
ಉಡುಪಿ (ಫೆ.11): ಬಿಜೆಪಿ ನಾಯಕ ಈಶ್ವರಪ್ಪ ಅವರು ನಮ್ಮ ಸಾಮಾಜಿಕ ವ್ಯವಸ್ಥೆಗೇ ಧಕ್ಕೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸದಾ ಕೊಲ್ಲುವ ಕೊಚ್ಚುವ ಮುಗಿಸುವ ಮಾತುಗಳನ್ನಾಡುತ್ತಾರೆ. ಬಿಜೆಪಿಯ ನಾಯಕನಾದವನಿಗೆ ಇದು ಶೋಭೆಯೇ? ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ಕೂಡ ಬಿಜೆಪಿಯ ನಾಯಕನೇ? ಎಂದವರು ತೀವ್ರವಾಗಿ ಪ್ರಶ್ನಿಸಿದರು. ಸಮಾಜವನ್ನು ಸದಾ ಆತಂಕದಲ್ಲಿ ಇಡುವುದೇ ಈಶ್ವರಪ್ಪನ ಕೆಲಸ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕ, ಬಿಜೆಪಿಗೆ ಇದರಿಂದಲೇ ಲಾಭ ಎಂದವರು ಆರೋಪಿಸಿದರು.
ಇವರೆಲ್ಲಾ ಜೈ ಶ್ರೀರಾಮ್ ಹೇಳುತ್ತಾರೆ, ಆದರೆ ಎಷ್ಟರಮಟ್ಟಿಗೆ ಅದನ್ನು ಅವರು ಜೀವನದಲ್ಲಿ ಅಳವಡಿಸಿದ್ದಾರೆ? ಹೇಳುವುದು ಸುಲಭ, ಆದರೆ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ ಎಂದೂ ಸಚಿವರು ಪ್ರಶ್ನಿಸಿದರು. ಖರ್ಗೆ ಹೊಟ್ಟೆಯಲ್ಲಿ ಹುಳ ಹುಟ್ಟಿದೆ ಎಂದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಇಂತಹ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಅನಂತಕುಮಾರ್ ಹೀಗೆ ದೊಡ್ಡ ಪಟ್ಟಿ ಇದೆ. ಪ್ರಚೋದನಕಾರಿ ಹೇಳಿಕೆ ನೀಡಿ ಜನರ ನಡುವೆ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ, ತೆರಿಗೆ ಪರಿಸ್ಥಿತಿ ಬಗ್ಗೆ ಮಾತಾನಾಡಿದರೆ, ಆರೋಗ್ಯ, ಶಿಕ್ಷಣದ ಬಗ್ಗೆ ಮಾತನಾಡಿದರೆ ಚರ್ಚೆ ನಡೆಸೋಣ. ಅದನ್ನು ಬಿಟ್ಟು ಯಾರ್ಯಾರು ಇಂತಹ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಅಂದರೆ ಇದನ್ನೆಲ್ಲಾ ನಾವು ಮಾತಾಡಬೇಕು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈಡಿ, ಐಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿ ಉಳಿದಿಲ್ಲ. ಈ ತನಿಖಾ ಸಂಸ್ಥೆಗಳೆಲ್ಲವೂ ಬಿಜೆಪಿಯ ಸಂಸ್ಥೆಗಳಾಗಿಬಿಟ್ಟಿವೆ. ಈಗ ಚುನಾವಣೆ ಹತ್ತಿರ ಬರುವಾಗ ಡೆಲ್ಲಿ, ಜಾರ್ಖಂಡ್ ಸಿಎಂ ಮೇಲೆ ದಾಳಿ ನಡೆದಿದೆ. ಜೈ ಶ್ರೀರಾಮ್ ಹೇಳಿಕೊಂಡು, ಧರ್ಮದ ಕವಚದ ಒಳಗೆ ಪಾಪದ ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ತೆರಿಗೆ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯದ ಸತ್ಯಾಂಶವನ್ನ ಪೂಂಜಾ ಒಪ್ಪಿಕೊಳ್ಳಬೇಕು: ಸಚಿವ ದಿನೇಶ್ ಗುಂಡೂರಾವ್
ಎಂಡೋ ಪೀಡಿತರ ಚಿಕಿತ್ಸೆಗೆ ಕೇರಿಂಗ್ ಸೆಂಟರ್: ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೇರಿಂಗ್ ಸೆಂಟರನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶನಿವಾರ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನ ನಡೆಸಿ ಮಾತನಾಡಿದರು. ಎಂಡೋಸಲ್ಪನ್ ಪೀಡಿತರ ಆರೋಗ್ಯ ಮೇಲುಸ್ತುವಾರಿಗೆ ಪ್ರೋಗ್ರಾಂ ಆಫೀಸರ್ ಹಾಗೂ ವಾಹನದ ಬೇಡಿಕೆಯನ್ನೂ ಪೂರೈಸಲಾಗುವುದು ಎಂದವರು ಭರವಸೆ ನೀಡಿದರು. ರಾಜ್ಯದಲ್ಲಿ ಖಾಲಿ ಇರುವ ಪ್ರಯೋಗಾಲಯ ತಜ್ಞರು, ಶ್ರುಶ್ರೂಕರ ಹುದ್ದೆಗಳನ್ನು ಭರ್ತಿ ಮಾಡಲು 800 ಮಂದಿಯ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದ್ದು, ಅದರಲ್ಲಿ ಉಡುಪಿ ಜಿಲ್ಲೆಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.