
ಚಿತ್ರದುರ್ಗ (ಜೂ.17): ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸುತ್ತಿರುವುದರಿಂದ ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಕೊಟ್ಟಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಚಿತ್ರದುರ್ಗ ನಗರದ ಹೂರ ವಲಯದ ಭೋವಿ ಗುರು ಪೀಠಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಅಶೋಕ್ ಅವರ ಧಮ್, ತಾಕತ್ತು ಇದ್ರೆ ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೇ ಕೊಡಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವರ ಮತಾಂತರ ನಿಷೇಧ ಕಾಯ್ದೆಯನ್ನು ರದ್ಧುಪಡಿಸುವ ಮೂಲಕ ಮಿನಿ ಪಾಕಿಸ್ತಾನ ಮಾಡಲಿಕ್ಕೆ ಹೊರಟಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಈ ರೀತಿ ಕೋಮು ದ್ವೇಷ ಸೃಷ್ಟಿಸಿ ಅಧಿಕಾರ ನಡೆಸಲು ಹೋದರು. ಜನರು ಅದಕ್ಕೆ ತಕ್ಕಪಾಠ ಕಲಿಸಿದ್ದಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಇದನ್ನು ಜನ ಅರ್ಥ ಮಾಡಿಕೊಂಡು ಪಾಠ ಕಲಿಸಿದ್ದಾರೆ ಎಂದು ಸಚಿವರು ಹೇಳಿದರು. ಅರಣ್ಯ ಸಂರಕ್ಷಣೆ, ಜನರ ಸಮಸ್ಯೆ ಆಲಿಸುವ ಎರಡೂ ಜವಾಬ್ದಾರಿ ಇದೆ. ಸಣ್ಣ ಸಮುದಾಯಗಳು, ಬಡವರು, ಅರಣ್ಯಗಳ ಪ್ರದೇಶಗಳಲ್ಲಿ ಗುಡಿಸಲು, ಜಮೀನು ಇವೆ. ಕೇಂದ್ರ ಹಾಗೂ ರಾಜ್ಯದಿಂದ ಜಂಟಿ ಸಮೀಕ್ಷೆ ಆಗಬೇಕು. ಕೆಲ ಜಿಲ್ಲೆಗಳಲ್ಲಿ ಪ್ರಸ್ತಾವನೆ ಹೋಗಿದೆ. ಕಾಲಾವಕಾಶ ಬೇಕಾಗುತ್ತದೆ. ಅರಣ್ಯ ಸಂರಕ್ಷಣೆ, ಅತಿಕ್ರಮಣ ತೆರವುಗೊಳಿಸುವ ಮೂಲಕ ಪರಿಸರ ಉಳಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಸಂವಿಧಾನವೇ ನಮ್ಮ ಬದುಕಿಗೆ ದಾರಿದೀಪ: ಶಾಸಕ ಎಂ.ವೈ.ಪಾಟೀಲ್
ಅರಣ್ಯ ಪ್ರದೇಶ ಶೇ.31ಕ್ಕೆ ಹೆಚ್ಚಿಸುವ ಗುರಿ: ಈ ವರ್ಷ 5 ಕೋಟಿ ಸಸಿಗಳನ್ನು ನೆಡಬೇಕು. ರಾಜ್ಯದಲ್ಲಿ 21% ಅರಣ್ಯ ಇದೆ. ಅದನ್ನು 31%ಗೆ ತೆಗೆದುಕೊಂಡು ಹೋಗಬೇಕಿದೆ. ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಿ, ಪಶು ಸಂಕುಲ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಶ್ರೀಗಂಧ ಬೆಳೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಡುತ್ತೇನೆ. ಮೀಸಲು ಅರಣ್ಯ ಇರುವ ಕಡೆಗಳಲ್ಲಿ ಅರಣ್ಯ ಉಳಿಸಲು ಮುಂದಾಗಿದ್ದೇವೆ. ಬಡವರು, ಬುಡಕಟ್ಟು ಸಮುದಾಯಗಳು ನಾಲ್ಕೈದು ದಶಕಗಳಿಂದ ಅಲ್ಲೆ ವಾಸ ಮಾಡುತ್ತಿದ್ದರೆ ಸರಿಯಾದ ಸಮೀಕ್ಷೆ ಮಾಡದೆ ಜನ ಕಷ್ಟಅನುಭವಿ ಸುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಸರಿಯಾದ ವರದಿ ಕೊಟ್ಟಿಲ್ಲ. ಹೀಗಾಗಿ ಗಡುವು ನೀಡಿ ಸಮೀಕ್ಷೆ ಮಾಡಲು ಆದೇಶ ಮಾಡುತ್ತಿದ್ದೇನೆ ವರದಿ ತರಿಸಿ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಮಠಾಧೀಶರು ಸಭೆ ಸೇರಿ, ಆಗ್ರಹಿಸಿರುವ ವಿಚಾರವನ್ನು ಈ ಬಗ್ಗೆ ಹಿಂದೆಯೂ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಬಹು ದಿನಗಳ ನ್ಯಾಯಯುತ ಬೇಡಿಕೆ ಇದಾಗಿದೆ. ಈಗಿನ ಸರ್ಕಾರಕ್ಕೂ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಲಿಂಗಾಯತ ವೀರಶೈವ ಮಹಾಸಭೆಯಿಂದ ಮನವಿ ಮಾಡುತ್ತೇವೆ ಎಂದು ಖಂಡ್ರೆ ತಿಳಿಸಿದರು. ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭಾವ ಸಂಬಂಧ. ಗುರುಗಳ ಜೊತೆಗೆ ಇಪ್ಪತ್ತು ವರ್ಷಗಳಿಂದ ಸಂಪರ್ಕ ಇದೆ. ಶಕ್ತಿ ಯೋಜನೆಯಲ್ಲಿ ಖಾಸಗಿ ವಾಹನದವರಿಗೆ ಸಂಕಷ್ಟಎದುರಾಗಿ ದ್ದರೆ ಕರೆದು ಚರ್ಚಿಸುತ್ತೇವೆ. ತಾತ್ಕಾಲಿಕ ಹಿನ್ನಡೆಯಷ್ಟೆ. ಆನಂತರ ಸರಿಯಾಗುತ್ತದೆ ಎಂದರು.
ಕೇಂದ್ರ ಸರ್ಕಾರದಿಂದ ಕ್ಷುಲ್ಲಕ ರಾಜಕಾರಣ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡುವುದಾಗಿ ಹೇಳಿತ್ತು ರಾಜಕೀಯ ದುರುದ್ದೇಶದಿಂದ ಅಕ್ಕಿ ನೀಡಲು ನಿರಾಕರಿಸಿದೆ. ಕೇಂದ್ರದಿಂದ ಕ್ಷುಲ್ಲಕ ರಾಜಕಾರಣ ಜನರೇ ಕೇಂದ್ರದ ನಿರ್ಧಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಕೇಂದ್ರ ಏನೇ ತಡೆದರೂ ಅನ್ನಭಾಗ್ಯ ಕಾರ್ಯಕ್ರಮ ನಿಲ್ಲಲ್ಲ. ನಾಲ್ಕು ದಿನ ತಡ ಆಗಬಹುದು. ಅಕ್ಕಿ ಕೊಡುತ್ತೇವೆ. ಸಿಎಂ, ಸಚಿವರು ವಿವಿಧ ರಾಜ್ಯ ಸರ್ಕಾರಗಳ ಜತೆ ಚರ್ಚಿಸುತ್ತಿದ್ದಾರೆ ಎಂದರು.
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ತರಾಟೆ
ಬಿಜೆಪಿಯವರಿಗೆ ಸುಳ್ಳು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವುದು ಬಿಜೆಪಿ ಕೆಲಸ. ಹೀನಾಯ ಸೋಲಿನ ಹತಾಶೆಯಿಂದ ಜನರ ಭಾವನೆ ಕೆಡಿಸುತ್ತಿರುವ ಬಿಜೆಪಿ ನಾಯಕರ ಮಾತಗೆ ಮುಂದಿನ ಚುನಾವಣೆಗಳಲ್ಲಿ ಜನರಿಂದ ತಕ್ಕ ಪಾಠ ಕಲಿಸಲಿದ್ದಾರೆ. ಸಿ.ಟಿ ರವಿ ವಿಚಿತ್ರವಾಗಿ ಹೇಳಿಕೆ ನೀಡುತ್ತಿದ್ದರು. ರಾಜಕೀಯಕ್ಕೆ ಅಯೋಗ್ಯರೆಂದು ಜನ ಸೋಲಿಸಿದ್ದಾರೆ. ಅವರ ಹೇಳಿಕೆ ಯಾರೂ ಗಂಭೀರವಾಗಿ ಪರಿಗಣಿಸಲ್ಲ. ಎಲ್ಲಾ ಧರ್ಮ, ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.