
ಹೊಸನಗರ (ಸೆ.30): ರಾಜಕೀಯ ಸ್ಥಿತ್ಯಂತರ ನಡುವೆ ಹೈಕಮಾಂಡ್ ಕೃಪೆಯಿಂದ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ವೈ.ವಿಜಯೇಂದ್ರರ ವಿರುದ್ಧ ಅವರದೇ ಪಕ್ಷದ ಕೆಲವು ಹಿರಿಯ ನಾಯಕರಿಂದ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದೆ. ಏನಾದರು ಮಾಡಿ ಅವರನ್ನು ರಾಜ್ಯಾಧ್ಯಕ್ಷ ಪಟ್ಟದಿಂದ ಕೆಳಗಿಳಿಸುವ ಹುನ್ನಾರ ನಿರಂತರವಾಗಿ ನಡೆದೇ ಇದೆ. ಎಂದು ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದಿ ನಿಗಮದ ಅಧ್ಯಕ್ಷ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅರ್ಹತೆ ಇಲ್ಲದಿದ್ದರೂ ಕೇವಲ ಯಡಿಯೂರಪ್ಪ ಅವರ ಪುತ್ರ ಎಂದು ಹೇಳಿ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ಕೆಲವು ಹಿರಿಯ ನಾಯಕರಿಗೆ ತೃಪ್ತಿ ತಂದಿಲ್ಲ ಎಂದರು. ಶಾಸಕ ವಿಜಯೇಂದ್ರ ಓರ್ವ ಭ್ರಷ್ಟ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ವ್ಯಕ್ತಿ ಎಂಬ ಶಾಸಕ ಯತ್ನಾಳ್ ಅವರ ಇತ್ತೀಚಿನ ಹೇಳಿಕೆ ಇದನ್ನು ಪುಷ್ಟಿಕರಿಸುತ್ತದೆ.
ಇನ್ನೂ ಬಿಡುಗಡೆಯಾಗದ ಅನುದಾನ: ಮಡಿಕೇರಿ ದಸರಾ ಜನೋತ್ಸವ ಸಿದ್ಧತೆಗೆ ಗರ
ಹಾಗಾಗಿ ಅವರ ವಿರೋಧಿ ಪಡೆಗಳು ಅಲ್ಲಲ್ಲಿ ಗುಪ್ತ ಸಭೆ ನಡೆಸಿ, ಮಾಜಿ ಉಪ ಮುಖ್ಯಮಂತ್ರಿ, ಹಿಂದುತ್ವವಾದಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕು. ಪಕ್ಷ ಕಟ್ಟಿ ಬೆಳೆಸಿದ ಈಶ್ವರಪ್ಪ ಅವರಂತ ಹಿರಿಯ ನಾಯಕರನ್ನು ಏಕಾಏಕಿ ಪಕ್ಷದಿಂದ ಉಚ್ಚಾಟಿಸಿದ್ದು ಅಕ್ಷಮ್ಯ ಎಂಬ ನಿಲುವು ಹೊಂದಿದ್ದು, ಇದು ವಿರೋಧಿಗಳು ಅಧ್ಯಕ್ಷ ವಿಜಯೇಂದ್ರ ವಿರುದ್ಧ ಕಿಡಿಕಾರಲು ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಈ ಸಂಗತಿ ನುಂಗಲಾರದ ತುತ್ತಾಗಿ ಪರಿಣಮಿಸಬಹುದು ಎಂದು ಕಂಡುಬರುತ್ತಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ, ಜೆಡಿಎಸ್ ಶಾಸಕರ ವಿರುದ್ಧದ ಹಗರಣದ ಸಂದರ್ಭದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೇಳಿದಾಗ ನೀಡಲಿಲ್ಲ. ಈಗ ಬಿಜೆಪಿ ಏಜೆಂಟ್ ರೀತಿಯಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿಸಿದ್ದಾರೆ. ಪಿಎಸ್ಐ ಹಗರಣದ ತನಿಖೆಯಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಜೈಲಿಗೆ ಹೋಗ್ತಾರೆ ಎಂದರು.
ರಾಜ್ಯ ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗಾಗಿ ₹25 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಕ್ಷೇತ್ರದ ಸಾಗರ-ಹೊಸನಗರ ತಾಲೂಕುಗಳ ಸುಮಾರು 97 ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ₹4 ಕೋಟಿ ಅನುದಾನ ಬಿಡುಗಡೆಯಾಗಿದೆ. ದೇವಾಲಯಗಳ ಅಗತ್ಯಕ್ಕೆ ಅನುಸಾರವಾಗಿ ಹಣ ನೀಡಿದ್ದು, ಭಕ್ತಾದಿಗಳ ನಿರೀಕ್ಷೆಯನ್ನು ಪೂರೈಸಿದ ಸಂತೃಪ್ತಿ ತಮಗಿದೆ ಎಂದರು.
ಮಹಾರಾಷ್ಟ್ರದಲ್ಲಿಯು ಮೊಳಗಿದ ಕನ್ನಡ ಕಹಳೆ: ಕನ್ನಡ ಸಂಭ್ರಮ-50ಕ್ಕೆ ಸಾಕ್ಷಿಯಾದ ದಾನಮ್ಮ ದೇವಿಯ ಕ್ಷೇತ್ರ!
ಮುಡಾ ಹಗರಣ, ಕೋರ್ಟ್ ಆದೇಶದಂತೆ ತನಿಖೆ ಆಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ಕೋರ್ಟ್ ತನಿಖೆ ಮಾಡಿ ಎಂದು ಆದೇಶ ಮಾಡಿದೆ. ಕೋರ್ಟ್ ಆದೇಶದಂತೆ ತನಿಖೆ ಆಗಲಿ. ಮುಂದೆ ಏನಾಗುತ್ತೋ ನೋಡೋಣ. ರಾಜ್ಯದಲ್ಲಿ ಯಾರು ಏನು ಮಾಡಿದ್ದಾರೆ ಎಲ್ಲಾ ಗೊತ್ತಿದೆ. ರಾಜ್ಯಪಾಲರು ಕೇಂದ್ರದ ನಾಯಕರ ಕೈಗೊಂಬೆಯಾಗಿ ಹೀಗೆಲ್ಲ ಆಟ ಆಡಿಸುತ್ತಾ ಇದ್ದಾರೆ. ರಾಜ್ಯಪಾಲರಿಗೆ ಕೇಂದ್ರದ ನಾಯಕರು ತಾಕೀತು ಮಾಡಿ ಸಿಎಂ ವಿರುದ್ಧ ಅನುಮತಿ ಕೊಡಿಸಿರೋದು. ಕೋರ್ಟ್ಗೆ ಬೆಲೆ ಕೊಡಬೇಕು. ಅದರಂತೆ ತನಿಖೆ ಆಗಲಿ. 136 ಜನರು ಸಿಎಂ ಜೊತೆ ಇದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದೆಯೂ ನಾವು ಶಾಸಕಾಂಗ ಸಭೆ ಸೇರಿ ಸಿಎಂಗೆ ನಮ್ಮ ಬೆಂಬಲ ಕೊಟ್ಟಿದ್ದೇವೆ. ಈಗಲೂ ಹಾಗೇ ಮಾಡುತ್ತೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.