
ಕೆಜಿಎಫ್ (ಅ.30): ಬೆಮೆಲ್ ಕಾರ್ಖಾನೆಯವರಿಂದ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿರುವ 973 ಎಕರೆ ಪ್ರದೇಶವನ್ನು ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಮೀಸಲಿಡಲಾಗಿದ್ದು, ಯಾರು ಏನೇ ಮಾಡಿದರು ಆ ಜಾಗವನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕಿ ರೂಪಕಲಾ ಶಶಿಧರ್ ಸ್ಪಷ್ಟಪಡಿಸಿದರು. ನಗರಸಭಾ ಆವರಣದಲ್ಲಿ ನಗರದ ಹೊರರವಲಯದ ಅಜ್ಜಪನಹಳ್ಳಿ ಬಳಿ ಜಿಲ್ಲಾಧಿಕಾರಿ ಸ್ಲಂ ಬೋರ್ಡ್ ಮೂಲಕ ಜಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಬೇಕು ಎಂದು ದಲಿತ ಸಮರಸೇನೆಯ ಪವಿತ್ರ ಮತ್ತಿತರರು ಮನವಿ ಸಲ್ಲಿಸಲು ಆಗಮಿಸಿದಾಗ ಶಾಸಕಿ ಕೆಂಡಾಮಂಡಲವಾದರು.
ಅಧಿಕಾರಿಗಳು ಮಾಡಿದ ತಪ್ಪು: ಕ್ಷೇತ್ರದ ಶಾಸಕಿಯಾದ ತಾವು ಆಶ್ರಯ, ಇಂದಿರಾ ಆವಾಸ್ ಸೇರಿದಂತೆ ಇತರ ಎಲ್ಲ ಸಮಿತಿಗಳ ಅಧ್ಯಕ್ಷೆಯಾಗಿದ್ದೇನೆ. ಕಂದಾಯ ಇಲಾಖೆಯಲ್ಲಿ ಈ ಹಿಂದೆ ಇದ್ದಂತಹ ಕೆಲವು ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಅನಾಹುತ ಸಂಭವಿಸಿದೆ ಎಂದರು. ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಜಮೀನು ಲಭ್ಯವಿದೆ ಎಂದು ಕಳೆದ 50 ವರ್ಷಗಳಲ್ಲಿ ಒಬ್ಬೇ ಒಬ್ಬ ಜನಪ್ರತಿನಿಧಿ ಪತ್ತೆ ಹಚ್ಚಿರಲಿಲ್ಲ. ಆದರೆ ಹಗಲು ರಾತ್ರಿ ಅಧಿಕಾರಿಗಳ ಬೆನ್ನು ಬಿದ್ದು ಕೇಂದ್ರ ಸರ್ಕಾರ ಈ ಮೊದಲು ಬಿಇಎಂಎಲ್ ಕಾರ್ಖಾನೆಗೆ ನೀಡಿದ್ದ ಜಮೀನಿನಲ್ಲಿ ಬಳಕೆ ಮಾಡಿಕೊಳ್ಳದೆ ಖಾಲಿ ಇದ್ದ 973 ಎಕರೆ ಜಮೀನನ್ನು ಪತ್ತೆ ಹಚ್ಚಿ ರಾಜ್ಯ ಸರ್ಕಾರ ವಾಪಸು ಪಡೆಯುವಂತೆ ಕಷ್ಟಪಟ್ಟಿದ್ದೇನೆ. ಈ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಬಳಸಲು ಬಿಡುವುದಿಲ್ಲ ಎಂದರು.
ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ
ಆಶ್ರಯ ಯೋಜನೆಯಡಿ ಮನೆ: ವಸತಿ ಸಚಿವರು ಸಹ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯದೆ ಸ್ಲಂ ಬೋರ್ಡ್ಗೆ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಲು ಹೇಗೆ ಸಾಧ್ಯ. ಕೆಜಿಎಫ್ ನಗರ ಹಾಗೂ ಬಿಜಿಎಂಎಲ್ ಕಾಲೋನಿಗಳಲ್ಲಿ ವಾಸಿಸುತ್ತಿರುವ ಸುಮಾರು 12 ಸಾವಿರ ವಸತಿ ರಹಿತ ಕುಟುಂಬಗಳು ನಗರಸಭೆಗೆ ಅರ್ಜಿ ಸಲ್ಲಿಸಿವೆ. ಎಲ್ಲರಿಗೂ ಮನೆಗಳನ್ನು ನೀಡುವ ನಿಟ್ಟಿನಲ್ಲಿ ಆಶ್ರಯ ಯೋಜನೆಯಡಿ 14 ಎಕರೆ ಜಮೀನು ಗುರುತಿಸಿದ್ದು ಹಂತ ಹಂತವಾಗಿ ಎಲ್ಲರಿಗೂ ಮನೆಗಳನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿದ್ದೇವೆ ಎಂದರು.
ಸನಾತನ ಧರ್ಮವು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಸಂಸದ ಬಚ್ಚೇಗೌಡ
ನಗರಸಭೆಯ ನಿರಾಕ್ಷೇಪಣ ಪತ್ರ ನೀಡಬೇಕು: ನೀವು ಹೇಳುತ್ತಿರುವ ಮಂಜೂರು ಆಗಿರುವ ಜಮೀನು ವಾಸಿಸಲು ಯೋಗ್ಯವಿದೆಯೇ ಎಂದು ನಗರಸಭೆ ಅಧಿಕಾರಿಗಳು ನಿರಾಕ್ಷೇಪಣ ಪತ್ರ ನೀಡಬೇಕು ಎಂಬುದರ ಬಗೆಗಿನ ಕಾನೂನುಗಳನ್ನು ನೀವು ಅರಿಯಬೇಕು. ಪವಿತ್ರ ಹಾಗೂ ಇತರರು ಮಾತನಾಡಿ, ನಮಗೆ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಸ್ಲಂ ಬೋರ್ಡ್ ಮೂಲಕ ಜಮೀನು ಮಂಜೂರು ಮಾಡಲಾಗಿದೆ ಮತ್ತು ಜಮೀನಿನಲ್ಲಿ ಇದ್ದಂತಹ ನಿಲಗಿರಿ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ನೀವು ದಿನಾಂಕ ಮತ್ತು ಸಮಯ ನೀಡಿದರೆ ಸ್ಲಂ ಬೋರ್ಡ್ ಕಮಿಷನರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಮತ್ತು ಮನೆಗಳ ಹಂಚಿಕೆಗೆ ವಸತಿ ಸಚಿವರು ಆಗಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಹರಿಪ್ರಸಾದ್, ನಗರಸಭೆ ಪೌರಾಯುಕ್ತ ಪವನ್ಕುಮಾರ್, ತಾಪಂ ಇಒ ಮಂಜುನಾಥ್ ಹರ್ತಿ, ಸಿಡಿಪಿಒ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.