ಬಿಜೆಪಿ ಸರ್ಕಾರದಿಂದ ಬಡವರ ಉದ್ಧಾರ ಆಗಿಲ್ಲ: ಸಚಿವ ಈಶ್ವರ್‌ ಖಂಡ್ರೆ

By Kannadaprabha NewsFirst Published Jun 1, 2024, 6:51 PM IST
Highlights

ಬಿಜೆಪಿಯಿಂದ ದೇಶದ ಉದ್ಧಾರ ಸಾಧ್ಯವಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಉದ್ಧಾರ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. 

ಔರಾದ್ (ಜೂ.01): ಬಿಜೆಪಿಯಿಂದ ದೇಶದ ಉದ್ಧಾರ ಸಾಧ್ಯವಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಉದ್ಧಾರ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಘೂಳೆ ಕಲ್ಯಾಣ ಮಂಟಪದಲ್ಲಿ ನಡೆದ ಪದವೀಧರ ಮತಕ್ಷೇತ್ರದ ಚುನಾವಣೆ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಪರ ಯಾವುದೇ ಯೋಜನೆ ಜಾರಿಗೆ ತರದೇ ಕೇವಲ ಅದಾನಿ, ಅಂಬಾನಿ ಪರ ಕೆಲಸ ಮಾಡಿದೆ. ಎಲ್ಲವೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಕಾಂಗ್ರೆಸ್ ಸರ್ಕಾರ. ಈ ಭಾಗಕ್ಕೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದರಿಂದ 70 ವೈದ್ಯಕೀಯ ಸೀಟುಗಳಿಂದ 700ಕ್ಕೆ ಏರಿಕೆಯಾಗಿದೆ. ದುಡಿವ ಕೈಗಳಿಗೆ ಕೆಲಸ ನೀಡುವುದು ಕಾಂಗ್ರೆಸ್ ಸರ್ಕಾರರದ ಮೊದಲ ಆದ್ಯತೆ. ಆದರೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಗ್ಯಾರಂಟಿ ಜಾರಿಗೆ ತರುವ ಮೂಲಕ 30 ಸಾವಿರಕ್ಕೂ ಹೆಚ್ಚು ಹುದ್ದೆ ನೇಮಕಾತಿ ಮಾಡಿಕೊಂಡಿದೆ. ಅಲ್ಲದೇ 30-40 ಸಾವಿರಕ್ಕೂ ಹೆಚ್ಚು ಹುದ್ದೆಗಳ ಅಧಿಸೂಚನೆ ಹೊರಡಿಸಿದೆ. ನಿರುದ್ಯೋಗಿಗಳಿಗೆ ಸ್ಪಂದಿಸುವದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

Latest Videos

ಎಂಎಲ್ಸಿ ಭೀಮರಾವ ಪಾಟೀಲ್ ಮಾತನಾಡಿ, ಹಳೆ ಪಿಂಚಣಿ ಅನುಷ್ಠಾನ, ಖಾಲಿ ಹುದ್ದೆಗಳ ನೇಮಕಾತಿ ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿವೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಮುಖ್ಯವಾಗಿದೆ ಎಂದರು. ಮುಖಂಡ ಡಾ. ಭೀಮಸೇನರಾವ ಶಿಂಧೆ, ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ಮಾಜಿ ತಾಪಂ ಉಪಾಧ್ಯಕ್ಷ ನೇಹರು ಪಾಟೀಲ್, ಶಿವರಾಜ ದೇಶಮುಖ, ಡಾ. ಪೈಯಾಜ್ ಅಲೀ, ರಾಮಣ್ಣ ವಡಿಯಾರ್, ಜಾನ್ ವಿಸ್ಲಿ, ಹಣಮಂತರಾವ ಚವ್ಹಾಣ, ಸುಧಾಕರ ಕೊಳ್ಳುರ್, ಚನ್ನಪ್ಪ ಉಪ್ಪೆ, ಪ್ರಕಾಶ ಪಾಟೀಲ್, ಅಮರ ಜಾಧವ್, ನಾಗಪ್ಪ ಮಾಸ್ಟರ್, ಸಾಯಿಕುಮಾರ, ಸುನಿಲಕುಮಾರ ದೇಶಮುಖ, ಬಸವರಾಜ ದೇಶಮುಖ ಸೇರಿ ಅನೇಕರಿದ್ದರು.

ನಮಾಜ್‌ ವಿವಾದದ ಹಿಂದೆ ಸಾಮರಸ್ಯ ಹದಗೆಡಿಸುವ ಉದ್ದೇಶ: ರಮಾನಾಥ ರೈ

ಎಂಪಿ ಚುನಾವಣೆ ಗೆಲ್ಲುವ ವಿಶ್ವಾಸ: ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಗೆಲುವಿಗಾಗಿ ಔರಾದ್ ತಾಲೂಕಿನ ಜನ ಶ್ರಮಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿಯ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಔರಾದನಿಂದ ಕನಿಷ್ಟ 15-20 ಸಾವಿರ ಲೀಡ್ ಕಾಂಗ್ರೆಸ್‌ಗೆ ಸಿಗಲಿದೆ ಎಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕಳೆದ 10 ವರ್ಷದಿಂದ ಡಾ. ಭೀಮಸೇನರಾವ ಶಿಂಧೆ ಅವರು ಕಾರ್ಯಕರ್ತರೊಂದಿಗೆ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಅಥವಾ ಅರ್ಹರಿಗೆ ಗುರುತಿಸಿ ಔರಾದ್ ತಾಲೂಕಿನ ವ್ಯಕ್ತಿಗೆ ಈ ಬಾರಿ ಎಂಎಲ್ಸಿ ಮಾಡಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಇಲ್ಲಿಯ ಕಾರ್ಯಕರ್ತರು ಲಿಖಿತ ಮನವಿಪತ್ರ ಸಲ್ಲಿಸಿದರು.

click me!