
ಹರಿಹರ (ಫೆ.3) : ದೇಶದಲ್ಲಿ ಬಡತನ ನಿವಾರಣೆಯಾಗಿದ್ದರೆ ಅದು ನೆಹರೂ ಅವರ ಪ್ರಯತ್ನದ ಫಲ ಅದಕ್ಕೆ ಬಿಜೆಪಿ ಎಳ್ಳಷ್ಟುಕಾರಣವಲ್ಲ, ಸ್ವಾತಂತ್ರ್ಯ ನಂತರ ದೇಶವನ್ನಾಳಿದ ಸರ್ಕಾರಗಳು ಇದಕ್ಕೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಂಚರತ್ನ ಯಾತ್ರೆ ನಿಮಿತ್ತ ನಗರದ ಗಾಂಧಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಕೊಡುಗೆಗಳು ಅಪಾರ, ಆದರೆ ಈಗಿನ ಕಾಂಗ್ರೆಸ್ ಪಕ್ಷವೇ ಬೇರೆ, ಇದು ವಲಸಿಗರಿಂದ ತುಂಬಿದ್ದು ನಿಜವಾದ ಕಾಂಗ್ರೆಸ್ ಪಕ್ಷವಲ್ಲ ಎಂದರು. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೀಡಾದಾಗ, ನೆರೆ ಹಾವಳಿ ಸಂಭವಿಸಿದಾಗ ರಾಜ್ಯಕ್ಕೆ ಬಾರದ ಮೋದಿ ಈಗ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಉಜ್ವಲ ಯೋಜನೆಯಲ್ಲಿ ಮೊದಲ ಸಿಲಿಂಡರ್ ಮಾತ್ರ ಉಚಿತ ನೀಡಿ ನಂತರ 1,100ಕ್ಕೆ ಬೆಲೆ ಏರಿಸಿದ್ದು, ಇದರಿಂದ ಏನು ಉಪಯೋಗವಾಯಿತು ಎಂದು ಪ್ರಶ್ನಿಸಿದರು.
ಸಾಲಮನ್ನಾ ಆಗಿದ್ದರೂ ಖಾತೆಗೆ ಹಣ ಜಮಾ ಆಗಿಲ್ಲ: ಬಿಜೆಪಿ ಸರ್ಕಾರದ ವಿರುದ್ಧ ಎಚ್ಡಿಕೆ ಗರಂ
ಕುಮಾರಣ್ಣಗೆ ರೈತರ ಚಿಂತೆ:
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಯಡಿಯೂರಪ್ಪಗೆ ಮೋದಿ ಚಿಂತೆ, ಸಿದ್ದರಾಮಯ್ಯಗೆ ಸೋನಿಯಾ ಚಿಂತೆ, ಕುಮಾರಣ್ಣನಿಗೆ ರೈತರ ಚಿಂತೆ. ರೈತರ ಸಂಕಷ್ಟಗಳು ಮೋದಿ, ಅಮಿತ್ ಶಾಗೆ ಗೊತ್ತಿರಲು ಸಾಧ್ಯವೇ ಎಂದು ಪ್ರಶ್ನಿಸಿದರು. 25 ಸಂಸದರು ರಾಜ್ಯಕ್ಕೆ ಏನೂ ತಂದಿಲ್ಲ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. 2022 ರಲ್ಲಿ ನವ ನಗರಗಳು ಇಲ್ಲ, 2 ಕೋಟಿ ಉದ್ಯೋಗ ಎಲ್ಲಿವೆ. ಸ್ವಯಂ ಉದ್ಯೋಗಕ್ಕೂ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದರು. ಕುಮಾರಸ್ವಾಮಿ ಎಂದೂ ಮಾತು ತಪ್ಪಿದವರಲ್ಲ, 92ನೇ ವಯಸ್ಸಿನಲ್ಲೂ ದೇವೇಗೌಡರು ರಾಜ್ಯ ಸಂಚಾರ ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬ ಸರ್ವಸ್ವವನ್ನೂ ರಾಜ್ಯಕ್ಕೆ ತ್ಯಾಗ ಮಾಡಿದ್ದಾರೆ. ಕರ್ನಾಟಕ ಶರಣರ ನಾಡು, ಬಿಜೆಪಿ ಆಟಕ್ಕೆ ಅವಕಾಶ ಕೊಡದೆ ಜೆಡಿಎಸ್ ಬೆಂಬಲಿಸಬೇಕು ಎಂದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಪ್ರಸಕ್ತ ಚುನಾವಣೆಯಲ್ಲಿ ತಾವು 50 ಸಾವಿರ ಮತಗಳ ಅಂತರದಲ್ಲಿ ಗೆಲುವು ವಿಶ್ವಾಸವಿದೆ. ಎರಡು ದಿನ ತಾಲೂಕಿನಲ್ಲಿ ಸಂಚರಿಸಿದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಭಾರಿ ಜನಬೆಂಬಲ ದೊರೆತಿದ್ದು, ಕ್ಷೇತ್ರದ ಮತದಾರರು ಅತ್ಯಧಿಕ ಮತದಿಂದ ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಜವಾದ ಜನಪರ ಆಡಳಿತ ಜೆಡಿಎಸ್, ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯ, ತಮ್ಮನ್ನು ಆಯ್ಕೆ ಮಾಡುವ ಮೂಲಕ ಕುಮಾರಸ್ವಾಮಿಯವರ ಕೈ ಬಲಪಡಿಸಬೇಕೆಂದು ಕೋರಿದರು.
ಮಾಜಿ ಸಚಿವ ನಬಿ, ವಿಧಾನ ಪರಿಷತ್ ಸದಸ್ಯ ಭೋಜೆಗೌಡಿ, ಮಾಜಿ ಸದಸ್ಯ ರಮೇಶ್ಗೌಡ, ಜಿಲ್ಲಾಧ್ಯಕ್ಷ ಚಿದಾನಂದಪ್ಪ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಮಾನುಲ್ಲಾ ಇತರರಿದ್ದರು.
ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಶಾಸಕ ಜಮೀರ್ ಅಹಮದ್
ಭದ್ರಾ ಮೇಲ್ದಂಡೆಗೆ ಅನುದಾನ ಚುನಾವಣಾ ಗಿಮಿಕ್
ಭದ್ರಾ ಮೇಲ್ದಂಡೆ ಯೋಜನೆ ಅನುಮೋದಿಸಿದ್ದು ನಾನು ಈಗ ಕೇಂದ್ರ ಸರ್ಕಾರ 5,300 ಕೋಟಿ ರು. ನೀಡಿರುವುದು ಕೇವಲ ಚುನಾವಣಾ ಗಿಮಿಕ್ ಆಗಿದ್ದು ಅದು ಅನುಷ್ಠಾನಗೊಳ್ಳುವುದಿಲ್ಲ. ಹಿಂದೆ ರಾಜ್ಯದ ಜನರು ಬಿ.ಎಸ್.ಯಡಿಯೂರಪ್ಪರನ್ನು ನೋಡಿ ಬಿಜೆಪಿಗೆ ಮತ ನೀಡಿದ್ದರು, ಆದರೀಗ ಬಿಜೆಪಿ ಗುಜರಾತ್ನ ಮೋದಿ, ಅಮಿತ್ ಶಾ ಅವರ ಪಕ್ಷವಾಗಿದೆ. ಹಾಗಾಗಿ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡಿಗೋಸ್ಕರವಿರುವ ಸರ್ಕಾರ ರಾಜ್ಯಕ್ಕೆ ಬೇಕಾಗಿದ್ದು, ಅದು ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.