
ಮಂಡ್ಯ, (ನ.24): ರಾಜಕೀಯ ಪಕ್ಷಗಳ ನಡುವೆ ಪ್ರತಿಷ್ಠೆಯ ಕಣವಾಗಿರುವ ವಿಧಾನಪರಿಷತ್ ಚುನಾವಣೆ ರಂಗೇರಿದೆ. ಈಗಾಗಲೇ ಮತದಾರರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳು ಮತದಾರರ ಓಲೈಕೆಗೆ ನಾನಾ ರೀತಿಯ ಕಸರತ್ತನ್ನು ನಡೆಸುತ್ತಿದ್ದಾರೆ.
ಅದರಲ್ಲೂ ಮಂಡ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಇದರ ಮಧ್ಯೆ ಮಂಡ್ಯದ ಪಕ್ಷೇತರ ಸಂಸದೇ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್, ಬಿಜೆಪಿ ಹಾಗೂ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
MLC Election: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಿಂದ ಕುಟುಂಬ ಕಲ್ಯಾಣ
ಸುಮಲತಾ ಅಂಬರೀಶ್ ಮಂಡ್ಯದಲ್ಲಿ ತಮ್ಮ ಬೆಂಬಲ ಯಾವ ಪಕ್ಷಕ್ಕೆ ನೀಡಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಅದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಒಂದು ಪಕ್ಷಕ್ಕೆ ಬೆಂಬಲ ಕೊಟ್ಟರೆ ಅದು ವಿವಾದ ಸೃಷ್ಟಿಸುತ್ತದೆ, ಮಂಡ್ಯ ಜಿಲ್ಲೆಗೆ ಯಾರು ಅಭಿವೃದ್ದಿ ಕೆಲಸ ಮಾಡುತ್ತಾರೋ ಅವರಿಗೆ ವೋಟ್ ಹಾಕುವೆ ಎಂದು ಸ್ಪಷ್ಟಪಡಿಸಿದರು.
ಈ ಬಾರೀ ಯಾರಿಗೂ ಬೆಂಬಲ ನೀಡುವುದಿಲ್ಲ, ಇದು ಚುನಾಯಿತ ಸದಸ್ಯರಿಂದ ನಡೆಯುವ ಚುನಾವಣೆ, ನಾನು ಎಲ್ಲಿಗೂ ಕೂಡ ಬರುವುದಿಲ್ಲ, ನನ್ನನ್ನು ಸಂಪರ್ಕಿಸಿ ಬೆಂಬಲ ನೀಡಿದವರಿಗೆ ಶುಭಾಶಯ ಅಷ್ಟೇ ಹೇಳಲಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್- ಬಿಜೆಪಿಗೆ ಶಾಕ್ ಕೊಟ್ಟರು.
ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಸುಮಲತಾ ಅವರಿಗೆ ಬೆಂಬಲ ಸೂಚಿಸಿತ್ತು. ಈಗ ಪರಿಷತ್ ಚುನಾವಣೆಯಲ್ಲಿ ಸುಮಲತಾ ಅವರು ನಮಗೆ ಬೆಂಬಲ ಕೊಡ್ತಾರೆ ಎಂದು ಬಿಜೆಪಿ ವಿಶ್ವಾಸದಲ್ಲಿತ್ತು. ಆದ್ರೆ, ಸುಮಲತಾ ಯಾವ ಪಕ್ಷಕ್ಕೂ ಬಹಿರಂಗ ಬೆಂಬಲ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.
ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಆಯ್ಕೆಯಿಂದ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಮೇದುದಾರರಾಗಿ ದಿನೇಶ್ ಗೂಳಿಗೌಡ ಅವರು ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಮಂಜು ಕೆ.ಆರ್.ಪೇಟೆ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್ನಿಂದ ಹಾಲಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡ ಅವರು ಅಖಾಡದಲ್ಲಿದ್ದಾರೆ.
25 ಸ್ಥಾನಗಳಿಗೆ 215 ನಾಪತ್ರ
ನಾಮಪತ್ರಗಳು ಕೊನೆ ದಿನ ಅಂತ್ಯವಾಗಿದ್ದು, ಒಟ್ಟು 25 ಸ್ಥಾನಗಳಿಗೆ 215 ನಾಪತ್ರಗಳು ಸಲ್ಲಿಕೆಯಾಗಿವೆ. , ವಾಪಸ್ ಪಡೆಯಲು ನ.26ರವರೆಗೂ ಕಾಲಾವಕಾಶವಿದೆ.
ಡಿ.10ರಂದು ಮತದಾನ ನಡೆಯುವ ಮೇಲ್ಮನೆ ಚುನಾವಣೆಗೆ ಕಣದಲ್ಲಿ ಉಳಿದಿರುವ ಅಂತಿಮ ಪಟ್ಟಿಯನ್ನು ನ.26ರಂದು ಪ್ರಕಟಿಸಲಾಗುತ್ತದೆ. ರಾಜ್ಯದ 25 ಕ್ಷೇತ್ರಗಳಲ್ಲಿ 119 ಪುರುಷರು, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಮಹಿಳಾ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ.
ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.