
ಮಂಡ್ಯ (ಮೇ 17) : ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರಸ್ವಾಮಿ ಮತ್ತು ಮಾಜಿ ಶಾಸಕ ಅನ್ನದಾನಿ ನಡುವೆ ವಾಕ್ಸಮರ ತೀವ್ರವಾಗಿದೆ. ಮಾಜಿ ಶಾಸಕ ಅನ್ನದಾನಿ ಅವರನ್ನು ಹಾಡಿನ ಗಿರಾಕಿ ಎಂದು ಕರೆದರೆ, ಇದಕ್ಕೆ ಪ್ರತಿಯಾಗಿ ಹಾಲಿ ಶಾಸಕ ನರೇಂದ್ರಸ್ವಾಮಿ ಇಸ್ಪೀಟ್ ಗಿರಾಕಿ ಎಂದು ಕರೆಯುತ್ತಾ ಸಾರ್ವಜನಿಕ ವೇದಿಕೆಗಳಲ್ಲಿ ಪರಸ್ಪರ ರಾಜಕೀಯ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಶಾಸಕ ನರೇಂದ್ರಸ್ವಾಮಿ, ಮಳವಳ್ಳಿ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಭೂಮಿ ಲೂಟಿ ಬಗ್ಗೆ ಚರ್ಚೆ ಮಾಡಿ, ಈ ಅಕ್ರಮದಲ್ಲಿ ಮಾಜಿ ಶಾಸಕರ ಪಾತ್ರವಿದೆ ಎಂದು ನೇರವಾಗಿ ಹೆಸರಿಲ್ಲದೆ ಪ್ರಸ್ತಾಪಿಸಿದ್ದರು. 'ಅಕ್ರಮಗಳಿಗೆ ಗೆಸ್ಟ್ ಹೌಸ್ಗಳಲ್ಲಿ ಕೂತು ಹಾಡು ಹಾಡುತ್ತಿದ್ದ ದುಷ್ಟ ಕೂಟ ಕಾರಣ' ಎಂಬ ಟೀಕೆ ಮೂಲಕ ಮಾಜಿ ಶಾಸಕ ಅನ್ನದಾನಿ ಅವರ ಹೆಸರನ್ನು ಹೇಳಿದ್ದರು. ಶಾಸಕ ನರೇಂದ್ರಸ್ವಾಮಿ ಹೇಳಿಕೆಯಿಂದ ಮಾಜಿ ಶಾಸಕ ಅನ್ನದಾನಿ ಕೆಂಡಾಮಂಡಲವಾಗಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಅನ್ನದಾನಿ, ತೀಕ್ಷ್ಣವಾಗಿಯೇ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಿದ್ದಾರೆ. 'ನನ್ನನ್ನು ಹಾಡಿನ ಗಿರಾಕಿ ಅಂತೀರಾ? ಹೌದು, ನಾನು ಹಾಡು ಹೇಳುವ ಗಿರಾಕಿನೇ. ಜಾನಪದದಲ್ಲಿ ಪಿಎಚ್ಡಿ ಮಾಡಿಕೊಂಡಿದ್ದೇನೆ. ಜಾನಪದ ಹಾಡನ್ನು ಬಿಟ್ಟು ನಾನೇನಾದರೂ ಡಿಸ್ಕೋ ಡ್ಯಾನ್ಸ್ ಮಾಡಿದ್ದೀನಾ? ನಮ್ಮ ಕ್ಷೇತ್ರದಲ್ಲಿ ಭೂಮಿ ಲೂಟಿ ಮಾಡಿದ ಬಗ್ಗೆ ನಾನೇ ರಧ್ವನಿ ಎತ್ತಿದ್ದೇನೆ. ಇದರ ಬಗ್ಗೆ ನನ್ನ ಬಳಿ ಈಗಳು ಸಾಕಷ್ಟು ದಾಖಲೆಗಳಿವೆ. ನಾನು ನಿನ್ನಂಗೆ ಗೂಂಡಾಗಿರಿ, ರೌಡಿಸಂ ಮಾಡೋಕೆ ಬಂದಿಲ್ಲ. ಐಬಿಗಳಲ್ಲಿ ಮೋಜು ಮಸ್ತಿ ಮಾಡೋಕೆ ನಾನು ಹೋಗಿಲ್ಲ' ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ನೀನು ಎಲ್ಲಿದ್ದೆ?
