
ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ಮಧು ಬಂಗಾರಪ್ಪ ಅವರು ಸಿಎಂ ಬದಲಾವಣೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತನಾಡುತ್ತಾ, “ಸಿಎಂ ಬದಲಾವಣೆ ಕುರಿತು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ. ನೀವು ಮಾಧ್ಯಮದಲ್ಲಿ ಯಾವ ಮಟ್ಟಿಗೆ ಚರ್ಚೆ ಮಾಡಿಕೊಂಡು ಕುಳಿತುಕೊಳ್ಳುತ್ತೀರೋ ಅದಕ್ಕೆ ನನಗೆ ಯಾವುದೇ ಸಂಬಂಧವಿಲ್ಲ,” ಎಂದು ಹೇಳಿದ್ದಾರೆ.
“ನಾನು ಬಾಯಿ ತೆರೆದು ಏನು ಪ್ರಯೋಜನ? ನಾನು ಬಾಯಿ ತೆರೆಯುವವನು ಅಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಗಪ್ಚುಪ್ ಆಗಿಯೇ ಇರುತ್ತೇನೆ,” ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಸುರಜೆವಾಲ ಅವರ ಶಾಸಕರ ಸಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, “ಅವರು ನಮ್ಮ ನಾಯಕರು. ಬಂದು ಸಭೆ ನಡೆಸಿ ಹೋಗುತ್ತಾರೆ. ಅದರಿಂದ ನಿಮಗೆ ಏನು?” ಎಂದು ಪ್ರಶ್ನಿಸಿದರು. ಶಾಸಕರ ಅಸಮಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, “ಅವರೇನು ನಿಮಗೆ ಬಂದು ಹೇಳಿದಾರಾ?” ಎಂದು ಮಧು ಬಂಗಾರಪ್ಪ ಹೇಳಿದರು.
ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. “ಬಿಜೆಪಿ ಅವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಅವರಿಗೇನು ಗೊತ್ತು ಹಿಂದುತ್ವ ಬದನೆಕಾಯಿ!” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದುತ್ವ ಇವರಿಗೇನು ಗೊತ್ತು? ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಅವರಿಂದ ಆಗುತ್ತಿರಲಿಲ್ಲ. ನಾವು ಆರಾಧನಾ ಕಾರ್ಯಕ್ರಮಗಳ ಮೂಲಕ ದೇವಸ್ಥಾನಗಳಿಗೆ ಹಣ ನೀಡಿದ್ದೇವೆ. ಅಲ್ಲಿ ಯಾವ ಜಾತಿ ನೋಡಲಿಲ್ಲ. ಉದಾಹರಣೆಗೆ, ಅಜೀಂ ಪ್ರೇಮ್ಜಿ ಅವರು ಯಾವ ಜಾತಿಯವರು? ಇಂತಹ ಪುಣ್ಯಾತ್ಮರು ನಮ್ಮ ರಾಜ್ಯದಲ್ಲಿ ಇರುವುದೇ ನಮಗೆ ಪುಣ್ಯ.” ಎಂದು ಹೇಳಿದರು.
“ನಮ್ಮ ತಂದೆ ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ಶಾಲೆಯಲ್ಲಿ ಕಲಿತವರು. ಸಿದ್ದರಾಮಯ್ಯ ನೇರವಾಗಿ 4ನೇ ತರಗತಿಗೆ ಹೋಗಿದ್ದಾರೆ. ಅದುವರೆಗೂ ಅವರು ದನ ಕಾಯುತ್ತಿದ್ದರೋ, ಏನು ಮಾಡುತ್ತಿದ್ದರೋ ಗೊತ್ತಿಲ್ಲ!” ಎಂದು ವ್ಯಂಗ್ಯಭರಿತವಾಗಿ ಹೇಳಿದರು.
“ನನ್ನ ಕ್ಷೇತ್ರದಲ್ಲಿ ಜನರು ದೇವಸ್ಥಾನಕ್ಕೆ ಹಣ ಕೇಳಲು ಬರುತ್ತಾರೆ. ಆದರೆ, ನಾನು ಯಾವುದೇ ದೇವಸ್ಥಾನಕ್ಕೆ ಹಣ ನೀಡುವುದಿಲ್ಲ. ದೇವಾಲಯದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಅದಕ್ಕಿಂತ ಹೆಚ್ಚು ಶಾಲೆಯ ಗಂಟೆ ಹೊಡೆಯಬೇಕು,” ಎಂದು ಶಿಕ್ಷಣಕ್ಕೆ ತಮ್ಮ ಒಲವು ವ್ಯಕ್ತಪಡಿಸಿದರು.
ಹೇರಸ್ಟೈಲ್ ಕುರಿತಾಗಿ ಮಧು ಬಂಗಾರಪ್ಪ ತಿಳಿಸುತ್ತಾ, “ನನ್ನ ಹೇರಸ್ಟೈಲ್ ಇರುವುದೇ ಹಿಂಗೆ. ಬಿಜೆಪಿಯವರು ಅನೇಕರು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಮಾತನಾಡಲಿ. ಒಮ್ಮೆ ನಾನು ಹೇರ್ ಸ್ಟೈಲ್ ಸಣ್ಣದಾಗಿ ಮಾಡಿಸಿಕೊಂಡಿದ್ದೆ. ಆಗ ನಮ್ಮ ತಂದೆಯವರು ನನ್ನ ಜೊತೆ 15 ದಿನ ಮಾತನಾಡಿರಲಿಲ್ಲ. ಈಗ ನನ್ನ ಹೇರಸ್ಟೈಲ್ ಚೆನ್ನಾಗಿದ್ದರೆ ಒಂದು ಚಪ್ಪಾಳೆ ಹೊಡೆಯಿರಿ,” ಎಂದು ಮಧು ಬಂಗಾರಪ್ಪ ಜನರಿಂದ ಚಪ್ಪಾಳೆ ಹೊಡೆಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.