ಮಗ ಸೋತ ಜಾಗದಲ್ಲಿ ಗೆದ್ದು ಬೀಗಿದ ಅಪ್ಪ: ಗೆಲುವಿಗೆ ಕಾರಣವಾಯ್ತು ಎಚ್‌ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ

By Govindaraj SFirst Published Jun 4, 2024, 9:38 PM IST
Highlights

ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ವತಃ ಅಗ್ನಿ ಪರೀಕ್ಷೆಗೆ ಇಳಿದಿದ್ದ ಎಚ್.ಡಿ.ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 

ವರದಿ: ನಂದನ್ ರಾಮಕೃಷ್ಣ, ಮಂಡ್ಯ

ಮಂಡ್ಯ (ಜೂ.04): ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ವತಃ ಅಗ್ನಿ ಪರೀಕ್ಷೆಗೆ ಇಳಿದಿದ್ದ ಎಚ್.ಡಿ.ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಎಚ್ಡಿಕೆಗೆ ಭಾರೀ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಒಟ್ಟು 5,67,261 ಮತಗಳನ್ನ ಪಡೆದರೆ. 8,51,881 ಮತಗಳನ್ನು ಗಳಿಸಿದ ಕುಮಾರಸ್ವಾಮಿ ಬರೋಬ್ಬರಿ 2,84,620 ಮತಗಳ ಭರ್ಜರಿ ಗೆಲುವು ಕಂಡಿದ್ದಾರೆ.

Latest Videos

ಮಂಡ್ಯ ಜೆಡಿಎಸ್‌‌ಗೆ ಹೊಸ ಉಸಿರು ಕೊಟ್ಟ ಎಚ್ಡಿಕೆ ಗೆಲುವು: ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಖಿಲ್ ಸೋತ ಬಳಿಕ ಮಂಡ್ಯದಲ್ಲಿ ಜೆಡಿಎಸ್‌ ಸತತ ಹಿನ್ನಡೆ ಅನುಭವಿಸಿತು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್‌ ಕೇವಲ ಒಂದು ಸ್ಥಾನಕ್ಕಷ್ಟೇ ತೃಪ್ತಿ ಪಡಬೇಕಾಯಿತು. ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ದಳಪಡೆಗೆ ಕುಮಾರಸ್ವಾಮಿ ಗೆಲುವು ಹೊಸ ಉತ್ಸಾಹ ಕೊಟ್ಟಿದೆ. ಮಗ‌ ನಿಖಿಲ್ ಸೋತ ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ.

ಚಿತ್ರದುರ್ಗ: ಹೊರಗಿನವರು ಎಂದವರಿಗೆ ಭರ್ಜರಿ ಗೆಲುವಿನ ಮೂಲಕ ಉತ್ತರ ಕೊಟ್ಟ ಗೋವಿಂದ ಕಾರಜೋಳ

ಗೆಲುವಿಗೆ ಕಾರಣವಾಯ್ತು ಎಚ್ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ: ಭದ್ರಕೋಟೆ ಮಂಡ್ಯ ಉಳಿದುಕೊಳ್ಳುವುದು ಜೆಡಿಎಸ್‌‌ಗೆ ಅನಿವಾರ್ಯವಾಗಿತ್ತು. ಹಾಗಾಗಿ ಕುಮಾರಸ್ವಾಮಿ ‌ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಹೆಚ್ಚಾಗಿತ್ತು.‌ ಕಾರ್ಯಕರ್ತರ ಮನವಿಗೆ ಓಗೊಟ್ಟು ಎಚ್ಡಿಕೆ ಸ್ಪರ್ಧೆಗೆ ಸಮ್ಮತಿಸಿದ್ರು. ಎಚ್ಡಿಕೆ ಗೆಲುವಿಗೆ ಟೊಂಕ‌‌ ಕಟ್ಟಿನಿಂತ ಜೆಡಿಎಸ್‌ ನಾಯಕರಿಗೆ ಬಿಜೆಪಿ ಕಾರ್ಯಕರ್ತರು ಹೆಗಲಾದರು. ಕ್ಷೇತ್ರದಾದ್ಯಂತ ಎಚ್ಡಿಕೆಗೆ ಇದ್ದ ಅಭಿಮಾನ, ನಾಮಬಲ ಗೆಲುವಿಗೆ ವರದಾನವಾಯ್ತು. ಎಚ್ಡಿಕೆ ಗೆದ್ದರೆ ಕೇಂದ್ರ ಸಚಿವರಾಗ್ತಾರೆ ಅನ್ನೋ ಪ್ರಚಾರ,‌ ಕಾವೇರಿ ಉಳಿವಿಗಾಗಿ ಕುಮಾರಸ್ವಾಮಿ ಅನಿವಾರ್ಯ ಅನ್ನೋ ಜನರಲ್ಲಿದ್ದ ಭಾವನೆ ದೊಡ್ಡ ಅಂತರ ಸಾಧಿಸಲು ಸಹಕರಿಸಿತು.

click me!