ಬಿಜೆಪಿ ಎಂಬ ಬುಲ್ಡೋಜರ್‌ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು

By Govindaraj SFirst Published Jan 25, 2023, 7:47 PM IST
Highlights

ದೇಶದಲ್ಲಿ ಕಾಂಗ್ರೆಸ್‌ ಧೂಳೀಪಟವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬುಲ್ಡೋಜರ್‌ ಆಗಿ ಕಾಂಗ್ರೆಸ್‌ ಅನ್ನು ನೆಲಸಮ ಮಾಡಲಿದೆ.  ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. 

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಿರೇಕೆರೂರು (ಜ.25): ದೇಶದಲ್ಲಿ ಕಾಂಗ್ರೆಸ್‌ ಧೂಳೀಪಟವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬುಲ್ಡೋಜರ್‌ ಆಗಿ ಕಾಂಗ್ರೆಸ್‌ ಅನ್ನು ನೆಲಸಮ ಮಾಡಲಿದೆ.  ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. 

ಹಿರೇಕೆರೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿ, ರೈಲು ಬಿಡುವ ಯಾತ್ರೆಯನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. 60 ವರ್ಷ ಜನರಿಗೆ ಮೋಸ ಮಾಡಿ, ಪರಿಶಿಷ್ಟ ಜನರನ್ನು ‘ವೋಟ್‌ ಬ್ಯಾಂಕ್‌’ ಮಾಡಿಕೊಂಡು ಕಾಂಗ್ರೆಸ್‌ ಅಧಿಕಾರ ಅನುಭವಿಸಿತು. ದಲಿತ ಮತ್ತು ಹಿಂದುಳಿದ ನಾಯಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ನಾಯಕರು ಪರಿಶಿಷ್ಟ ವರ್ಗದವರಿಗೆ ಯಾವ ಉಪಕಾರವನ್ನೂ ಮಾಡಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಲು ಬಿಜೆಪಿಯೇ ಬರಬೇಕಾಯಿತು ಎಂದರು. 

ಹಳೇ ಕ್ಯಾಸೆಟ್‌ಗಳು: ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಹಳೇ ಕ್ಯಾಸೆಟ್‌ಗಳಿದ್ದಂತೆ. ಹಳೇ ರಾಗ, ಹಳೇ ತಾಳ ನುಡಿಸುತ್ತಾರೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅಧಿಕಾರ ಲಾಲಸೆಯಿಂದ ಅನೇಕ ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ. ಮೋದಿ, ಬೊಮ್ಮಾಯಿ, ಯಡಿಯೂರಪ್ಪ ಇರುವ ತನಕ ನೀವ್ಯಾರು ಸಿಎಂ ಆಗಲು ಸಾಧ್ಯವಿಲ್ಲ ಎಂದು ನುಡಿದರು. 

ನನ್ನ ಟ್ವೀಟರ್‌ ಖಾತೆ ಹ್ಯಾಕ್‌ ಆಗಿದೆ: ಸಚಿವ ಶ್ರೀರಾಮುಲು

ರಾಹುಲ್‌ ಕಾಲಿಟ್ಟರೆ ಮಟಾಶ್‌: ರಾಹುಲ್‌ ಗಾಂಧಿ ಹೋದ ಕಡೆಯಲ್ಲ ಕಾಂಗ್ರೆಸ್‌ ಪಕ್ಷ ಮಟಾಶ್‌ ಆಗಿದೆ. ರಾಜ್ಯದಲ್ಲೂ 2023ರಲ್ಲಿ ಕಾಂಗ್ರೆಸ್‌ ಮಟಾಶ್‌ ಆಗಲಿದೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಯವರು ಕಾಂಗ್ರೆಸ್‌ಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ. ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸಿದರೆ, ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಹಪಾಹಪಿಸುತ್ತಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಹಾವು–ಮುಂಗುಸಿ ಇದ್ದಂತೆ. ಅಡ್‌ಜಸ್ಟ್‌ಮೆಂಟ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಜರಿದರು.

click me!