ಮೋದಿಗೆ ಅಧಿಕಾರ ಸಿಕ್ಕರೆ ರಾಜ್ಯದ ಪ್ರಗತಿ ಕುಂಠಿತ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Apr 15, 2024, 5:12 PM IST
Highlights

ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಯಾವಾಗಲೂ ಕರ್ನಾಟಕದ ನೀರಾವರಿ, ಕೃಷಿ ಅಭಿವೃದ್ದಿ ಸೇರಿದಂತೆ ಎಲ್ಲದಕ್ಕೂ ವಿರೋಧಿಯಾಗಿ ನಡೆದುಕೊಂಡು ಬರುತ್ತಿರುವ ಸರ್ಕಾರವಾಗಿದ್ದು, ಮತ್ತೊಮ್ಮೆ ಮೋದಿಗೆ ಅಧಿಕಾರ ಸಿಕ್ಕಿದರೆ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. 
 

ತಿಪಟೂರು (ಏ.15): ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಯಾವಾಗಲೂ ಕರ್ನಾಟಕದ ನೀರಾವರಿ, ಕೃಷಿ ಅಭಿವೃದ್ದಿ ಸೇರಿದಂತೆ ಎಲ್ಲದಕ್ಕೂ ವಿರೋಧಿಯಾಗಿ ನಡೆದುಕೊಂಡು ಬರುತ್ತಿರುವ ಸರ್ಕಾರವಾಗಿದ್ದು, ಮತ್ತೊಮ್ಮೆ ಮೋದಿಗೆ ಅಧಿಕಾರ ಸಿಕ್ಕಿದರೆ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ತಿಪಟೂರು, ತುರುವೇಕೆರೆ, ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಳೆದ ಬಾರಿ ರಾಜ್ಯದಿಂದ ೨೫ ಬಿಜೆಪಿಯಿಂದ ಸಂಸದರು ಆಯ್ಕೆಯಾಗಿ ಸಂಸತ್‌ಗೆ ಹೋಗಿದ್ದರೂ ೫ ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅಭಿವೃದ್ಧಿ, ನೀರಾವರಿ, ಬರ ಸೇರಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ನೀಡುವಂತೆ ಸಂಸತ್‌ನಲ್ಲಿ ಒಬ್ಬರೂ ಪ್ರಸ್ತಾಪಿಸಲಿಲ್ಲ. ಈ ಸಂಸದರೆಲ್ಲ ಮೋದಿ ಕಂಡರೆ ಗಡಗಡ ನಡುಗುತ್ತ ಪಕ್ಕಕ್ಕೆ ಸರಿಯುತ್ತಿದ್ದರು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ, ಕರ್ನಾಟಕ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಹಣವನ್ನೂ ನೀಡದೆ ವಂಚಿಸಿದ್ದಾರೆ. ಬರದಂತ ಪ್ರಮುಖ ಸಮಸ್ಯೆಗೂ ನಯಾಪೈಸೆ ಹಣ ನೀಡಿಲ್ಲದ ಇವರಿಗೆ ಯಾವುದೇ ಕಾರಣಕ್ಕೂ ಮತ ನೀಡಕೂಡದು ಎಂದರು.

ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ: ನಿಖಿಲ್ ಕುಮಾರಸ್ವಾಮಿ

ನರೇಂದ್ರ ಮೋದಿ ಸರ್ಕಾರ ೨ಬಾರಿ ಅಧಿಕಾರಕ್ಕೆ ಬರುವಾಗಲೂ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊ ಬ್ಬರ ಖಾತೆಗೂ ೧೫ ಲಕ್ಷ ಹಣ ಹಾಕುತ್ತೇವೆಂದು ಹಸಿ ಸುಳ್ಳು ಹೇಳಿದ್ದು ಬಿಟ್ಟರೆ ೧ ರೂಪಾಯಿ ಸಹ ಹಾಕಲಿಲ್ಲ. ೨ ಕೋಟಿ ಉದ್ಯೋಗ ನೀಡುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಸುಳ್ಳು ಹೇಳಿ ಮತ ಪಡೆದು ಅಧಿಕಾರ ಅನುಭವಿಸಿ ಬಡವರನ್ನು ಬಡವರನ್ನಾಗಿಸುತ್ತಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದೇ ಅವರ ೧೦ ವರ್ಷಗಳ ಬಹುದೊಡ್ಡ ಸಾಧನೆಯಾಗಿದೆ. ಈ ಬಾರಿ ಚುನಾವಣೆಗೆ ನಮ್ಮ ಗ್ಯಾರಂಟಿ ಪದ ಕದ್ದು ಇದು ನಮ್ಮ ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದು, ಬಿಜೆಪಿಯವರ ಮನೆ ದೇವರೇ ಸುಳ್ಳು. 

