
ಬೆಂಗಳೂರು, (ಜ.26): ಎಚ್ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಅಶ್ವಥ್ ನಾರಾಯಣ ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಒಕ್ಕಲಿಗ ಎಂಬ ಹೆಸರನ್ನು ಕುಮಾರಸ್ವಾಮಿ ಬಳಸಬಾರದು. ಸಮಾಜವನ್ನು ಒಡೆಯುವ, ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದಿರುವ ಅಶ್ವಥ್ ನಾರಾಯಣ ವಿರುದ್ಧ ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ನಾಲಿಗೆ ಇದೆ ಎಂದು ಏನ್ ಬೇಕಾದ್ರೂ ಮಾತಾಡ್ತಾರೆ : ಗರಂ ಆದ್ರು ಡಿಸಿಎಂ
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಒಂದು ಸಮುದಾಯದ ನಾಯಕನನ್ನು ಟೀಕಿಸಲು ಅದೇ ಸಮುದಾಯದ ವ್ಯಕ್ತಿಯನ್ನು ಬಳಸಿಕೊಳ್ಳುವುದು ಬಿಜೆಪಿಯ ಸೋಂಕು ಎಂದು ಕಿಡಿಕಾರಿದ್ದಾರೆ.
ತನ್ನ ಧರ್ಮ, ಸಮಾಜದ ಬಗ್ಗೆ ಅಪಾರ ಗೌರವ ಇಟ್ಟುಕೊಂಡೂ ಇತರ ಧರ್ಮ, ಸಮಾಜಗಳ ಮೇಲೆ ಅಷ್ಟೇ ಗೌರವ ಹೊಂದುವುದು ನಾನು ನಂಬಿದ ಜಾತ್ಯತೀತತೆ. ಇದರಲ್ಲಿ ಒಕ್ಕಲಿಗ ಅಸ್ಮಿತೆಯೂ ಇದೆ, ಇತರ ಸಮಾಜದ ಮೇಲಿನ ಗೌರವವೂ ಇದೆ. ನಿತ್ಯ ಅನ್ಯಧರ್ಮಗಳ ಮೇಲೆ ದಾಳಿ ಮಾಡುವ, ಜಾತಿಗಳನ್ನು ಮತಕ್ಕಾಗಿ ಬಳಸಿಕೊಳ್ಳುವ ನಿಮ್ಮ ಪಕ್ಷದವರಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಒಕ್ಕಲಿಗ ನಾಯಕತ್ವವನ್ನು ಅಭದ್ರಗೊಳಿಸುವ ಪ್ರಯತ್ನ ಮಾಡುವ ಬಿಜೆಪಿ 'ಪಾಕಿಸ್ತಾನಿ' ಎನ್ನುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಮಾಡಿದ್ದ ಅಪಮಾನವನ್ನು ಉಲ್ಲೇಖಿಸಿದ್ದೆ. ಒಕ್ಕಲಿಗರ ಜೀನ್ ಈ ಮಣ್ಣಿನಲ್ಲಿದೆ ಎಂಬುದನ್ನು ತಿಳಿಸಿದ್ದೆ ಅಷ್ಟೇ ಎಂದು ಹರಿಹಾಯ್ದಿದ್ದಾರೆ.
ಒಕ್ಕಲಿಗರ ಜೀನ್ ಕರ್ನಾಟಕದ ಮಣ್ಣಿನಲ್ಲಿದೆ ಎಂದು ಹೇಳಿದರೆ ಆಶ್ವಥ್ ನಾರಾಯಣ ಮತ್ತು ಬಿಜೆಪಿಗೆ ಏಕೆ ಕಣ್ಣು ಉರಿ? ನಿಮ್ಮ ಜೀನ್ ಪಾಕಿಸ್ತಾನದಲ್ಲಿದೆ ಎಂಬ ಮರುಕವೇ? ನಿಮ್ಮ ಸಿದ್ಧಾಂತ ಪ್ರತಿಪಾದಕರ ಜೀನ್ 'ನಾಜಿ' ಮೂಲದ್ದು ಎಂಬ ಬೇಸರವೇ? ಈ ಮಣ್ಣಿನವರಾದ 'ನಾವು' ನಮ್ಮ ಅಸ್ಮಿತೆ ಬಗ್ಗೆ ಮಾತಾಡುತ್ತೇವೆ. ತಡೆಯಲು ಬಿಜೆಪಿಗೆ ಸಾಧ್ಯವೇ? ಎಂದು ಅವರು ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.