
ಕಾರವಾರ (ಮಾ.19): ತಾವು ಗೆದ್ದ ಕ್ಷೇತ್ರದಲ್ಲಿಯೇ ಒಳ್ಳೆಯ ಕೆಲಸ ಮಾಡಿದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ತಾಲೂಕಿನ ಮುಡಗೇರಿಯಲ್ಲಿ ಶನಿವಾರ ಮಾಧ್ಯಮದ ಜತೆಗೆ ಮಾತನಾಡಿ, ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ತಮ್ಮ ಪಾಟ್ನರ್ ಆಗಿದ್ದಾರೆ. ಬಾದಾಮಿ ತಾಲೂಕಿನ ಒಂದು ಭಾಗ ನನ್ನ ಕ್ಷೇತ್ರಕ್ಕೆ ಬರುತ್ತಿತ್ತು. ಅಭಿವೃದ್ಧಿ ಮಾಡದ ಕಾರಣ ಕೋಲಾರದತ್ತ ಮುಖ ಮಾಡಿದ್ದರು. ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ.
ವರುಣಾ ಕ್ಷೇತ್ರದಲ್ಲಿ ಸಹ ಅವರು ನಿಲ್ಲುವ ಸಾಧ್ಯತೆ ಕಡಿಮೆ ಇದೆ. ಬೇರೆಯವರ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡುವುದು ಬಿಡಬೇಕು. ಅವರು ಒಳ್ಳೆಯದನ್ನು ಮಾಡಿದರೆ ಈ ರೀತಿ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಿದ್ದರಾಮಯ್ಯ ನವರ ಬಗ್ಗೆ ಹೆಚ್ಚು ಹೇಳುವಷ್ಟುದೊಡ್ಡ ವ್ಯಕ್ತಿ ತಾವಲ್ಲ ಎಂದು ಟಾಂಗ್ ನೀಡಿದರು. ಈ ಭಾಗದಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್, ಹಡಗುಗಳ ಬಿಡಿಭಾಗ ತಯಾರಿಕೆ, ಗ್ರೀನ್ ಹೈಡ್ರೋಜನ್ ತಯಾರಿಸುವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡಲಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬಂದರು, ಏರಪೋರ್ಟ್ ಸಂಪರ್ಕ ಸಾಧ್ಯವಾಗುವುದರಿಂದ ವ್ಯವಹಾರಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಕಾಂಗ್ರೆಸ್ ಈಗ ಡೇಟ್ ಬಾರ್ ಆದ ಪಕ್ಷ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟಮೆಂಟರ್ ಕಾರ್ಯಕ್ರಮದಲ್ಲಿ ಹಲವು ಕಂಪನಿಗಳೊಂದಿಗೆ ಸಹಿ ಮಾಡಲಾಗಿದೆ. ಇದರಿಂದ ಸುಮಾರು 7 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕಾರವಾರದಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಉತ್ತರಕರ್ನಾಟಕ ಭಾಗಕ್ಕೆ ಜಿಲ್ಲೆಯಿಂದ ನೀರು ಕೊಂಡೊಯ್ಯುವ ಬಗ್ಗೆ ಕೇಳಿದಾಗ, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡದ ಎಲ್ಲರೂ ಸಹೋದರ ಭಾವನೆಯಲ್ಲಿದ್ದಾರೆ. ಎಲ್ಲಿ ಏನು ಕೊರತೆ ಇದೆ ಅಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಜನರಿಗೆ, ಪರಿಸರಕ್ಕೆ ತೊಂದರೆಯಾಗದ ರಿತಿಯಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರೂಪಾಲಿ ಪ್ರಯತ್ನದಿಂದ ಹೆಚ್ಚು ಪರಿಹಾರ ನೀಡಿಕೆ: ಹೇಗೆ ನೋಡಿದರೂ ಮುಡಗೇರಿಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪ್ರತಿ ಎಕರೆಗೆ .40 ಲಕ್ಷ ಗಿಂತ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಶಾಸಕಿ ರೂಪಾಲಿ ನಾಯ್ಕ ಸತತ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ತಾಲೂಕಿನ ಮುಡಗೇರಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಗೊಂಡ ಭೂ ಮಾಲಿಕರಿಗೆ ಸಾಂಕೇತಿಕವಾಗಿ ಪರಿಹಾರ ನೀಡಿ ಮಾತನಾಡಿ, ತಮ್ಮ ಕ್ಷೇತ್ರದಲ್ಲೇ ಭೂಸ್ವಾಧಿನಕ್ಕೆ .18 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲು ಸಾಧ್ಯವಾಗಿರಲಿಲ್ಲ. ಹಲವಾರು ವರ್ಷದಿಂದ ರಾಜಕೀಯದಲ್ಲಿದ್ದೇನೆ.
