ಗ್ಯಾರಂಟಿ ಯೋಜನೆಯಿಂದ ಜನರ ಬದುಕಿನಲ್ಲಿ ಬದಲಾವಣೆ: ಸಚಿವ ಎಂ.ಸಿ.ಸುಧಾಕರ್‌

By Kannadaprabha NewsFirst Published Aug 6, 2023, 7:44 PM IST
Highlights

ಬಡ ಮತ್ತು ಮಧ್ಯಮ ವರ್ಗದವರಿಗೆ ಗೃಹಜ್ಯೋತಿ ಯೋಜನೆ ಬಹಳ ನೆರವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರ (ಆ.06): ಅವರು ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ, ಸರ್ಕಾರದ 5 ಗ್ಯಾರಂಟಿಗಳ ಮೊದಲನೆ ಯೋಜನೆ ‘ಗೃಹ ಜ್ಯೋತಿ’ ಯೋಜನೆ. ಈ ಯೋಜನೆ ಸರ್ವರಿಗೂ ಉಪಯೋಗಕಾರಿಯಾಗಿದ್ದು, ಗರಿಷ್ಠ 200 ಯೂನಿಟ್‌ ವರೆಗೂ ಗೃಹ ಬಳಕೆಯ ಉಚಿತ ವಿದ್ಯುತ್‌ ನೀಡುವ ಯೋಜನೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನ ಆಗಲಿದೆ ಎಂದರು.

ಜನರ ಬದುಕಿನಲ್ಲಿ ಬದಲಾವಣೆ: ಗೃಹಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳು ಸೇರಿದಂತೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ನಮ್ಮ ನೂತನ ಸರ್ಕಾರ ಅಲ್ಪ ಅವಧಿಯಲ್ಲಿ ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೆ ತಂದಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2.51 ಕೋಟಿ ರಿಯಾಯಿತಿ ಜನರಿಗೆ ಸಿಕ್ಕಿದೆ. ಈ ಯೋಜನೆಯಿಂದ ಜನರ ಸಾಮಾಜಿಕ ಬದುಕಿನಲ್ಲಿ ಹೆಚ್ಚಿನ ಬದಲಾವಣೆ ತಂದಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. 

ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಆದ್ಯತೆ ನೀಡಿ: ಶಾಸಕ ಪ್ರದೀಪ್‌ ಈಶ್ವರ್‌

ಇಂತಹ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದಿಸಿದರು. ಪದವಿ ಪಡೆದು 6 ತಿಂಗಳ ಒಳಗೆ ಉದ್ಯೋಗ ಸಿಗದವರಿಗೆ ಯುವ ನಿಧಿ ಯೋಜನೆಯಡಿ ಪ್ರೋತ್ಸಾಹ ಧನ ನೀಡುವ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮಾತನಾಡಿ. ಜಿಲ್ಲೆಯಲ್ಲಿ 3.28ಲಕ್ಷ ಮಂದಿ ವಿದ್ಯುತ್‌ ಗ್ರಾಹಕರಿದ್ದಾರೆ. ಈ ಪೈಕಿ ಜೂನ್‌ 18 ರಿಂದ ಜಿಲ್ಲೆಯಲ್ಲಿ ಈವರೆಗೆ 2.10 ಲಕ್ಷ ಗ್ರಾಹಕರನ್ನು ನೋಂದಾಯಿಸಿಲಾಗಿದೆ. ಈಪೈಕಿ 76,434 ಗ್ರಾಹಕರಿಗೆ ಶೂನ್ಯ ಬಿಲ್‌ ಅನ್ನು ಈವರೆಗೆ ವಿತರಿಸಲಾಗಿದೆ ಎಂದರು.

