Lok Sabha Election 2024: ಮಾಧುಸ್ವಾಮಿ ಭೇಟಿಯಾದ ಸೋಮಣ್ಣ, ಕೈಗೂಡದ ಮನವೊಲಿಕೆಯ ಪ್ರಯತ್ನ

By Kannadaprabha NewsFirst Published Mar 27, 2024, 6:23 AM IST
Highlights

ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌.ಸೋಮಣ್ಣ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. 

ತುಮಕೂರು (ಮಾ.27): ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ‌.ಸೋಮಣ್ಣ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಮಾಧುಸ್ವಾಮಿ ಬೆಂಬಲ ನೀಡಲು ಒಲವು ತೋರಲಿಲ್ಲ ಎನ್ನಲಾಗಿದೆ.

ಚಿಕ್ಕನಾಯಕನಹಳ್ಳಿ ಜೆ.ಸಿ.ಪುರದಲ್ಲಿನ ಮಾಧುಸ್ವಾಮಿ ಮನೆಗೆ ಮಂಗಳವಾರ ಮಾಜಿ ಸಚಿವ ಬಿ.ಸಿ.ನಾಗೇಶ್ ಅವರ ಜತೆ ಭೇಟಿ ನೀಡಿದ ಸೋಮಣ್ಣ ಅವರು ಮಾಧುಸ್ವಾಮಿ ಮನವೊಲಿಕೆಗೆ ಯತ್ನಿಸಿದರು. ಆದರೆ ಮಾಧುಸ್ವಾಮಿ ತಾನು ಯಾವುದೇ ಕಾರಣಕ್ಕೂ ನಿಲುವು ಬದಲಿಸುವುದಿಲ್ಲ. ಜಿಲ್ಲೆಯಲ್ಲಿ ಯುವಕರಿಗೆ ಅವಕಾಶ ಸಿಗಬೇಕೆಂದು ಪಟ್ಟು ಹಿಡಿದರು. ಸಂಸದ ಜಿ‌.ಎಸ್.ಬಸವರಾಜು ಅವರನ್ನು ನೆಚ್ಚಿಕೊಂಡು ಚುನಾವಣೆ ಮಾಡುವಂತೆ ಸವಾಲೆಸೆದರು ಎಂದು‌ ತಿಳಿದುಬಂದಿದೆ.

ಲೋಕಸಭಾ ಚುನಾವಣೆಯಿಂದ ದೇಶದ ಭವಿಷ್ಯ ನಿರ್ಧಾರ: ವಿ.ಸೋಮಣ್ಣ

ಮೋದಿಯವರ ಯೋಜನೆಗಳೇ ನನಗೆ ಶ್ರೀರಕ್ಷೆ: ದೇಶದ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ನಿಶ್ವಯಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ಶತಃಸಿದ್ಧ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು. ಗುಬ್ಬಿ ತಾಲೂಕಿನ ತೇವಡೆಹಳ್ಳಿ, ಹೊಸಕೆರೆ ಭಾಗಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಜ‌ನಪರ ಯೋಜನೆಗಳೇ ನನಗೆ ಶ್ರೀರಕ್ಷೆಯಾಗಲಿವೆ. 

ಬಿಜೆಪಿ ಬಡವರ ಪರ ಕೆಲಸ ಮಾಡಿದ್ದು, ಮತ್ತೊಮ್ಮೆ ಮೋದಿಯವರು ದೇಶದ ಪ್ರಧಾನಿಯಾಗಲಿದ್ದಾರೆ. ದೇಶದಲ್ಲಿ ಬಿಜೆಪಿ ಹಾಗೂ ಎನ್ ಡಿಎ ಮೈತ್ರಿ ಕೂಟ ಅತಿದೊಡ್ಡ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತದೆ. ತುಮಕೂರಿನ ಜನತೆ ಈ ಬಾರಿ ನನ್ನನ್ನು ಆಶೀರ್ವದಿಸಲಿದ್ದಾರೆ. ತುಮಕೂರನ್ನು ಇಡೀ ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುತ್ತೇನೆ. ಚುನಾವಣೆ ಪ್ರಚಾರದ ವೇಳೆ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಮಾಡುತ್ತಿದ್ದಾರೆ. 

ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ

ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಗ್ಗಾಟ್ಟಾಗಿ ಚುನಾವಣೆ ಮಾಡುತ್ತೇವೆ. ತುಮಕೂರಿನಲ್ಲಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ದಕ್ಷಿಣಾಮೂರ್ತಿ, ಪ್ರಸನ್ನ ಕುಮಾರ್ , ಮಹಾರುದ್ರಸ್ವಾಮಿ , ಜಿ.ಎನ್.ಬೆಟ್ಟಸ್ವಾಮಿ , ಚಂದ್ರಶೇಖರಬಾಬು , ಹಾರನಹಳ್ಳಿ ಪ್ರಭಾ ಬಾಲರಾಮಣ್ಣ , ಚಂದ್ರಶೇಖರ್ , ಹಿತೇಶ್ , ಮೋಹನ್, ಮಂಜುನಾಥ್ ಇದ್ದರು.

click me!