ಅವರ ಯಾವುದೇ ಮಾತುಗಳು, ಭರವಸೆಗಳು ಮತ್ತು ಗ್ಯಾರಂಟಿಗಳನ್ನು ನಂಬಕೂಡದು ಹಾಗೂ ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಇದನ್ನು ಹೇಳಿ ಕಾಂಗ್ರೆಸ್‌ಗೆ ಮತ ಹಾಕಿಸಬೇಕೆಂದರು. ಇಲ್ಲಿನ ಬಿಜೆಪಿ ಅಭ್ಯರ್ಥಿ ಸೋಮಣ್ಣ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಹಾಗೂ ಶಾಸಕ ಪುಟ್ಟರಂಗ ಶೆಟ್ಟಿ ವಿರುದ್ಧ ನಿಂತು ಬಹಳ ಮತಗಳ ಅಂತರದಿಂದ ಸೋತು ವಾಪಸ್ ಬಂದು ಈಗ ತುಮಕೂರಿನಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿಯ ಬಿಜೆಪಿ ಸರ್ಕಾರ ಸಾಕಷ್ಟು ಲೂಟಿ ಮಾಡಿದ್ದ ಸರ್ಕಾರವಾಗಿದ್ದು, ಇದರ ಪಾಲುದಾರರಲ್ಲಿ ಈ ಸೋಮಣ್ಣನು ಒಬ್ಬ. 

ಅವನ ಬಳಿ ಸಾಕಷ್ಟ ಹಣವಿದ್ದು ನನ್ನ ವಿರುದ್ಧವರೂ ೪೦ರಿಂದ ೫೦ಕೋಟಿ ಖರ್ಚು ಮಾಡಿದ್ದ. ಆದರೂ ಇನ್ನೂ ಅವನ ಹತ್ತಿರ ಲೂಟಿ ಹಣವಿರುವುದರಿಂದ ಅವನನ್ನು ಕರೆದುಕೊಂಡು ಬಂದು ಇಲ್ಲಿ ನಿಲ್ಲಿಸಿದ್ದಾರೆ. ಕಳೆದ ಬಾರಿ ಇಲ್ಲಿ ಎಂಪಿ ಆಗಿದ್ದ ಬಸವರಾಜ ಒಂದು ದಿನವೂ ಈ ಭಾಗದ ಹಾಗೂ ರಾಜ್ಯ ಪರವಾಗಿ ಒಂದು ದಿನವೂ ಸಂಸತ್‌ ನಲ್ಲಿ ಮಾತನಾಡಲಿಲ್ಲ. ಯಾವುದೇ ಹಳ್ಳಿಗೂ ಹೋಗಲಿಲ್ಲ. ಆದರೆ ಈಗ ಸೋಮಣ್ಣನಿಗೆ ಬೆಂಬಲಿಸುತ್ತಿದ್ದು ಈ ಸೋಮಣ್ಣ ಗೆದ್ದರೂ ಯಾವುದೇ ಕೆಲಸ ಮಾಡಲ್ಲ. ಸೋಮಣ್ಣ ಕೆಲಸಗಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದು ಅವನು ವಸತಿ ಸಚಿವನಾಗಿ ಒಂದೇ ಒಂದು ಮನೆ ಬಡವರಿಗೆ ಕಟ್ಟಿಸಿಕೊಡಲಿಲ್ಲ.

