ್ಕೆ ಮಾಡುವ ಘೋರ ಅನ್ಯಾಯವಾಗಿದೆ.
ಇನ್ನು ಪ್ರವಾಸೋದ್ಯಮ ಇಲಾಖೆಗೆ ನಾವು 425 ಕೋಟಿ ರು. ಮೀಸಲಿಟ್ಟಿದ್ದೆವು. ಆದರೆ, ಈ ಸರ್ಕಾರ ಅದನ್ನು 381 ಕೋಟಿ ರು.ಗೆ ಇಳಿಕೆ ಮಾಡಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದೆ.
ಕಾಂಗ್ರೆಸ್ನ 5 ಗ್ಯಾರಂಟಿಗಳ ಜಾರಿಗೆ ಸರ್ಕಾರವೇ ಬಜೆಟ್ನಲ್ಲಿ ಹೇಳಿರುವಂತೆ 57 ಸಾವಿರ ಕೋಟಿ ರು. ಅಗತ್ಯವಿದೆ. ತೆರಿಗೆ ಹೆಚ್ಚಿಸಿದ ಮೇಲೂ ಈ ಹಣ ಹೊಂದಿಸಲಾಗದೆ, ಈಗ ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಹಣವನ್ನು ಬಳಸುವ ಮೂಲಕ ಕಾನೂನು ಬಾಹಿರ ಮಾರ್ಗವನ್ನು ಸರ್ಕಾರ ಅನುಸರಿಸುತ್ತಿದೆ. ಕೃಷಿ, ನೀರಾವರಿ, ಶಿಕ್ಷಣ ಕ್ಷೇತ್ರಗಳನ್ನು ಕಡೆಗಣಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.