'ಕುಮಾರಸ್ವಾಮಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ'

By Kannadaprabha NewsFirst Published Jan 22, 2021, 9:12 AM IST
Highlights

ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನಗೆ ಸಮಾನ ಶತ್ರುಗಳು| ನಾನು ಸಚಿವನಾಗಿರುವುದರಿಂದ ಅವರಿಗೆ ಭಯ ಆಗಿದೆ| ಎಚ್‌ಡಿಕೆ ಕ್ಷೇತ್ರದಲ್ಲಿ ಸುಮ್ಮನೆ ಸುತ್ತಾಟ, ಸಚಿವರ ಮನೆಗೆ ಓಡಾಟ: ಸಚಿವ ಯೋಗೇಶ್ವರ್‌| 

ಬೆಂಗಳೂರು(ಜ.22):  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದು, ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಅವರ ಬಗ್ಗೆ ಅಯ್ಯೋ ಪಾಪ ಅನಿಸುತ್ತದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‌ ವ್ಯಂಗ್ಯವಾಡಿದ್ದಾರೆ.

ರಾಮನಗರ, ಚನ್ನಪಟ್ಟಣ ಎರಡು ಕಣ್ಣುಗಳು ಇದ್ದಂತೆ ಎಂಬ ಹೇಳಿಕೆಗೆ ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿರುಗೇಟು ನೀಡಿದ ಅವರು, ಪಾಪ ಕುಮಾರಸ್ವಾಮಿ ಆಗಾಗ್ಗೆ ಈ ರೀತಿ ಹೇಳುತ್ತಿರುತ್ತಾರೆ. ಮೊದಲು ಬಿಜೆಪಿಯನ್ನು ಪ್ರೀತಿ ಮಾಡುತ್ತಿದ್ದರು. ಈಗ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡುತ್ತಾರೆ. ಅವರ ಜತೆ ಅಡ್ಜೆಸ್ಟ್‌ಮೆಂಟ್‌ ರಾಜಕಾರಣ ಮಾಡಬಾರದು ಎಂದು ನಮ್ಮ ನಾಯಕರಿಗೆ ಹೇಳಿದ್ದೆ. ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಕುಮಾರಸ್ವಾಮಿ ಅವರಿಗೆ ಆತಂಕ ಎದುರಾಗಿದ್ದು, ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕೆಲಸ ಮಾಡಲಿಲ್ಲ. ಈಗ ಸುಮ್ಮನೆ ಕ್ಷೇತ್ರದಲ್ಲಿ ಸುತ್ತು ಹಾಕುತ್ತಿದ್ದಾರೆ. ಸಚಿವರ ಮನೆಗಳಿಗೆ ಓಡಾಡುತ್ತಿದ್ದಾರೆ. ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮನೆಗೂ ಹೋಗಿದ್ದರು ಎಂದು ಲೇವಡಿ ಮಾಡಿದರು.

ಪೂರ್ಣಾ​ವಧಿ ಆಡ​ಳಿ​ತಕ್ಕೆ ಒಕ್ಕ​ಲಿಗ​ರಿಗೆ ಶಾಪವಿದೆ : ಇವರದ್ದೆಲ್ಲಾ ಅರ್ಧದ ಅಧಿಕಾರ

ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನಗೆ ಸಮಾನ ಶತ್ರುಗಳು. ನಾನು ಸಚಿವನಾಗಿರುವುದರಿಂದ ಅವರಿಗೆ ಭಯ ಆಗಿದೆ ಎಂದು ಹೇಳಿದರು.

ಖಾತೆ ಬಗ್ಗೆ ಖುಷಿ ಇದೆ

ಮುಖ್ಯಮಂತ್ರಿಗಳು ನೀಡಿರುವ ಖಾತೆ ಬಗ್ಗೆ ಖುಷಿ ಇದೆ. ನಾನು ಮೂಲತಃ ಕೃಷಿಕ ಕುಟುಂಬದಿಂದ ಬಂದವನು. ನೀರಾವರಿ ಇಲಾಖೆ ನನಗೆ ಇಷ್ಟವಾದ ಖಾತೆ. ನನಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನೀರಾವರಿ ವಿಚಾರದಲ್ಲಿ ನಮ್ಮ ತಾಲೂಕು ಇಡೀ ರಾಜ್ಯಕ್ಕೆ ಮಾದರಿ ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ. 
 

click me!