ಆದರೆ ನಮ್ಮ ಸರ್ಕಾರವಿದ್ದಾಗ ೧೪ ಲಕ್ಷ ೪೬ ಸಾವಿರ ಮನೆ ಕಟ್ಟಿಸಿಕೊಟ್ಟಿದ್ದೇವೆ. ಹಾಗಾಗಿ ಈ ಸುಳ್ಳು ಕೆಲಸಗಾರನಿಗೆ ಮತ ನೀಡಬೇಡಿ. ಆದರೆ ನಮ್ಮ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನನಾಗಿದ್ದು, ಕಳೆದ ಬಾರಿ ಅವರು ಸಂಸತ್ ಸದಸ್ಯನಾಗಿ ೭೦೦ಕ್ಕೂ ಹೆಚ್ಚು ಪ್ರಶ್ನೆಗಳನ್ನು ಈ ಜಿಲ್ಲೆಯ ರೈತರು, ಕೃಷಿ ಹಾಗೂ ಅಭಿವೃದ್ಧಿ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚಿಲ್ಲಿದ್ದಾರೆ. ಈಗಲೂ ನೀವು ಮತ ನೀಡಿ ಗೆಲ್ಲಿಸಿದರೆ ನಿಮ್ಮ ಎಲ್ಲ ಸಮಸ್ಯೆಗಳ ಬಗ್ಗೆ ಅವರು ಕೇಂದ್ರದಲ್ಲಿ ಹೋರಾಡಲಿದ್ದು ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಇಂದು ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದು ಅವರ ಎಲ್ಲ ವಿಚಾರ ಧಾರೆಗಳನ್ನು ಕಾಂಗ್ರೆಸ್ ಅಳವಡಿಸಿಕೊಂಡು ಎಲ್ಲರಿಗೂ ಸಮಾನತೆ ನೀಡುವಲ್ಲಿ ಮುಂದಿದೆ ಎಂದರು.

ನಿಮ್ಮಿಂದ ಸಿಎಂ ಆಗದ್ದನ್ನೇ ಮರೆತು ಮಂಡ್ಯಕ್ಕೆ ಪಲಾಯನ: ಎಚ್ಡಿಕೆ ವಿರುದ್ಧ ಸಚಿವ ಜಮೀರ್‌ ವಾಗ್ದಾಳಿ

ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ ೨೦೧೪ ರಿಂದ ೧೯ ರವರೆಗೆ ಸಂಸತ್‌ನಲ್ಲಿ ಈ ಜಿಲ್ಲೆಯನ್ನು ಪ್ರತಿನಿಧಿಸಿ ಒಟ್ಟು ೭೦೦ಪ್ರಶ್ನೆಗಳ ಬಗ್ಗೆ ಮಾತನಾಡಿ ಪ್ರಮುಖ ೧೨೦ಕ್ಕೆ ಉತ್ತರ ಕಂಡುಕೊಂಡಿರುವುದು ನಿಮ್ಮಗಳ ಮುಂದಿದೆ. ಕುಡಿವ ನೀರು, ಇಸ್ರೋ, ಎಚ್‌ಎಎಲ್, ರೈಲ್ವೆ ಲೈನ್ ಡಬ್ಲಿಂಗ್, ಚತುಷ್ಪಥ ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿ ಕಾರ್ಯಗತಗೊಳಿಸಲಾಗಿದೆ. ಈ ಬಾರಿಯೂ ನನ್ನನ್ನು ಗೆಲ್ಲಿಸಿದರೆ ಕೊಬ್ಬರಿ, ರಾಗಿ ಕಡ್ಲೇಕಾಯಿ, ಜೋಳ ಮತ್ತಿತರೆ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ಸೇರಿದಂತೆ ನೀರಾವರಿಗೆ ಹೆಚ್ಚಿನ ಆಧ್ಗಯತೆ ನೀಡುತ್ತೇನೆಂದು ತಿಳಿಸಿ ಮತ ಕೇಳಿದರು.

click me!