ಅಘಾಡಿ ಕಲಹ: ಶಿವಸೇನಾ ಸಂಸದ ಜಾಧವ್‌ ರಾಜೀನಾಮೆ

By Kannadaprabha NewsFirst Published Aug 28, 2020, 4:30 PM IST
Highlights

ಸ್ವಂತ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ನ್ಯಾಯ ಒದಗಿಸಲಾಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಶಿವಸೇನಾ ಸಂಸದ ಸಂಜಯ ಜಾಧವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ಆ.28): ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸಮ್ಮಿಶ್ರ ಸರ್ಕಾರದ ಆಂತರಿಕ ಕುಸ್ತಿಯ ಮೊದಲ ‘ವಿಕೆಟ್‌ ಪತನ’ ಆಗಿದೆ. ಪರಭಣಿ ಲೋಕಸಭಾ ಕ್ಷೇತ್ರದ ಶಿವಸೇನಾ ಸಂಸದ ಸಂಜಯ ಜಾಧವ್‌ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಪರಭಣಿ ಜಿಲ್ಲಾ ಎಪಿಎಂಸಿಗೆ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬೆಂಬಲಿಗನನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ‘ಸ್ವಂತ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ನ್ಯಾಯ ಒದಗಿಸಲಾಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ. 

‘ಆಡಳಿತಾಧಿಕಾರಿ ನೇಮಕ ಸಂಬಂಧ ಕಳೆದ 8-10 ತಿಂಗಳಿನಿಂದ ಬೆನ್ನು ಬಿದ್ದಿದ್ದೆ. ಆದರೆ ಈಗ ಎನ್‌ಸಿಪಿ ಬೆಂಬಲಿಗನನ್ನು ಸರ್ಕಾರೇತರ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದು ಶಿವಸೇನಾ ಕಾರ್ಯಕರ್ತರಿಗೆ ಮಾಡಿದ ಅವಮಾನ’ ಎಂದು ಅವರು ಹೇಳಿದ್ದಾರೆ.

ಮೋದಿ ಹೆಸರು ಬಳಸಿದರೆ ಸಾಲದು, ಕೆಲಸ ಮಾಡಿ ತೋರಿಸಿ: MLAಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಾರ್ನಿಂಗ್!

ನಾನು ಮೊದಲಿನಿಂದಲೂ ಬಾಳಾಸಾಹೇಬ್ ಠಾಕ್ರೆ ಅವರ ಹಿಂಬಾಲಕನಾಗಿದ್ದುಕೊಂಡು ಶಿವಸೇನೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನಿಂದ ಜನರ ಪರವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಸಂಸದನಾಗಿದ್ದು ಏನು ಪ್ರಯೋಜನ ಎಂದು ಹೇಳಿದ್ದಾರೆ.

ಶಿವಸೇನಾ ಪಕ್ಷದ ಕಾರ್ಯುಕರ್ತರನ್ನು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದವರು ವ್ಯವಸ್ಥಿತವಾಗಿ ಬದಿಗೆ ಸರಿಸುತ್ತಿದ್ದಾರೆ ಎಂದು ಜಾಧವ್ ಆರೋಪಿಸಿದ್ದಾರೆ. ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮುನ್ನ ಜಾಧವ್ ಪರಭಣಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದರು.

click me!