ಡಿ.ಕೆ. ಶಿವಕುಮಾರ್‌ರನ್ನ ಜೈಲಿಗೆ ಕಳಿಸಲು ಕುಮಾರಸ್ವಾಮಿ-ಅಮಿತ್ ಶಾ ಸಂಚು: ಶಾಸಕ ಗಣಿಗ ರವಿಕುಮಾರ್ ಸ್ಫೋಟಕ ಹೇಳಿಕೆ!

Published : Jul 15, 2026, 06:37 PM IST
Mandya MLA Ganiga Ravikumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಜಂಟಿಯಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಆರೋಪಿಸಿದ್ದಾರೆ. ಇಡಿ, ಸಿಬಿಐ ಬಳಸಿ ಸಿಎಂಗೆ ತೊಂದರೆ ನೀಡುವುದಲ್ಲದೆ, ಬಿಡದಿ AI ಸಿಟಿ ಯೋಜನೆಗೂ ಅಡ್ಡಿಪಡಿಸಿ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ (ಜು.15): ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ರಾಜಕೀಯ ಷಡ್ಯಂತ್ರಗಳು ತೀವ್ರಗೊಂಡಿವೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅಮಿತ್ ಶಾ ಅವರು ಸಿಎಂ ವಿರುದ್ಧ ಜಂಟಿಯಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಇಡಿ, ಸಿಬಿಐ ಬಳಸಿ ಸಿಎಂಗೆ ತೊಂದರೆ:

ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, 'ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿದಿನವೂ ಸಂಚು ನಡೆಯುತ್ತಿದೆ. ಅಮಿತ್ ಶಾ ಅವರೊಂದಿಗೆ ಕೈಜೋಡಿಸಿರುವ ಕುಮಾರಸ್ವಾಮಿ ಅವರು, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ಅನ್ನು ಬಳಸಿಕೊಂಡು ಸಿಎಂ ಅವರನ್ನ ಜೈಲಿಗಾಕಲು ಷಡ್ಯಂತ್ರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಮಾಡಲೂ ಆಗುವುದಿಲ್ಲ, ಅಭಿವೃದ್ಧಿ ಮಾಡುವವರಿಗೂ ಅವರು ಬಿಡುವುದಿಲ್ಲ' ಎಂದು ಕಿಡಿಕಾರಿದರು.

ಬಿಡದಿ AI ಸಿಟಿ ಮತ್ತು ರೈತರಿಗೆ ದ್ರೋಹ:

ಬಿಡದಿಯಲ್ಲಿ 'AI ಸಿಟಿ' (ಕೃತಕ ಬುದ್ಧಿಮತ್ತೆ ನಗರ) ನಿರ್ಮಾಣ ಮಾಡುವುದು ಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಾಗಿತ್ತು. ಇದರಿಂದ ಹಳೆ ಮೈಸೂರು ಭಾಗದ ರೈತರ ಜಮೀನಿಗೆ ಚಿನ್ನದ ಬೆಲೆ ಬಂದು ಸಮಗ್ರ ಅಭಿವೃದ್ಧಿಯಾಗುತ್ತಿತ್ತು. ಆದರೆ ಕುಮಾರಸ್ವಾಮಿ ಅವರು ಈ ಯೋಜನೆಗೆ ಅಡ್ಡಿಪಡಿಸಿ ಒಕ್ಕಲಿಗ ರೈತರು ಉದ್ಧಾರವಾಗುವುದನ್ನು ತಡೆಯುತ್ತಿದ್ದಾರೆ. ಹಿಂದೆ ಬಿಡದಿಯಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುವುದನ್ನೂ ಇವರೇ ತಪ್ಪಿಸಿದ್ದರು. ಅಂದು ವಿಮಾನ ನಿಲ್ದಾಣವಾಗಿದ್ದರೆ ಈ ಭಾಗದ ಚಿತ್ರಣವೇ ಬದಲಾಗುತ್ತಿತ್ತು ಎಂದು ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ವಿರುದ್ಧ ಹಳೆಯ ವಿಚಾರಗಳ ಪ್ರಸ್ತಾಪ:

'ಈ ಹಿಂದೆ ಎಸ್.ಎಂ. ಕೃಷ್ಣ ಅವರಿಗೂ ಇದೇ ರೀತಿ ತೊಂದರೆ ಕೊಟ್ಟಿದ್ದರು, ಈಗ ಡಿ.ಕೆ. ಶಿವಕುಮಾರ್ ಅವರಿಗೂ ಅದೇ ರೀತಿ ಮಾಡುತ್ತಿದ್ದಾರೆ. ಹಿಂದೆ ಅಕ್ಕ ಸಮ್ಮೇಳನದ ವಿಚಾರವಾಗಿ ಅಮೆರಿಕದ ನಿಯೋಗ ಕುಮಾರಸ್ವಾಮಿ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿ ಮಾಡಿದ್ದಾಗ, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಕುಮಾರಸ್ವಾಮಿ ಅವರು ಏನೆಲ್ಲಾ ಮಾತನಾಡಿದ್ದರು ಎಂಬುದು ನಮಗೆ ತಿಳಿದಿದೆ. ಆ ವಿಷಯ ಮಾಧ್ಯಮಗಳಲ್ಲಿ ಬಂದಾಗ ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಆ ಸಮಯದಲ್ಲಿ ಅವರು ಏನು ಮಾತನಾಡಿದ್ದರು ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ' ಎಂದು ಶಾಸಕರು ಎಚ್ಚರಿಕೆ ನೀಡಿದರು.

ಕೈಗಾರಿಕಾ ಸಚಿವರಾಗಿ ಹೆಚ್‌ಡಿಕೆ ವೈಫಲ್ಯ:

ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಅವರು, 'ಕೈಗಾರಿಕೆ ತನ್ನಿ ಎಂದರೆ ನನ್ನನ್ನ ಯಾಕೆ ಕೇಳ್ತೀರಾ ಎನ್ನುತ್ತಾರೆ. ನೀವು ಕೈಗಾರಿಕಾ ಸಚಿವರಾದ ಮೇಲೆ ನಾವು ಕೈಗಾರಿಕೆಯನ್ನೇ ಕೇಳಬೇಕು. ಹಾಸನದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಶೂನ್ಯ. ರೇವಣ್ಣ ಮತ್ತು ದೇವೇಗೌಡರ ಕಾರಣದಿಂದ ಹಾಸನ ಅಭಿವೃದ್ಧಿಯಾಗಿದೆ' ಎಂದರು.

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಮುಂದುವರೆದರೆ ಅಪ್ಪ-ಮಕ್ಕಳ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಭಯದಿಂದಲೇ ಕುಮಾರಸ್ವಾಮಿ ಅವರು ಬಿಡದಿ ಟೌನ್ ಶಿಪ್ ಸೇರಿದಂತೆ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Satish Jarkiholi: ಸಿದ್ದರಾಮಯ್ಯ ಜೊತೆ ಅಸಮಾಧಾನ, ರಾಜ್ಯದ ಸಮಸ್ಯೆ ಅಲ್ಲ, ನಮ್ಮ ಸಮಸ್ಯೆ- ಜಾರಕಿಹೊಳಿ
ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಡಿಕೆಶಿ ಮನವಿ