
ಬಂಗಾರಪೇಟೆ(ನ.18): ರಾಜ್ಯದಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪರನ್ನು ಅವಧಿ ಮೀರುವ ಮುನ್ನವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಹಾಲಿ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಕಾರಣವಾಗಿರುವುದು ಜಗಜ್ಜಾಹೀರಾಗಿದ್ದು, ಇವರು ಬಿಜೆಪಿಯನ್ನು ಮುನ್ನಡೆಸಲಿದ್ದಾರೆಂದರೆ ಹಾಸ್ಯಾಸ್ಪದವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಲೇವಡಿ ಮಾಡಿದರು.
ತಾಲೂಕಿನಲ್ಲಿ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀ ಬ್ಯಾಟರಾಯಸ್ವಾಮಿ ದೇಗುಲದ ಬೆಟ್ಟಕ್ಕೆ ವಿವಿಧ ಯೋಜನೆಗಳಲ್ಲಿ ೮೦ ಲಕ್ಷ ರು.ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾದಾಗ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸೂಪರ್ ಸಿಎಂ ಆಗಿದ್ದ ವಿಜಯೇಂದ್ರ ಅವರ ಅಧಿಕಾರ ದುರುಪಯೋಗವೇ ಕಾರಣ, ಅಂಥಹವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ಪಕ್ಷದ ಅವನತಿಗೆ ಸಾಕ್ಷಿಯಾಗಲಿದೆ ಎಂದು ತಿರುಗೇಟು ನೀಡಿದರು.
ನಾನು, ವಿಜಯೇಂದ್ರ ಜೋಡೆತ್ತುಗಳು, ಬಿಜೆಪಿ ಅಧಿಕಾರಕ್ಕೆ ತರಲು ಹೋರಾಟ: ಆರ್.ಅಶೋಕ್
ಇದೇ ವೇಳೆ ಅಧಿಕಾರ ಇಲ್ಲದೇ ಹತಾಶರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ರಾಜಕೀಯ ಇಕ್ಕಟ್ಟಿಗೆ ಸಿಲುಕಿಸುವ ದುರುದ್ದೇಶದಿಂದ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟಾಂಗ್ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಮಾಜಿ ಶಾಸಕ, ಪುತ್ರ ಯತೀಂದ್ರರನ್ನು ಕೆಡಿಪಿ ಸದಸ್ಯರನ್ನಾಗಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವನ್ನೇ ಮಾತನಾಡಿರುವುದನ್ನು ವಿನಾಕಾರಣ ವಿರೋಧ ಪಕ್ಷಗಳು ವೈರಲ್ ಮಾಡಿವೆ. ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮೇಲಿರುವ ವಿದ್ಯುತ್ ಕಳ್ಳತನ ವಿಚಾರವನ್ನು ಮುಚ್ಚಿಹಾಕಿಕೊಳ್ಳಲು ಮುಖ್ಯಮಂತ್ರಿಗಳ ಮಗನನ್ನು ಬೀದಿಗೆ ತರುತ್ತಿದ್ದಾರೆಂದು ಟೀಕಿಸಿದರು.
3ನೇ ಬಾರಿ ಮೋದಿಯನ್ನು ಪ್ರಧಾನಿಯಾಗಿ ನೋಡಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ: ಬಿ.ವೈ.ವಿಜಯೇಂದ್ರ
ತಾಲೂಕಿನ ಯರಗೋಳ್ ಅಣೆಕಟ್ಟು ರಸ್ತೆಗೆ ೮ ಕಿ.ಮೀ ಡಾಂಬರು ಹಾಕಿದ್ದು, ಉಳಿದಂತೆ ಬಾಕಿ ಇರುವ ಕನಮನಹಳ್ಳಿ ಗ್ರಾಮದವರೆಗೂ ಈ ಕೂಡಲೇ ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಪ್ರಸಿದ್ದ ಶ್ರೀ ಬ್ಯಾಟರಾಯಸ್ವಾಮಿ ಬೆಟ್ಟದ ದೇಗುಲಕ್ಕೆ ನನ್ನ ಅವಧಿಯಲ್ಲಿಯೇ ರಸ್ತೆ ಮಾಡಲಾಗಿತ್ತು. ಮತ್ತೆ ಈ ರಸ್ತೆಗೆ ಡಾಂಬರು ಹಾಕಲು ನನ್ನ ಅವಧಿಯಲ್ಲಿ ಮಾಡುತ್ತಿರುವುದು ಸಂತಸ ತಂದಿದೆ. ಈ ರಸ್ತೆ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಬೇಕಾಗಿದೆ ಎಂದರು.
ಡಿ.ಕೆ.ಹಳ್ಳಿ ಗ್ರಾಪಂ ಅಧ್ಯಕ್ಷ ಜೆ.ಸುರೇಶ್, ಉಪಾಧ್ಯಕ್ಷೆ ಸುಲೋಚನಾ ಚಂದ್ರಪ್ಪ, ತಾಪಂ ಇಒ ಹೆಚ್.ರವಿಕುಮಾರ್, ಪಿಡಿಒ ಭಾಸ್ಕರ್, ಸದಸ್ಯರಾದ ಗೋಪಾಲರೆಡ್ಡಿ, ಅಮರಪ್ಪ, ವೆಂಕಟರಾಮ್, ವಿಜಯಕುಮಾರ್, ಅನಿಲ್ಕುಮಾರ್, ರಾಮಪ್ಪ, ವೆಂಕಟೇಶ್, ಅರುಣ್ಕುಮಾರ್, ಮೇಸ್ತ್ರಿ ನಾರಾಯಣಪ್ಪ, ಯರ್ರನಾಗನಹಳ್ಳಿ ಗೋವಿಂದಪ್ಪ, ಜಿ.ವೆಂಕಟೇಶ್, ಕೆಂಪಣ್ಣ, ಆನಂದ್, ಶ್ರೀನಿವಾಸ್, ಟಿ.ವೆಂಕಟೇಶ್, ಚಂದ್ರಪ್ಪ, ರಘು, ಮುನಿರಾಜು, ಪವಿತ್ರ ಬಾಬು, ಮಂಜುನಾಥ್, ಸತ್ಯರಾಜ್, ಗೌತಮ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.