
ಹುಬ್ಬಳ್ಳಿ(ಫೆ.04): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂದು ಸರ್ಕಾರ ಪತನ ಆಗುತ್ತೆ ಎಂದು ಹೇಳಿ ಹೋಗುತ್ತಾರೆ. ಇವರಷ್ಟೇ ಅಲ್ಲ, ಬಿಜೆಪಿಗರೆಲ್ಲರೂ ಬರೀ ಇದನ್ನೇ ಹೇಳುವುದು ಆಗಿದೆ. ಅವರಿಗೆ ಈ ಮಾತನ್ನು ಹೇಳುವುದು ಬಿಟ್ಟು ಬೇರೆ ಕೆಲಸವೇ ಇಲ್ಲದಂತಾಗಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು 136 ಶಾಸಕರಿದ್ದೇವೆ. ಅವರಿಗೆ ಇನ್ನು 53 ಶಾಸಕರು ಬೇಕು, ಆಗಷ್ಟೇ ಸಮನಾಗುತ್ತಾರೆ. ಅದೇಗೆ ಬೀಳಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಬರೀ ಸರ್ಕಾರ ಪತನ ಎಂಬ ಮಾತೇ ಆಯಿತು. ಬಿಜೆಪಿಗರು ಸರ್ಕಾರ ಪತನಗೊಳಿಸುವಲ್ಲಿ ನಿಸ್ಸಿಮರು. ಶ್ರೀಲಂಕಾ, ಪಾಕಿಸ್ತಾನದ ಸರ್ಕಾರಗಳನ್ನೇ ಬೀಳಿಸಲಿ ಎಂದರು.
ಕಾಂಗ್ರೆಸ್ಗೆ ಮಾನ-ಮರ್ಯಾದೆ ಇದ್ದರೆ ಸಂಸದ ಡಿಕೆಸು ಅಮಾನತು ಮಾಡಿ: ಪ್ರಲ್ಹಾದ್ ಜೋಶಿ
ದಕ್ಷಿಣ ಭಾರತದ ರಾಜ್ಯಗಳಿಗೆ 2014ರ ಮುಂಚೆ ಎಷ್ಟು ಅನುದಾನ ಬರುತ್ತಿತ್ತೋ ಅಷ್ಟು ಅನುದಾನ ಈಗ ಬರುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ ಹೇಳಿದ್ದಾರೆ. ಇದು ಸರಿಯಾಗಿದೆ. ಆದರೆ, ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಬಗ್ಗೆ ಅವರೇ ಉತ್ತರಿಸುತ್ತಾರೆ. ಅವರನ್ನೇ ಕೇಳಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಡಿ.ಕೆ. ಸುರೇಶ ಹೇಳಿದ್ದರಲ್ಲಿ ಲಾಜಿಕ್ ಇದೆ. ದಕ್ಷಿಣದ ರಾಜ್ಯಗಳಿಗೆ ಬರುವ ದುಡ್ಡು ಕಡಿಮೆಯಾಗಿದೆ. ನಮಗೆ ಬರಬೇಕಾದ ದುಡ್ಡು ಬರುತ್ತಿಲ್ಲ. ನಮ್ಮ ಹಣ ತೆಗೆದುಕೊಂಡು ಉತ್ತರ ಭಾರತದ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು. ಇನ್ನು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಡಿ.ಕೆ. ಸುರೇಶ ಹೇಳಿದ್ದಾರೆ. ಅದು ಸರಿಯೋ ತಪ್ಪೋ ಎಂಬುದನ್ನು ಅವರನ್ನೇ ಉತ್ತರ ಕೇಳಿ ಎಂದರು. ಹಾಗೆ ನೋಡಿದರೆ ಬಿಜೆಪಿಗರು ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಹತ್ತು ವರ್ಷದಲ್ಲಿ ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಗ್ಗೆ ಅವರು ಉತ್ತರಿಸಲಿ ಎಂದರು. 10 ವರ್ಷದಲ್ಲಿ ಇವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಲಿ. ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರವಿತ್ತು. ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.