
ಮಹಾರಾಷ್ಟ್ರ[ಅ.18]: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. 370ನೇ ವಿಧಿ ರದ್ದತಿ ಬಗ್ಗೆ ಕುಹಕವಾಡಿದವರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿರುತ್ತದೆ. ಅಂತಹ ವ್ಯಕ್ತಿಗಳನ್ನು ದಂಡಿಸುವ ಅವಕಾಶ ಮಹಾರಾಷ್ಟ್ರಕ್ಕೆ ಲಭಿಸಿದೆ ಎಂದು ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರಳಿಯಲ್ಲಿ ಚುನಾವಣಾ ರಾರಯಲಿ ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆ ಬಿಜೆಪಿಯ ಕಾರ್ಯಶಕ್ತಿ ಹಾಗೂ ಪ್ರತಿಪಕ್ಷಗಳ ಸ್ವಾರ್ಥಶಕ್ತಿಯ ನಡುವಣ ಕದನವಾಗಿದೆ. ದೇಶದ ವಿರುದ್ಧ ಮಾತನಾಡುತ್ತಿರುವವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂಬ ವಿಚಾರದಲ್ಲಿ ಜನತೆಯನ್ನು ಹಾಗೂ ಅವರ ದೇಶಭಕ್ತಿಯನ್ನು ನಾನು ನಂಬುತ್ತೇನೆ. ದೇಶ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ನಾಯಕರು ಆಮ್ಲಜನಕ ಒದಗಿಸಿದ್ದಾರೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಮೋದಿಗೆ ಏಕೆ ಮುಖ್ಯ?.
ಒಂದು ವೇಳೆ ಕಾಶ್ಮೀರದಲ್ಲಿ ಹಿಂದುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಷ್ಟ್ರೀಯ ಐಕ್ಯತೆಯಲ್ಲೂ ಹಿಂದು ಹಾಗೂ ಮುಸ್ಲಿಮರ ಬಗ್ಗೆ ಯೋಚಿಸುತ್ತೀರಲ್ಲಾ ಇದು ನಿಮಗೆ ಸೂಕ್ತವೇ ಎಂದು ಚಾಟಿ ಬೀಸಿದರು.
370ನೇ ವಿಧಿಯನ್ನು ರದ್ದುಗೊಳಿಸಿದ್ದು ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದಂತೆ, ಭಾರತ- ಪಾಕಿಸ್ತಾನ ವಿಷಯ ಆಂತರಿಕ ವಿಚಾರವಲ್ಲ, 370ನೇ ವಿಧಿ ರದ್ದತಿ ದೇಶವನ್ನು ವಿಪತ್ತಿಗೆ ದೂಡಲಿದೆ, ಕಾಶ್ಮೀರ ಕಳೆದುಹೋಗಿದೆ ಎಂದೆಲ್ಲಾ ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಅವರು ಹೇಳಿದ್ದೆಲ್ಲವನ್ನು ತಿಳಿಸೋಣ ಎಂದರೆ ಪಟ್ಟಿಉದ್ದವಿದೆ. ಅದನ್ನು ಓದಲು ಹೊರಟರೆ ಅ.21ರವರೆಗೂ ನಾನು ಇಲ್ಲೇ ಇರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆದಿತ್ಯ ಠಾಕ್ರೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.