ಮೊದಲು ಕಾಂಗ್ರೆಸ್‌ ಗೆಲ್ಲಲಿ, ಆಮೇಲೆ ಫ್ರೀ ವಿದ್ಯುತ್‌ ಕೊಡಲಿ: ಬಿ.ಎಲ್‌.ಸಂತೋಷ್‌

By Kannadaprabha NewsFirst Published Jan 20, 2023, 11:48 AM IST
Highlights

ಪ್ರತಿ ಮನೆಗೂ ಉಚಿತ ವಿದ್ಯುತ್‌ ನೀಡುತ್ತೇವೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಮೊದಲು ಅವರು ಅಧಿಕಾರಕ್ಕೆ ಬರಲಿ, ಉಳಿದದ್ದು ಆಮೇಲೆ ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವ್ಯಂಗ್ಯವಾಡಿದರು.

ಚಿಕ್ಕಬಳ್ಳಾಪುರ (ಜ.20): ಪ್ರತಿ ಮನೆಗೂ ಉಚಿತ ವಿದ್ಯುತ್‌ ನೀಡುತ್ತೇವೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಮೊದಲು ಅವರು ಅಧಿಕಾರಕ್ಕೆ ಬರಲಿ, ಉಳಿದದ್ದು ಆಮೇಲೆ ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವ್ಯಂಗ್ಯವಾಡಿದರು. ನಗರದಲ್ಲಿ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದಿಂದ ಶಕ್ತಿಕೇಂದ್ರದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪ್ರತಿ ಮನೆಗೆ ವಿದ್ಯುತ್‌ ನೀಡಲು, ಪ್ರತಿ ಮನೆಗೆ ಶೌಚಾಲಯ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಬರಬೇಕಾಯಿತು. 

ಕಾಂಗ್ರೆಸ್ಸಿಗರು ಎಂದಿಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಎದ್ದರೂ, ಕೂತರೂ ಟಿಪ್ಪು ಜಪ ಮಾಡುತ್ತಾರೆ ಎಂದರು. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಸಿಕ್ಕ ಪೂರ್ಣ ಬಹುಮತ ರಾಜ್ಯದಲ್ಲಿ ಬಿಜೆಪಿಗೆ ಸಿಕ್ಕಿದ್ದರೆ ಯಡಿಯೂರಪ್ಪ ಇನ್ನಷ್ಟುಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿತ್ತು. ನಮ್ಮಲ್ಲಿನ ಹಲವು ತಪ್ಪುಗಳಿಂದ ರಾಜ್ಯದಲ್ಲಿ ಯಡಿಯೂರಪ್ಪ ಅವರು ಎರಡು ಬಾರಿ ಮುಖ್ಯಮಂತ್ರಿಯಾದರೂ ಸಮಾಧಾನದಿಂದ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ ಎಂದರು.

ಮೋದಿ ರಾಜ್ಯ ಭೇಟಿ ಲಗೋರಿ, ಖೋ ಖೋ ಇದ್ದಂತೆ: ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

ಯಾರು ಯಾರಿಗೂ ಟಿಕೆಟ್‌ ಬಗ್ಗೆ ಭರವಸೆ ಕೊಡಬೇಡಿ: ಮುಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಕಾರ್ಯಕರ್ತರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ಜೀ ಕರೆ ನೀಡಿದರು. ನಗರ ಹೊರವಲಯದ ರತ್ನ ಕನ್ವೆನ್ಷನ್‌ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಪರವಾಗಿ ಅಕಾಂಕ್ಷಿಗಳಿಗೆ ಟಿಕೆಟ್‌ ಘೋಷಣೆ ಮಾಡುವುದಾಗಲಿ, ಆಣೆ ಪ್ರಮಾಣ ಮಾಡುವುದಾಗಲಿ ಯಾರೂ ಮಾಡಬಾರದು, ಚುನಾವಣೆ ಟಿಕೆಟ್‌ ಹಂಚಿಕೆಯು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಿತಿಗಳಿಂದ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಯಾರೂ ಸಹ ಕೊನೆಯವರೆಗೂ ಆಶ್ವಾಸನೆಗಳು, ಭರವಸೆಗಳು ನೀಡಬಾರದು ಎಂದರು.

ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ ಅಲ್ಲ: ತಾವು ಸಭೆಗೆ ಬರುವ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಸ್ವಾಗತ ಕೋರುವ ಸ್ವಾಗತ ಕಮಾನುಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸುವುದು ಇವೆಲ್ಲವು ನಮ್ಮ ಪಕ್ಷದ ಸಂಸ್ಕೃತಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಿಎಂ ಅಥವಾ ಸಚಿವರು ಬಂದರೆ ಪಟಾಕಿ ಹಚ್ಚುವುದು ಹಾಗೂ ಸ್ವಾಗತ ಕೋರುವ ಕಮಾನುಗಳನ್ನು ಅಳವಡಿಸುವುದು ಸರಿ. ಆದರೆ ನಾವು ಸಂಘಟನೆಯವರು ನಾವು ಬಂದಾಗ ಪಟಾಕಿ ಹಚ್ಚುವುದು ಸರಿಯಲ್ಲ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ

ಪಕ್ಷದ ಸಂಘಟನೆಗೆ ಆದ್ಯತೆ: ಕೇಂದ್ರ ಸರ್ಕಾರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಪಕ್ಷದ ಸಂಘಟನೆಗೆ ಎಲ್ಲರೂ ಪ್ರಥಮ ಅದ್ಯತೆ ನೀಡಬೇಕು, ಪಕ್ಷವೆಂದರೆ ಸಣ್ಣಪುಟ್ಟ ಭಿನ್ನಾಪ್ರಾಯಗಳಿರುತ್ತದೆ ಅವುಗಳನ್ನೆಲ್ಲಾ ಅಂತರಿಕ ಸಭೆಗಳಲ್ಲಿ ಪರಿಹರಿಸಿ ಕೊಳ್ಳಬೇಕು ಹೊರತು ಬೀದಿಗೆ ಬರಬಾರದು, ಬೂತ್‌ ಮಟ್ಟದಿಂದ ಕಾರ್ಯಕರ್ತರು ಪಕ್ಷವನ್ನು ಸಂಘಟನೆ ಮಾಡಿ ಸಮಿತಿಗಳನ್ನು ರಚಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಯಾರೂ ಶಾಸಕರಾಗಿ ಆಯ್ಕೆಯಾಗಿರಲಿಲ್ಲ, ಇದೀಗ ನಮ್ಮ ಸಂಸದರು 2 ಲಕ್ಷ ಮತಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ, ಜಿಲ್ಲೆಯಲ್ಲಿ ಕನಿಷ್ಠ ಪಕ್ಷ ಮೂರ್ನಾಲ್ಕು ಸೀಟುಗಳನ್ನು ಗೆಲ್ಲಲ್ಲೇಬೇಕು ಎಂದು ಹೇಳಿದರು.

click me!