ಕಾಂಗ್ರೆಸ್ಸಿಗರು ಅಖಂಡ ಭಾರತದ ವಿಭಜಕರು: ಸಚಿವ ಆಚಾರ

By Kannadaprabha NewsFirst Published Nov 24, 2022, 12:30 PM IST
Highlights

ರಾಹುಲ್‌ ಗಾಂಧಿ ಮೊದಲು ಡಿಕೆಶಿ- ಸಿದ್ದರಾಮಯ್ಯರನ್ನು ಒಗ್ಗೂಡಿಸಲಿ: ಹಾಲಪ್ಪ ಆಚಾರ 

ಯಲಬುರ್ಗಾ(ನ.24):  ಅಖಂಡ ಭಾರತ ದೇಶವನ್ನು ತುಂಡು- ತುಂಡಾಗಿ ಮಾಡಿದ ಕಾಂಗ್ರೆಸ್ಸಿನವರು ಇದೀಗ ಭಾರತ ಜೋಡೊ ಯಾತ್ರೆ ಮೂಲಕ ದೇಶವನ್ನು ಒಂದುಗೂಡಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವ ಹಾಲಪ್ಪ ಆಚಾರ ಟೀಕಿಸಿದರು.

ತಾಲೂಕಿನ ವಣಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರು ಮೊದಲು ಡಿಕೆಶಿ ಹಾಗೂ ಸಿದ್ದರಾಮಯ್ಯನವರನ್ನು ಒಗ್ಗೂಡಿಸುವ ಕೆಲಸ ಮಾಡಲಿ. ಇವರನ್ನೇ ಒಟ್ಟಿಗೆ ಕೂಡಿಸದವರು ಇನ್ನು ದೇಶವನ್ನು ಏನು ಒಂದುಗೂಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಜಾತಿ ರಾಜಕಾರಣಕ್ಕೆ ಕಡಿವಾಣ ಬೀಳಲಿ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‌ನವರಿಗಿಲ್ಲ. ಯಾವ ರಾಜ್ಯಗಳಲ್ಲೂ ಕಾಂಗ್ರೆಸ್ಸಿಗೆ ಅಡ್ರೆಸ್ಸೆಲ್ಲ. ಇಂತಹ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ಸಿಗರು ಯಾತ್ರೆ ಮಾಡಲು ಹೊರಟಿದ್ದಾರೆ ಎಂದರು. ದೇಶ ಹಾಗೂ ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ಚುನಾವಣೆ ಬರುತ್ತಿದ್ದಂತೆ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ನೀರಾವರಿ ಯೋಜನೆ ಜಾರಿಗೆ ತರುತ್ತೇನೆಂದು ಕ್ಷೇತ್ರದ ಜನರ ಮುಂದೆ ಹೇಳುತ್ತಿದ್ದಾರೆ. ಸತ್ಯಹರಿಚಂದ್ರ ಬಂದರೂ ತಾಲೂಕಿಗೆ ನೀರಾವರಿ ಸಾಧ್ಯವಿಲ್ಲ ಎಂದವರು ಚುನಾವಣೆಯಲ್ಲಿ ಗೆಲ್ಲಿಸಿ ನೀರಾವರಿ ಮಾಡುತ್ತೇನೆಂದು ಇದೀಗ ಹೇಳುತ್ತಿರುವುದು ಅಧಿಕಾರ ವ್ಯಾಮೋಹ ಅವರನ್ನು ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ವೀರಭದ್ರಪ್ಪ ಆವಾರಿ, ಶಿವಶಂಕರರಾವ್‌ ದೇಸಾಯಿ, ಕಳಕಪ್ಪ ಕಂಬಳಿ, ಗ್ರಾಪಂ ಅಧ್ಯಕ್ಷ ಶರಣಪ್ಪ ದಿವಾಳಿದಾರ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸುಧಾಕರ ದೇಸಾಯಿ, ಬಸಯ್ಯ ಮ್ಯಾಗಳಮಠ, ಶಿವಣ್ಣ ವಾದಿ ಹಾಗೂ ಅಧಿಕಾರಿಗಳಾದ ನಾಗಪ್ಪ ಸಜ್ಜನ್‌, ಸಂತೋಷ ಪಾಟೀಲ, ಶ್ರೀಧರ ತಳವಾರ, ಮಹಾದೇವ ಪತ್ತಾರ, ಮುರಳಿಧರ, ಪದ್ಮನಾಭ ಕರ್ಣಮ್‌, ಐ.ಎಸ್‌. ಹೊಸೂರ, ಸತೀಶ ರಾಠೋಡ, ಮಹಾಂತೇಶ ಮಠದ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.
 

click me!