ವಿಧಾನಸಭೆ, ಮೇಲ್ಮನೆಯಲ್ಲಿ ಮುಡಾ ಅಕ್ರಮ ಕೋಲಾಹಲ: ಸದನದಲ್ಲಿ ರಾತ್ರಿಯಿಡೀ ಧರಣಿ

By Kannadaprabha NewsFirst Published Jul 25, 2024, 9:12 AM IST
Highlights

ಉಭಯ ಸದನಗಳಲ್ಲಿ ನಿಲು ವಳಿ ಸೂಚನೆ ಮಂಡಿಸಿದ ಬಿಜೆಪಿ ಸದಸ್ಯರು, 'ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದಾರೆ. ಇದು ಒಟ್ಟಾರೆ ಸಾವಿರಾರು ಕೋಟಿ ರು.ಗಳ ಅಕ್ರಮವಾಗಿದ್ದು ಚರ್ಚೆಗೆ ಅವಕಾಶ ನೀಡಬೇಕು' ಎಂದು ಆಗ್ರಹಿಸಿದರು. 

ವಿಧಾನಸಭೆ (ಜು.25): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಹೆಸರು ತಳುಕು ಹಾಕಿಕೊಂಡಿರುವ ಮುಡಾ ನಿವೇಶನ ಅಕ್ರಮ ಹಂಚಿಕೆ ಆರೋಪ ಪ್ರಕರಣ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿದ್ದು, ಈ ಬಗ್ಗೆ ಬಿಜೆಪಿ ಮಂಡಿಸಿದ್ದ ನಿಲುವಳಿಯನ್ನು ಎರಡೂ ಸದನಗಳಲ್ಲೂ ತಿರಸ್ಕರಿಸಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. 

ಬುಧವಾರ ಉಭಯ ಸದನಗಳಲ್ಲಿ ನಿಲು ವಳಿ ಸೂಚನೆ ಮಂಡಿಸಿದ ಬಿಜೆಪಿ ಸದಸ್ಯರು, 'ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದಾರೆ. ಇದು ಒಟ್ಟಾರೆ ಸಾವಿರಾರು ಕೋಟಿ ರು.ಗಳ ಅಕ್ರಮವಾಗಿದ್ದು ಚರ್ಚೆಗೆ ಅವಕಾಶ ನೀಡಬೇಕು' ಎಂದು ಆಗ್ರಹಿಸಿದರು. ಆದರೆ, ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಹೇಳಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು. 

Latest Videos

ಬುಡಾ ಅವ್ಯವಹಾರದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಸಚಿವ ಬೈರತಿ ಸುರೇಶ್‌

ಇದರಿಂದ ಅಸಮಾಧಾನಗೊಂಡ ಪ್ರತಿಪಕ್ಷ ಗಳ ಸದಸ್ಯರು ಸ್ಪೀಕರ್ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿ ಸಿದರು. ಈ ವೇಳೆ ಪ್ರತಿಪಕ್ಷ, ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾ ಗಿದ್ದು, ಉಭಯ ಸದನಗಳಲ್ಲಿ ಬಹುತೇಕ ಅರ್ಧ ದಿನದ ಕಲಾಪ ಬಲಿಯಾಯಿತು. ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಆರು ವಿಧೇಯಕ ಮಂಡನೆ ಸರ್ಕಾರವು ಮಾಡಿ ಮೂರು ವಿಧೇಯಕಗಳಿಗೆ ಅಂಗೀಕಾರ ಪಡೆಯಿತು. ಬಳಿಕವೂ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ಭಜನೆ: ಮುಡಾ ಹಗರಣ ಸಂಬಂಧ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದ ಕ್ರಮವನ್ನು ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ವಿರುದ್ಧ ಧಿಕ್ಕಾರ ಕೂಗುತ್ತಾ, ಹನುಮಾನ್‌ ಚಾಲೀಸಾ, ರಾಮನ ಭಜನೆ ಮಾಡಿದರು.

ಬುಧವಾರ ಸದನದ ಕಲಾಪ ಮುಗಿದ ಬಳಿಕ ಬಿಜೆಪಿ-ಜೆಡಿಎಸ್‌ ಸದಸ್ಯರು ಸರ್ಕಾರ ವಿರುದ್ಧ ಧಿಕ್ಕಾರದ ಪೋಸ್ಟರ್‌ಗಳನ್ನು ಹಿಡಿದು ಪ್ರದರ್ಶಿಸಿದರು. ಇನ್ನು, ಕಡತ ಪರಿಶೀಲನೆ ಮಾಡುತ್ತ ಸದನದೊಳಗೆ ಕುಳಿತಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು‘ನಿಮಗೆ ಬಹಳ ಖುಷಿಯಾಗುತ್ತಿದೆ ಅಲ್ಲವೇ? ಮುಖ ಶೈನಿಂಗ್‌ ನೋಡಿ, ಪಾರ್ಟಿ ಕೊಡಿಸಿ ಎಂದು ಕಾಲೆಳೆದರು. ಬಿಜೆಪಿ ಶಾಸಕರ ಈ ಮಾತು ಕೇಳಿಸಿಕೊಂಡು ಶಿವಕುಮಾರ್ ನಕ್ಕು, ಸದನದಿಂದ ಹೊರನಡೆದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ಶ್ರೀರಾಮನ ಭಜನೆ ಮಾಡಲಾರಂಭಿಸಿದರು.

ಎಂಡಿಎ ವತಿಯಿಂದ ಎಚ್‌ಡಿಕೆ ಗೃಹ, ವಾಣಿಜ್ಯಕ್ಕೆ ನಿವೇಶನ ಪಡೆದಿಲ್ಲ: ಸಾ.ರಾ.ಮಹೇಶ್ ಸ್ಪಷ್ಟನೆ

ಸರ್ಕಾರದ ಊಟ ನಿರಾಕರಿಸಿದ ಬಿಜೆಪಿ: ಇನ್ನು ಬಿಜೆಪಿ-ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿ ಕುಳಿತಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಭೇಟಿ ನೀಡಿ ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆದರೆ, ಸದಸ್ಯರು ಸರ್ಕಾರದ ಊಟವನ್ನು ನಿರಾಕರಿಸಿ, ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ. ರಾತ್ರಿಯ ಊಟ, ಹಾಸಿಗೆ ವ್ಯವಸ್ಥೆ ತಾವೇ ಮಾಡಿಕೊಳ್ಳುವುದಾಗಿ ಹೇಳಿದರು. ಬಳಿಕ ಸದಸ್ಯರಿಗೆ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡುವ ಹೊಣೆಯನ್ನು ಸಿ.ಕೆ.ರಾಮಮೂರ್ತಿ ಅವರಿಗೆ ನೀಡಿದರು.

click me!