ಬಡ, ಮಧ್ಯಮ ವರ್ಗಕ್ಕೆ ಅನುಕೂಲ: ಗೌರಿಬಿದನೂರು ಶಾಸಕ ಕೆ.ಎಚ್‌. ಪುಟ್ಟಸ್ವಾಮಿ ಗೌಡ ಮಾತನಾಡಿ ಸರ್ಕಾರದ ವಿನೂತನ ಯೋಜನೆಗಳಾದ ಗೃಹಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆ ಹಾಗೂ ಅನ್ನ ಭಾಗ್ಯ ಯೋಜನೆಗಳು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚು ನೆರವಾಗುವುದರಿಂದ ಜನಪರ ಯೋಜನೆಗಳಾಗಲಿವೆ. ಈವರೆಗೆ ಗೃಹ ಜ್ಯೋತಿ ಯೋಜನೆಯಡಿ ನೋಂದಣಿ ಆಗದವರು ಕೂಡಲೇ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ದಿನ ಒಂದೊತ್ತಿನ ಊಟಕ್ಕೂ ಹೋರಾಟ ನಡೆಸುವಂತಹ ವರ್ಗದ ಜನರಿಗೆ ದೇವರಂತೆ ಕಾಣಿಸುತ್ತವೆ. ಇಂತಹ ಯೋಜನೆಗಳ ಫಲಾನುಭವಗಳನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.

ಶೂನ್ಯ ಬಿಲ್‌ಗಳ ವಿತರಣೆ: ಕಾರ್ಯಕ್ರಮದಲ್ಲಿ ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಶೂನ್ಯ ಬಿಲ್‌ ಗಳನ್ನು ವಿತರಿಸಲಾಯಿತು ಹಾಗೂ ಈ ಯೋಜನೆಯ ಮಾಹಿತಿಯುಳ್ಳ ಪೋಸ್ಟರ್‌ ಗಳನ್ನು ಬಿಡುಗಡೆಗೊಳಿಸಲಾಯಿತು. ಶೂನ್ಯ ಬಿಲ್‌ ಸ್ವೀಕರಿಸಿದ ಫಲಾನುಭವಿ ಜಿ.ಸಿ. ಮಂಜುನಾಥ್‌ ಮಾತನಾಡಿ, ವಿದ್ಯುತ್‌ ಬಿಲ್‌ ಪಾವತಿಸಲು ಕೆಲವೊಮ್ಮೆ ನನಗೆ ಆರ್ಥಿಕವಾಗಿ ಕಷ್ಟಕರವಾಗುತ್ತಿತ್ತು ಆದರೆ ಈ ಯೋಜನೆಯಡಿ ಈ ತಿಂಗಳ ಶೂನ್ಯ ಬಿಲ್‌ ನೋಡಿ ಸಂತೋಷವಾಗಿದೆ. ಮುಂದಿನ ತಿಂಗಳ ಬಿಲ್ಲು ಪಾವತಿಸುವ ಆತಂಕ ದೂರವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯೋಜನೆ ಹೆಚ್ಚು ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಕಾಂಗ್ರೆಸ್‌ ಸರ್ಕಾರದಿಂದ ಕೆಲಸ: ಸಚಿವ ವೆಂಕಟೇಶ್‌

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್‌.ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಿ.ಎಲ್‌. ನಾಗೇಶ್‌, ಅಪರ ಜಿಲ್ಲಾಧಿಕಾರಿ ಡಾ.ಎನ್‌. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ.ಎಚ್‌. ಅಶ್ವಿನ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎನ್‌. ಭಾಸ್ಕರ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್‌, ಬೆಸ್ಕಾಂನ ಕಾರ್ಯನಿರ್ವಹಕ ಅಭಿಯಂತರರಾದ ಆನಂದ್‌ ಕುಮಾರ್‌, ಬಿ.ಎನ್‌ಶುಭ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಖಾಧಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್‌,ರಮೇಶ್‌, ಕೋಚಿಮುಲ್‌ ನಿರ್ಧೇಶಕ ಭರಣಿ ವೆಂಕಟೇಶ್‌, ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು.

click me!