ನಾನು 'ಕೊರೊನಾ ಸಮಯದಲ್ಲಿ ನಾನು ಜನರ ಮಧ್ಯೆ ಇದ್ದೆ. ಅವರಿಗೆ ಹಾಡು ಹಾಡಿ ಧೈರ್ಯ ತುಂಬಿದ್ದೆ. ನೀನು ಆಗ ಬೆಂಗಳೂರಲ್ಲಿ ಇಸ್ಪೀಟ್ ತಿಂದ್ಕೊಂಡು ಕುಳಿತಿದ್ದೆ. ಜೊತೆಗೆ ನದಿಯಿಂದ ಕದ್ದು ಮರಳು ಹೊಡೆಯುತ್ತಿದ್ದ ಗಿರಾಕಿ ನೀನು. 'ನೀನು ಇಸ್ಪೀಟ್ ಗಿರಾಕಿ, ನಾನು ಹಾಡಿನ ಗಿರಾಕಿ. ನನ್ನನ್ನು ಮತ್ತೆ ಮತ್ತೆ ಕೆಣಕಬೇಡ, ಗೆದ್ದಿದ್ದೀಯಾ ಕೆಲಸ ಮಾಡು' ಎಂದು ಮಾಜಿ ಶಾಸಕ ಅನ್ನದಾನಿ ಅವರು ನರೇಂದ್ರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಳವಳ್ಳಿ ತಾಲೂಕಿನಲ್ಲಾದ ಅಭಿವೃದ್ಧಿ ಕೆಲಸಗಳು ತಮ್ಮಿಂದಲೇ ಆಗಿದೆ ಎಂದು ಶಾಸಕ ನರೇಂದ್ರಸ್ವಾಮಿ ಬಿಂಬಿಸಿಕೊಳ್ಳುತ್ತಿದ್ದು, ಅವರು ಮಂತ್ರಿಯಾಗಿ, ಶಾಸಕರಾಗಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ತಾಲೂಕಿಗೆ ತಂದಿದ್ದಾರೆ ಎಂಬುದರ ದಾಖಲೆ ಬಿಡುಗಡೆ ಮಾಡಿ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ 20 ಮತ್ತು 14 ತಿಂಗಳ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ದಾಖಲೆ ಪ್ರಕಟಿಸಿದರು. ಶಾಸಕ ನರೇಂದ್ರಸ್ವಾಮಿ ಅವರು, ತಾವು ಮಾಡಿದ ಅಭಿವೃದ್ಧಿ ಕೆಲಸಗಳ ದಾಖಲೆ ಸಮೇತ ಚರ್ಚೆಗೆ ಬರಲಿ. ಅವರೇ ದಿನಾಂಕ ನಿಗದಿ ಪಡಿಸಿ. ಚರ್ಚೆಗೆ ಕರೆಯಲಿ ಎಂದು ಸವಾಲು ಹಾಕಿದರು.
ನಾನು ದೇವರಾಜ ಅರಸು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ವೇಳೆ ಹಿಂದುಳಿದ ವರ್ಗದ ಜನರಿಗೆ ಅನುದಾನ ಒದಗಿಸಿ, ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದ್ದೇನೆ. ಇದರಿಂದ ಕುರುಬ, ಕುಂಬಾರ, ತಿಗಳ ಸೇರಿದಂತೆ ಹಲವು ಸಮಾಜದವರು ಅಭಿವೃದ್ಧಿಯ ಹಾದಿಗೆ ಸಾಗಲು ಸಹಕಾರಿಯಾಗಿದೆ ಎಂದು ದಾಖಲೆಗಳನ್ನು ಮುಂದಿಟ್ಟರು. 2024 ಜ.01ರಂದು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದವು. ಅದರ ಫಲವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆದು 305 ಎಕರೆಯ ಅಕ್ರಮ ಖಾತೆಗಳ ರದ್ದು ಮಾಡಲಾಗಿದೆ. ಈಗ ಇದರ ಲಾಭವನ್ನು ಮಿಸ್ಟರ್ ಎಂಎಲ್ಎ ಪಡೆಯುತ್ತಿದ್ದಾರೆ. ಪೂರಿಗಾಲಿಯಲ್ಲಿ ಶಾಲೆಯ ಕಾಂಪೌಂಡ್ ಹಾಗೂ ವಾಟರ್ ಟ್ಯಾಂಕ್ ತೆರವುಗೊಳಿಸಿ ಮನೆ ನಿರ್ಮಿಸಿರುವುದಾಗಿ ಗ್ರಾಮದ ಫಣೀಶ್ ದೂರು ದಾಖಲು ಮಾಡಿದ್ದಾರೆ. ಇಂತಹ ಅಕ್ರಮಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.