ಆದರೆ ಬಡವರ, ನಿರುದ್ಯೋಗಿಗಳ, ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಸಾಕಷ್ಡು ಕಾಳಜಿ ಹೊಂದಿದ ಶಾಸಕರನ್ನು ನೋಡಿರಲಿಲ್ಲ. ಬೆಂಗಳೂರು ಹೊರತು ಪಡಿಸಿ ಕಾರವಾರದಲ್ಲಿ ನೀಡಿದ ಪರಿಹಾರವೇ ಅತ್ಯಂತ ಹೆಚ್ಚಾಗಿದೆ ಎಂದು ಬಣ್ಣಿಸಿದರು. ಕೈಗಾರಿಕೆ ಇಲಾಖೆಯಿಂದ ಸ್ವಯಂ ಉದ್ಯೋಗ ಕೈಕೊಳ್ಳಲು ವಿವಿಧ ಕೈಗಾರಿಕಾ ತರಬೇತಿಗಳನ್ನು ನೀಡಿ ಅವರಿಗೆ ಬ್ಯಾಂಕುಗಳಿಂದ ಸಾಲ ಒದಗಿಸಿ ಸ್ವಂತ ಜೀವನ ಕಟ್ಟಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಮಹಿಳೆಯರಿಗೆ ಕೂಡ ಇಂದು ಸಾಕಷ್ಟುಅವಕಾಶಗಳಿದ್ದು, ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಪ್ರತಿ 2 ಎಕರೆ ಜಮೀನು ಇದ್ದರೆ ಅವರಿಗೆ ಶೇ. 75 ರಷ್ಟುಸಬ್ಸಿಡಿ ನೀಡುತ್ತಿದ್ದೇವೆ.
ಡಬಲ್ ಎಂಜಿನ್ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್
ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನು ಬಳಸಿಕೊಂಡು ನಮ್ಮ ಜಿಲ್ಲೆ ರಜ್ಯದಲ್ಲೆ ಸ್ವಂತ ಉದ್ಯಮ ಮಾಡಿ, ಮಾಲೀಕರು, ಉದ್ಯಮಿ ಎನಿಸಿಕೊಳ್ಳಬೇಕು. ಬೇರೆ ದೇಶಕ್ಕೆ ಹೋಗಿ ಎಷ್ಡೇ ದೊಡ್ಡ ಹುದ್ದೆಯನ್ನ ಅಲಂಕರಿಸಿದರೂ ಉದ್ಯೋಗಿ ಎಂದೇ ಕರೆಯುತ್ತಾರೆ ಎಂದು ಹೆಳಿದರು. ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, 2005 ರಿಂದ 2023ರ ವರೆಗೆ ಅಂದರೆ 18 ವರ್ಷಗಳ ಕಾಲ ಭೂಮಿಯನ್ನು ಕಳೆದು ಕೊಂಡ ಈ ಭಾಗದ ಜನರು ಕಷ್ಟುಪಡುತ್ತಿದ್ದರು. ಇಂದು ಭೂ ಮಾಲಿಕರಿಗೆ ಯೋಗ್ಯ ಪರಿಹಾರವನ್ನು ಸರ್ಕಾರ ನೀಡಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಗರಿಕರ ಪರ ಧನ್ಯವಾದ ಹೇಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.