
ವಿಧಾನಸಭೆ (ಮಾ.21): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಬಾಣಂತಿಯರ ಸಾವು ಪ್ರಕರಣ ಹಾಗೂ ಬಿಜೆಪಿ ಅವಧಿಯಲ್ಲಿನ ಕೊರೋನಾ ಸಾವುಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ‘ನ್ಯಾ. ಕುನ್ಹಾ ವರದಿಯಲ್ಲಿ ಬಿಜೆಪಿಯವರು ಹೆಣದಿಂದ ಹಣ ಮಾಡಿರುವುದು ಬಯಲಾಗಿದೆ. ಕಂಬಿ ಎಣಿಸಲು ಸಜ್ಜಾಗಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಬಜೆಟ್ ಮೇಲಿನ ಚರ್ಚೆ ವೇಳೆಯಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯದಲ್ಲಿ ಚಿಕಿತ್ಸಾ ಗುಣಮಟ್ಟ ಕುಸಿದಿದೆ. ರಾಜ್ಯದಲ್ಲಿ 300 ಮಂದಿ ಬಾಣಂತಿಯರ ಸಾವಾಗಿದೆ. 20 ಜನರ ಸಾವಿಗೆ ರಿಂಗ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ಆಗಿದೆ.
ಆದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿಲ್ಲ. ಅವರಿಗೆ ಆತ್ಮಸಾಕ್ಷಿಯೇ ಇಲ್ಲ ಎಂದು ದೂರಿದರು. ಸಚಿವ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ‘ಬರೀ ನಾಟಕ ಮಾಡಬೇಡಿ. ನಿಮ್ಮ ಅವಧಿಯಲ್ಲಿ ಹಗರಣ ಬಿಟ್ಟು ಬೇರೇನೂ ಆಗಿಲ್ಲ. ನಿಮ್ಮ ಅವಧಿಯಲ್ಲಿ ಏನಾಗಿದೆ ಎಂಬುದನ್ನು ಹೇಳಿ. ಆಕ್ಸಿಜನ್ ಇಲ್ಲದೆ ಚಾಮರಾಜ ನಗರದಲ್ಲಿ 34 ಜನ ಸತ್ತರಲ್ಲಾ ಆಗ ಯಾಕೆ ಮಾತನಾಡಲಿಲ್ಲ’ ಎಂದು ಕಿಡಿಕಾರಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಕೊರೋನಾ ಸಮಯದಲ್ಲಿ ಹೆಣದಲ್ಲಿ ಹಣ ಮಾಡಿರುವುದು ನ್ಯಾ.ಮೈಕಲ್ ಡಿ.ಕುನ್ಹಾ ವರದಿಯಲ್ಲಿ ಬಹಿರಂಗವಾಗಿದೆ. ಆಮ್ಲಜನಕ ಇಲ್ಲದೆ 36 ಮಂದಿ ಸತ್ತರೂ ನೀವು ಆ ಕಡೆ ತಲೆ ಹಾಕಲಿಲ್ಲ. ಕೊರೋನಾದಿಂದ 4 ಲಕ್ಷಕ್ಕೂ ಹೆಚ್ಚು ಜನ ಸತ್ತರು. ವ್ಯಾಕ್ಸಿನ್ ಪ್ರಮಾಣಪತ್ರದ ಮೇಲೆ ಮೋದಿ ಫೋಟೋ ಹಾಕಿದ ನೀವು 4 ಲಕ್ಷ ಜನರ ಮರಣ ಪ್ರಮಾಣಪತ್ರದ ಮೇಲೆ ಫೋಟೋ ಹಾಕಬೇಕಿತ್ತು. ಎಲ್ಲವೂ ಬಯಲಾಗುತ್ತಿದೆ. ಕಂಬಿ ಎಣಿಸಲು ಸಜ್ಜಾಗಿ ಎಂದರು.
58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
ಕೊರೋನಾ ಅವಧಿ ಮುಗಿದು ಐದು ವರ್ಷವಾಗುತ್ತಿದೆ. ನಿಮ್ಮ ಸರ್ಕಾರ ಬಂದೇ ಎರಡು ವರ್ಷ ಆಗುತ್ತಿದೆ. ಇನ್ನೂ ತನಿಖೆ ಮಾಡುತ್ತಲೇ ಇದ್ದೀರಿ. ಅದರಲ್ಲಿ ಏನೂ ಹೊರಬರಲ್ಲ. ಹೊರ ಬರಲು ಏನೂ ಇಲ್ಲ.
- ಆರ್. ಅಶೋಕ್, ಪ್ರತಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.