
ಬೆಂಗಳೂರು (ಏ.23): ಚುನಾವಣೆ ಎಂಬುವುದು ಈ ಮಟ್ಟಕ್ಕೆ ಎಂದಿಗೂ ಹೋಗಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಹುದ್ದೆಯ ಘನತೆ ಮರೆತು ಧರ್ಮದ ಆಧಾರದ ಮೇಲೆ ಕೀಳು ಹೇಳಿಕೆ ನೀಡಿರುವುದು ದುರದೃಷ್ಟಕರ. ಹಿಂದೆ ಯಾವೊಬ್ಬ ಪ್ರಧಾನಿಯೂ ಈ ಮಟ್ಟಕ್ಕೆ ಇಳಿದು ಮಾತನಾಡಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇಲ್ಲಿಯವರೆಗೆ ಚುನಾವಣೆಯಲ್ಲಿ ಈ ಮಟ್ಟಕ್ಕೆ ಪರಸ್ಪರ ದ್ವೇಷ ಮಾಡುವುದನ್ನು ನೋಡಿರಲಿಲ್ಲ. ದೇಶದಲ್ಲಿ ಶಾಂತಿ ಕಾಪಾಡಬೇಕಿರುವುದು ಪ್ರಧಾನಿಗಳ ಹೊಣೆ. ಅಂತಹ ಪ್ರಧಾನಮಂತ್ರಿಗಳೇ ಧರ್ಮದ ಆಧಾರದ ಮೇಲೆ ಮಾತನಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಮತಕ್ಕಾಗಿ ದ್ವೇಷದ ಭಾಷಣ ಮಾಡುವುದು ಸರಿಯಲ್ಲ. ಜನರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಕಿಡಿ ಕಾರಿದರು.
ಕರ್ನಾಟಕಕ್ಕೆ ಬರ ಪರಿಹಾರ, ಸುಪ್ರೀಂ ಕೋರ್ಟ್ ಆದೇಶ ಕೇಂದ್ರ ಸರ್ಕಾರಕ್ಕೆ ಮುಖಭಂಗ: ಸಚಿವ ದಿನೇಶ್ ಗುಂಡೂರಾವ್
ನೇಹಾ ಹಿರೇಮಠ ಕೊಲೆ ವಿಚಾರವನ್ನು ಕೆಲವರು ಚುನಾವಣಾ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನೇಹಾಗಾಗಿ ಮತ ಹಾಕಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಕೊಲೆ ಮಾಡಿದವನು ಮುಸ್ಲಿಂ ಆಗಿರುವುದಕ್ಕೆ ಕಾಂಗ್ರೆಸ್ ಅವರ ಪರ ಇದೆ ಎನ್ನುತ್ತಿದ್ದಾರೆ. ನನ್ನ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾವು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವನ ಮೇಲೆ ಎಷ್ಟು ಕಠಿಣ ಕ್ರಮ ಕೈಗೊಳ್ಳಬೇಕೋ ಕಾನೂನು ಪ್ರಕಾರ ಕೈಗೊಳ್ಳುತ್ತೇವೆ ಎಂದರು.
ಯಾರ ಬೆನ್ನಿಗೂ ಚೂರಿ ಹಾಕಿಲ್ಲ: ಕಾಂಗ್ರೆಸ್ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಆ ಸಂಪ್ರದಾಯವೂ ನಮ್ಮಲ್ಲಿಲ್ಲ. ನಮ್ಮ ಜೊತೆ ಮೈತ್ರಿ ಮಾಡಿಕೊಂಡ ಪಕ್ಷದವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಮಾರ್ಗಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಗೌಡರನ್ನು ಪ್ರಧಾನಿ ಮಾಡಿದೆವು. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಎಲ್ಲಾ ಮಿತ್ರಪಕ್ಷಗಳನ್ನೂ ವಿಶ್ವಾಸದಿಂದ ಕಂಡಿದ್ದೇವೆ.
ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಾವೆಂದಿಗೂ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಿದ್ದ ತೆರಿಗೆ ಹಣವನ್ನು ನೀಡಿಲ್ಲ. ಜಿಎಸ್ಟಿ ಪಾಲನ್ನೂ ಕೊಡುತ್ತಿಲ್ಲ. ಬರಪರಿಹಾರಕ್ಕೆ ನಯಾಪೈಸೆಯನ್ನೂ ಇಲ್ಲಿವರೆಗೆ ಕೊಟ್ಟಿಲ್ಲ. ಇವರಿಗೆ ಜನರು ಮತ ಏಕೆ ಕೊಡಬೇಕು. ನಾವು ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮತ ಕೇಳುವ ನೈತಿಕತೆ ಕಾಂಗ್ರೆಸ್ಗೆ ಮಾತ್ರ ಇದೆ ಎಂದರು.
ಚೊಂಬು ಜಾಹೀರಾತಿಂದ ಬಿಜೆಪಿಗೆ ಎಚ್ಚರ ಆಗಿದೆ: ಡಿ.ಕೆ.ಶಿವಕುಮಾರ್
ತೆರಿಗೆ ಹಣದ ಬಗ್ಗೆ ಕೇಳಿದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಲೆಕ್ಕ ಹೇಳುತ್ತಾರೆ. ಅಂದು ಸಂಗ್ರಹವಾಗುತ್ತಿದ್ದ ತೆರಿಗೆ ಹಣ ಕೇವಲ 1 ಲಕ್ಷ ಕೋಟಿ ರು. ಮಾತ್ರ. ಈಗ 4.50 ಲಕ್ಷ ಕೋಟಿ ರು. ತೆರಿಗೆ ಹಣ ಪಾವತಿಸುತ್ತಿದ್ದೇವೆ. ಅವರು ಕೊಡುತ್ತಿರುವುದು 50 ಸಾವಿರ ಕೋಟಿ ರು. ಮಾತ್ರ. ತೆರಿಗೆ ಹಣ ನೀಡುವಲ್ಲಿ ಅನ್ಯಾಯವೆಸಗಿರುವವರನ್ನು ಅಧಿಕಾರದಿಂದ ದೂರವಿಡಬೇಕು. ಕಾಂಗ್ರೆಸ್ ಈ ಚುನಾವಣೆಯಲ್ಲಿ 20ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.