ಸಿಎಂಗೆ ತಾಕತ್ತಿದ್ದರೆ ಇನ್‌ಸ್ಪೆಕ್ಟರ್‌ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ: ರಾಮಲಿಂಗಾರೆಡ್ಡಿ

Published : Oct 30, 2022, 07:30 AM IST
ಸಿಎಂಗೆ ತಾಕತ್ತಿದ್ದರೆ ಇನ್‌ಸ್ಪೆಕ್ಟರ್‌ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ: ರಾಮಲಿಂಗಾರೆಡ್ಡಿ

ಸಾರಾಂಶ

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷಗಳು, ಮಾಧ್ಯಮಗಳು ಮಾತ್ರವಲ್ಲದೆ ಆಡಳಿತ ಪಕ್ಷದ ಸಚಿವರೇ ಮಾತನಾಡಿದ್ದಾರೆ. ಹೀಗಾಗಿ 40 ಪರ್ಸೆಂಟ್‌ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದ ರಾಮಲಿಂಗಾರೆಡ್ಡಿ

ಬೆಂಗಳೂರು(ಅ.30): ಕೆ.ಆರ್‌.ಪುರ ಪೊಲೀಸ್‌ ಇನ್‌ಸ್ಪೆಕ್ಟರ್‌ ನಂದೀಶ್‌ ಸಾವಿಗೆ ಭ್ರಷ್ಟ ಸರ್ಕಾರವೇ ಹೊಣೆ. ಸ್ಥಳ ನಿಯುಕ್ತಿ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿಕೆಯೇ ಸಾಕ್ಷಿ. ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಧಮ್‌, ತಾಕತ್ತಿದ್ದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ. ಒಂದು ವೇಳೆ ನ್ಯಾಯಾಂಗ ತನಿಖೆಗೆ ವಹಿಸದೆ ನಿರ್ಲಕ್ಷ್ಯ ವಹಿಸಿದರೆ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ನಾಗರಾಜ್‌ ಅವರು ಇನ್‌ಸ್ಪೆಕ್ಟರ್‌ ನಂದೀಶ್‌ ಸಾವಿನ ಕುರಿತು ‘ಪೋಸ್ಟಿಂಗ್‌ಗೆ .70-80 ಲಕ್ಷ ಕೊಟ್ಟು ಬಂದು ನೀವು ಕಾಟ ಕೊಟ್ಟರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ. ಸರ್ವನಾಶ ಮಾಡಿಬಿಟ್ರಿ’ ಎಂದು ಬಹಿರಂಗವಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷಗಳು, ಮಾಧ್ಯಮಗಳು ಮಾತ್ರವಲ್ಲದೆ ಆಡಳಿತ ಪಕ್ಷದ ಸಚಿವರೇ ಮಾತನಾಡಿದ್ದಾರೆ. ಹೀಗಾಗಿ 40 ಪರ್ಸೆಂಟ್‌ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಿಡಿ ಕಾರಿದರು.

ಇನ್ಸ್‌ಪೆಕ್ಟರ್‌ ಸಸ್ಪೆಂಡ್‌ಗೂ ಸಾವಿಗೂ ಸಂಬಂಧವಿಲ್ಲ: ಸಚಿವ ಆರಗ ಜ್ಞಾನೇಂದ್ರ

ಮುಖ್ಯಮಂತ್ರಿಗಳು ಇತ್ತೀಚೆಗೆ ಧಮ್‌, ತಾಕತ್ತಿನ ಬಗ್ಗೆ ಮಾತನಾಡಿದ್ದರು. ಅವರಿಗೆ ಧಮ್‌, ತಾಕತ್ತಿದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಸಚಿವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿಗಳು ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಸುಳ್ಳಾಗಿದ್ದರೆ ಸಚಿವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಹೇಳಿದರು.

ಪ್ರಕರಣದಲ್ಲಿ .70-80 ಲಕ್ಷ ಮುಖ್ಯಮಂತ್ರಿಗಳಿಗೆ ಸೇರಿದೆಯಾ? ಅಥವಾ ಗೃಹಮಂತ್ರಿಗಳಿಗೆ ಸೇರಿದೆಯಾ? ಅಥವಾ ಬೇರೆಯವರಿಗೆ ಸೇರಿದೆಯಾ? ಎಂಬ ಸ್ಪಷ್ಟನೆ ಬೇಕು. ಹಿಂದೆ ಪಿಎಸ್‌ಐ ಅಕ್ರಮದ ಬಗ್ಗೆ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಕ್ಕೆ ನೋಟಿಸ್‌ ನೀಡಲಾಗಿತ್ತು. ಈಗ ಸಚಿವ ನಾಗರಾಜ್‌ ಅವರಿಗೆ ನೋಟಿಸ್‌ ಯಾವಾಗ ನೀಡುತ್ತೀರಿ? ಕಾಂಗ್ರೆಸ್‌ ಪಕ್ಷ ‘ಪೇ ಸಿಎಂ’ ಅಭಿಯಾನ ಮಾಡಿದಾಗ ಕೇಸು ದಾಖಲಿಸಿದ್ದಿರಿ. ನಿಮ್ಮ ಸಚಿವರು ನೀಡಿರುವ ಹೇಳಿಕೆಯೂ ‘ಪೇಸಿಎಂ’ ಆರೋಪದ ಭಾಗವಲ್ಲವೇ ಎಂದು ಪ್ರಶ್ನಿಸಿದರು. ಶಾಸಕ ಶರತ್‌ ಬಚ್ಚೇಗೌಡ ಹಾಜರಿದ್ದರು.

ನಂದೀಶ್‌ ಸಾವಿಗೆ ಸರ್ಕಾರ ಹೊಣೆ: ಕೃಷ್ಣಬೈರೇಗೌಡ

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇನ್‌ಸ್ಪೆಕ್ಟರ್‌ ನಂದೀಶ್‌ ಅವರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ, ಒತ್ತಡ ತಡೆಯಲಾಗದೇ ನಿಧನರಾಗಿದ್ದಾರೆ. ಹೀಗಾಗಿ ಈ ಸಾವಿಗೆ ಸರ್ಕಾರವೇ ಹೊಣೆ. ನಂದೀಶ್‌ ಅವರು ಸುಮಾರು .70-80 ಲಕ್ಷ ಲಂಚ ನೀಡಿ ಆ ಠಾಣೆಗೆ ಬಂದಿದ್ದಾರೆ. ಇದನ್ನು ಖುದ್ದು ಸಚಿವರೇ ಹೇಳಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದ ಕೈ ಕಾರ್ಯಕರ್ತೆ ವಿರುದ್ಧ ದೂರು!
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''