ಮನಮೋಹನ್‌ ಸಿಂಗ್‌ರನ್ನು ಡಮ್ಮಿ ಪ್ರಧಾನಿ ಮಾಡಿದ್ರು: ಸಚಿವ ಸುಧಾಕರ್‌

By Kannadaprabha NewsFirst Published Feb 9, 2023, 3:20 AM IST
Highlights

ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಾಯಕರಿದ್ದಾರೆ. ಸಮರ್ಥ ನಾಯಕರಾಗಿರುವುದರಿಂದ ನಾವು ಅವರನ್ನು ಕರೆಸುತ್ತೇವೆ. ನಮಗೆ ಈ ಬಗ್ಗೆ ಹೆಮ್ಮೆ ಇದೆ. ಹಿಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರನ್ನು ಡಮ್ಮಿ ಮಾಡಿದ್ದರು. 

ಚಿಕ್ಕಬಳ್ಳಾಪುರ (ಫೆ.09): ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಾಯಕರಿದ್ದಾರೆ. ಸಮರ್ಥ ನಾಯಕರಾಗಿರುವುದರಿಂದ ನಾವು ಅವರನ್ನು ಕರೆಸುತ್ತೇವೆ. ನಮಗೆ ಈ ಬಗ್ಗೆ ಹೆಮ್ಮೆ ಇದೆ. ಹಿಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರನ್ನು ಡಮ್ಮಿ ಮಾಡಿದ್ದರು. ಹೀಗಾಗಿ, ಕಾಂಗ್ರೆಸ್‌ನವರು ಆಗಲೂ ರಾಹುಲ್‌ ಗಾಂಧಿ, ಈಗಲೂ ರಾಹುಲ್‌ ಗಾಂಧಿ ಅವರನ್ನೇ ಕರೆ ತರುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಪ್ರಧಾನಿಯನ್ನು ರಾಜ್ಯಕ್ಕೆ ಕರೆ ತರಲಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್‌ನವರಿಗೆ ಪ್ರಧಾನಿ ಇದ್ದಾಗಲೂ ಕರೆ ತರುವ ನಾಯಕತ್ವ ಇರಲಿಲ್ಲ. ಅದಕ್ಕೆ ಯಾರು ಹೊಣೆ?. ಹಿಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅವರನ್ನು ಡಮ್ಮಿ ಮಾಡಿದ್ದರು. ಆಗಲೂ ರಾಹುಲ್‌ ಗಾಂಧಿ, ಈಗಲೂ ರಾಹುಲ್‌ ಗಾಂಧಿ ಅವರನ್ನೇ ಕರೆ ತರುತ್ತಾರೆ. ಪಾಪ, ಅವರನ್ನು ರಸ್ತೆ ರಸ್ತೆಗಳಲ್ಲಿ ಅಲೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ: ಸಂಸದ ಮುನಿಸ್ವಾಮಿ

ನಮಗೆ ಸಮರ್ಥ ಪ್ರಧಾನಿ ಇದ್ದಾರೆ. ಕರೆತರುತ್ತೇವೆ. ನಮ್ಮದು ರಾಜಕೀಯ ಪಕ್ಷ. ನಮಗೆ ಯಾರಿಂದ ಅನುಕೂಲವಾಗಲಿದೆ, ಯಾರಿಂದ ಪೂರಕ ವಾತಾವರಣ ಆಗಲಿದೆ ಅವರನ್ನು ಕರೆಯಿಸುತ್ತೇವೆ. ಅಮಿತ್‌ ಶಾ ಅವರಿಂದ ಅನುಕೂಲವಾದರೆ ಅವರನ್ನೂ ಕರೆಸುತ್ತೇವೆ. ಇದು ನಮ್ಮ ಪಕ್ಷದ ನಿಲುವು. ನಿಮ್ಮ ಪಕ್ಷಕ್ಕೆ ನಾವು ಇಂತವರನ್ನು ಕರೆ ತನ್ನಿ, ಇಂತವರನ್ನು ಬೇಡ ಎಂದು ಹೇಳುತ್ತಿದ್ದೇವೆಯೇ. ರಾಜ್ಯದಲ್ಲಿ ಮಹಿಳಾ ನಾಯಕಿಯರು ಇಷ್ಟುಜನ ಇರುವಾಗ ‘ನಾ ನಾಯಕಿ’ ಎಂದು ಪ್ರಿಯಾಂಕ ಗಾಂಧಿ ಅವರನ್ನು ಯಾಕೆ ಕರೆ ತಂದರು. ಮೊದಲು ನಿಮ್ಮ ತಟ್ಟೆಯಲ್ಲಿ ಏನಿದೆ ಎಂಬುದನ್ನು ನೋಡಿಕೊಳ್ಳಿ ಎಂದು ಕಾಂಗ್ರೆಸ್‌ಗೆ ಕಿವಿ ಮಾತು ಹೇಳಿದರು.

ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆಗೆ ಯತ್ನ: ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆ ಮಾಡಲು ಮುಂದಿನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಐಐಟಿ ಸ್ಥಾಪನೆ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಲಾಗುವುದು. ಜೊತೆಗೆ, ಮೋದಿ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಯವರಿಂದ ಇದಕ್ಕೆ ಶಿಫಾರಸ್ಸು ಪತ್ರ ಕೊಡಿಸಲಾಗುವುದು ಎಂದರು.

ಪಿಎಫ್ಐ ಸಂಘಟನೆಯಿಂದ ಜೀವ ಬೆದರಿಕೆ: ಮೇಲುಕೋಟೆ ಯತಿರಾಜ ಜೀಯರ್‌ಗೆ ವೈ ಮಾದರಿ ಭದ್ರತೆ

ಸರ್‌.ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಎಂಜಿನಿಯರ್‌ ಡೇ ಆಗಿ ಆಚರಿಸಲಾಗುತ್ತಿದೆ. ಅವರ ಹುಟ್ಟೂರಿನಲ್ಲಿ ಐಐಟಿ ತೆರೆದರೆ ಅವರಿಗೆ ನಿಜವಾದ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ. ಮುದ್ದೇನಹಳ್ಳಿ, ರಾಜಧಾನಿ ಬೆಂಗಳೂರಿಗೆ ಅತೀ ಸಮೀಪದಲ್ಲಿದ್ದು, ಬೋಧಕರಿಗೆ ಕೊರತೆ ಇಲ್ಲ. ಹಾಗಾಗಿ ಐಐಟಿ ಮಾಡಲು ಮುದ್ದೇನಹಳ್ಳಿ ಯೋಗ್ಯ ಸ್ಥಳವಾಗಿದೆ. ಜೊತೆಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಮುದ್ದೇನಹಳ್ಳಿಯನ್ನು ಶಿಕ್ಷಣ ವಲಯವಾಗಿ ಬದಲಿಸುವ ಪಣ ತೊಟ್ಟಿದ್ದೇನೆ ಎಂದು ಸುಧಾಕರ್‌ ಹೇಳಿದರು.

click me!