
ನವದೆಹಲಿ (ಫೆ.22): ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರ್ಕಾರ ರಚನೆಯಾಗೋದು ಖಂಡಿತ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಮಂಗಳವಾರ ನಾಗಾಲ್ಯಾಂಡ್ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 100 ಮಂದಿ ನರೇಂದ್ರ ಮೋದಿ, 100 ಮಂದಿ ಅಮಿತ್ ಶಾ ಬಂದರೂ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾಗೋದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. 2024ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳನ್ನು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲಿದೆ. ಈ ಕುರಿತಾಗಿ ನಾವು ಇತರ ಪಕ್ಷಗಳೊಂದಿಗೂ ಮಾತನಾಡುತ್ತಿದ್ದೇವೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ದೇಶದಲ್ಲಿ ಕೊನೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತಾವೊಬ್ಬ ಸರ್ವಾಧಿಕಾರಿ ಎನ್ನುವ ರೀತಿಯಲ್ಲಿ ವರ್ತನೆ ತೋರುತ್ತಿದ್ದಾರೆ.
ಮೋದಿ-ಬಿಜೆಪಿ ಬಗ್ಗೆ ಖರ್ಗೆ ಹೇಳಿದ ನಾಲ್ಕು ಪ್ರಮುಖ ಮಾತುಗಳು: 2024ರ ಲೋಕಸಭಾ ಚುನಾವಣೆಯಲ್ಲಿ ನಾವು ಮೋದಿಗೆ ಪಾಠ ಕಲಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೋದಿ ಒಮ್ಮೊಮ್ಮೆ ಹೇಳುತ್ತಿರುತ್ತಾರೆ. ದೇಶವನ್ನು ಹಾಗೂ ದೇಶದ ಜನರನ್ನು ಎದುರಿಸುವ ವ್ಯಕ್ತಿ ಯಾರಾದರೂ ಇದ್ದರೆ ಅದು ತಾವು ಮಾತ್ರ ಎಂದು ಮೋದಿ ಹೇಳುತ್ತಿರುತ್ತಾರೆ. ದೇಶದ ಮತ್ತೆ ಯಾರೂ ಕೂಡ ಅವರನ್ನು ಟಚ್ ಮಾಡಲು ಕೂಡ ಸಾಧ್ಯವಿಲ್ಲವಂತೆ. ಪ್ರಜಾಪ್ರಭುತ್ವ ದೇಶದಲ್ಲಿರುವ ಪ್ರಧಾನಿಯೊಬ್ಬ ಇಂಥ ಮಾತುಗಳನ್ನು ಹೇಳಲು ಸಾಧ್ಯವಿಲ್ಲ. ನೀವು ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿದ್ದೀರಿ ಎಂದು ಪ್ರಧಾನಿ ಮೋದಿ ನೆನಪು ಮಾಡಿಕೊಳ್ಳಬೇಕು. ನೀವು ಸರ್ವಾಧಿಕಾರಿಯಲ್ಲ. ನೀವು ಜನರಿಂದ ಆಯ್ಕೆಯಾಗಿದ್ದೀರಿ ಮತ್ತು ನಿಮ್ಮನ್ನು ಆಯ್ಕೆ ಮಾಡಿದ ಜನರು 2024 ರಲ್ಲಿ ನಿಮಗೆ ಪಾಠ ಕಲಿಸುತ್ತಾರೆ' ಎಂದು ಹೇಳಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವದೊಂದಿಗೆ ನಡೆಯುತ್ತೇವೆ: 'ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದ್ದು, ಕಾಂಗ್ರೆಸ್ ಈ ಸರ್ಕಾರವನ್ನು ಮುನ್ನಡೆಸಲಿದೆ. ನಾವು ಇತರ ಪಕ್ಷಗಳೊಂದಿಗೆ ಮಾತನಾಡುತ್ತಿದ್ದೇವೆ. ನಾವು ಜನರೊಂದಿಗೆ ಮಾತನಾಡುತ್ತೇವೆ, ನಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. 2024ರ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದಿನ ಬಾರಿ ಬಿಜೆಪಿಗೆ ಬಹುಮತ ಬರುವುದಿಲ್ಲ. ಬೇರೆ ಪಕ್ಷಗಳನ್ನು ಒಟ್ಟುಗೂಡಿಸಿ ಕಾಂಗ್ರೆಸ್ ನಾಯಕತ್ವದಲ್ಲಿ ಬಹುಮತ ಪಡೆಯುತ್ತೇವೆ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದೊಂದಿಗೆ ಮುನ್ನಡೆಯುತ್ತೇವೆ ಎಂದಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ 'ಕೈ' ಬಲಪಡಿಸಲು ಖರ್ಗೆ ಟಾಸ್ಕ್!
ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ: 100 ಮೋದಿ, 100 ಶಾಗಳು ಬೇಕಾದರೆ ಬರಲಿ, ಇದು ಹಿಂದುಸ್ತಾನ. ನಮ್ಮ ಜನ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಪ್ರಾಣ ಕೊಟ್ಟಿದ್ದಾರೆ. ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಲೂ ಇಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋದ ಬಿಜೆಪಿಯವರು ಯಾರಾದರೂ ಇದ್ದರೆ ತಿಳಿಸಿ ಎಂದಿದ್ದಾರೆ.
ಅಮಿತ್ ಶಾ ರಾಜಕಾರಣಿ, ಪೂಜಾರಿಯಲ್ಲ, ರಾಮ ಮಂದಿರ ಉದ್ಘಾಟನೆ ಘೋಷಣೆಗೆ ಕೆರಳಿದ ಖರ್ಗೆ!
ಗಾಂಧಿಯನ್ನು ಕೊಂದ ಜನ ಅವರು: 'ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಮಹಾತ್ಮಾ ಗಾಂಧಿ ಅವರನ್ನು ಇವರೇ ಕೊಂದರು. ಅಂಥವರು ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣ ಕೊಟ್ಟವರು ನಮ್ಮ ಹೋರಾಟವನ್ನು ಮುನ್ನಡೆಸಿದ್ದಾರೆ. ಇಂದಿರಾಜಿ, ರಾಜೀವ್ ಗಾಂಧಿ ದೇಶದ ಐಕ್ಯತೆಗಾಗಿ ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಪ್ರಾಣ ಕೊಟ್ಟವರು ಯಾರು. 2014ರಲ್ಲಿ ಮಾತ್ರ ಸ್ವಾತಂತ್ರ್ಯ ಬಂದಿದೆ ಎಂದುಕೊಂಡಿರುವ ಅವರಿಗೆ 1947 ನೆನಪಿಲ್ಲ' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.