
ಉಡುಪಿ (ಸೆ.22): ಸಿಎಂ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದು ಹಿಂದುಳಿಗ ವರ್ಗಗಳ ಆಯೋಗ ತರಾತುರಿ, ಪೂರ್ವಸಿದ್ಧತೆ ಇಲ್ಲದ ಗಣತಿಗೆ ಹೊರಟಿದೆ. ಇದರಿಂದ ಸಚಿವ ಸಂಪುಟವೇ ಗೊಂದಲಕ್ಕೆ ಬಿದ್ದು, ಒಡೆದು ಹೋಗಿ, ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಈ ತರಾತುರಿಯ ಹಿಂದೆ ಯಾರದೋ ಓಲೈಕೆ ಅಡಗಿದೆ, ಹೊರತು ರಾಜ್ಯದ ಹಿತ ಅಡಗಿಲ್ಲ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಸಿಎಂ ಕಚೇರಿಗೆ ಕ್ರೈಸ್ತ ಮಿಷನರಿ ನೆರಳು ಬಿದ್ದಿದೆ, ಆಗ ಟಿಪ್ಪು ಪೋಷಾಕು ಹಾಕಿದ್ರು, ಈಗ ಪಾದ್ರಿ ರೂಪದಲ್ಲಿ ಫಾದರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ ಎಂದವರು ಟೀಕಿಸಿದರು.
ಗಣತಿಯಲ್ಲಿ 47 ಹಿಂದೂ ಉಪಜಾತಿಗಳ ಜೊತೆ ಕ್ರೈಸ್ತ ಧರ್ಮವನ್ನು ಜೋಡಿಸಿದ ಬಗ್ಗೆ ಸಂಪುಟದಲ್ಲಿಯೇ ವಿರೋಧ ಬಂದಿದ್ದು, ಅವುಗಳನ್ನು ಕೈಬಿಡುವ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆ ಮಾಡಿಲ್ಲ. ಕೈಬಿಡದಿದ್ದರೆ ಪ್ರತಿ ತಾಲೂಕಿನಲ್ಲಿ ಹೋರಾಟ ಅನಿವಾರ್ಯ ಎಂದರು.ಸರ್ಕಾರ ಕ್ರೈಸ್ತ ಧರ್ಮದ ಜೊತೆ ಸೇರಿಸಲಾಗಿರುವ 47 ಉಪಜಾತಿಗಳನ್ನು ಕೈಬಿಟ್ಟ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ, ಸಾಮಾಜಿಕ ನ್ಯಾಯವನ್ನು ಶಿಲುಬೆಗೆ ಏರಿಸಬೇಡಿ, ಜನರು ಹಿಂದುಳಿದ ವರ್ಗದ ಆಯೋಗಕ್ಕೆ ಮುತ್ತಿಗೆ ಹಾಕುವ ಮೊದಲು ಕೈಬಿಡಬೇಕು. ಇಲ್ಲದಿದ್ದಲ್ಲಿ ಕ್ರೈಸ್ತ ಧರ್ಮದ ಜೊತೆ ಸೇರಿಸಿರುವ ಹಿಂದೂ ಉಪಜಾತಿಗಳ ಹೆಸರು ತೆಗೆಯುವ ವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟವಿದೆ, ಜಾತಿ ಗಣತಿಯಲ್ಲಿ ಲಿಂಗಾಯತರು ತಮ್ಮದು ಪ್ರತ್ಯೇಕ ಧರ್ಮ ಎಂದು ಬರೆಸಬಾರದು, ಹಿಂದು ಧರ್ಮ ಎಂದೇ ಬರೆಸಬೇಕು ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಲಿಂಗಾಯತ ಮಠಾಧೀಶರು ಮತ್ತು ನಾಯಕರ ಮನವೊಲಿಸುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.