ಅಗ್ನಿಪಥ್‌ ಯೋಜನೆ: ಬಿಜೆಪಿಯಿಂದ ಯುವಕರ ದುರ್ಬಳಕೆ, ಈಶ್ವರ ಖಂಡ್ರೆ

By Kannadaprabha NewsFirst Published Jun 30, 2022, 9:30 PM IST
Highlights

*   ಭಾರತ್‌ ಜೋಡೋ ಆಂದೋಲನ ಮೂಲಕ ದೇಶದಲ್ಲಿನ ಎಲ್ಲರನ್ನೂ ಜೋಡಿಸುವ ಕೆಲಸ ಮಾಡುತ್ತೇವೆ
*  ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ
*  ಮನೆ ಎಂದ ಬಳಿಕ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಬಗೆಹರಿಸಿಕೊಳ್ಳುತ್ತೇವೆ

ಸಂಡೂರು(ಜೂ.30):  ಅಗ್ನಿಪಥ್‌ ಯೋಜನೆ ಹೆಸರಿನಲ್ಲಿ ಬಿಜೆಪಿ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಇಲ್ಲಿನ ಖಾಸಗಿ ರೆಸಾರ್ಚ್‌ನಲ್ಲಿ ಹಮ್ಮಿಕೊಂಡಿರುವ ವಿಜಯನಗರ ಜಿಲ್ಲಾ ಕಾಂಗ್ರೆಸ್‌ ನವ ಸಂಕಲ್ಪ ಶಿಬಿರದಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಕೇಂದ್ರ ಸರ್ಕಾರದ ವೈಫಲ್ಯಗಳು ಹಾಗೂ ಈ ಹಿಂದೆ ಕಾಂಗ್ರೆಸ್‌ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನಪರ ಯೋಜನೆಗಳ ಕುರಿತು ಜನರಿಗೆ ತಿಳಿಸಲು ಕಾಂಗ್ರೆಸ್‌ ನಿರ್ಧರಿಸಿ, ಎಐಸಿಸಿ ಸೂಚನೆಯಂತೆ ಹೊಸ ಏಳು ಸಮಿತಿಗಳನ್ನು ರಚಿಸಲಾಗಿದ್ದು ಭಾರತ್‌ ಜೋಡೋ ಆಂದೋಲನ ಮೂಲಕ ದೇಶದಲ್ಲಿನ ಎಲ್ಲರನ್ನೂ ಜೋಡಿಸುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ. 40ರಷ್ಟುಕಮೀಷನ್‌ ಆರೋಪ ಪ್ರಕರಣ ಹಿನ್ನೆಲೆಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇಡೀ ನಾಡಿಗೆ ಗೊತ್ತಿರುವ ಸಂಗತಿಯಾಗಿದೆ. ಗುತ್ತಿಗೆದಾರನ ಆತ್ಮಹತ್ಯೆಯಿಂದಾಗಿಯೇ ಸಚಿವ ಈಶ್ವರಪ್ಪ ಅವರು ರಾಜಿನಾಮೆ ನೀಡಿದರು ಎಂದು ತಿಳಿಸಿದರು.

ಸಂಸದ ಖೂಬಾದಿಂದ ಬೀದರ್‌ ಜಿಲ್ಲೆ ಮಾನ ಹರಾಜು: ಈಶ್ವರ ಖಂಡ್ರೆ

ಪಠ್ಯ ಪುಸ್ತಕ ಪರಿಷ್ಕರಣೆ ಅತ್ಯಂತ ಅವೈಜ್ಞಾನಿಕವಾಗಿ ನಡೆದಿದೆ. ಅದನ್ನು ಸಹ ಬಿಜೆಪಿಯವರು ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ. ಅವಿವೇಕಿ ಕೈಯಲ್ಲಿ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಲಾಗಿತ್ತು. ಹೀಗಾಗಿಯೇ, ನಾನಾ ಗೊಂದಲಗಳಿಗೆ ಕಾರಣವಾಯಿತು. ಈ ಹಿಂದೆ ಪಠ್ಯ ಪರಿಷ್ಕರಣೆಯಲ್ಲಿ ಯಾವುದೇ ದೋಷಗಳು ಇರಲಿಲ್ಲ ಎಂದರು.

ಜಾರಿ ನಿರ್ದೇಶನಾಲಯ ಬಳಸಿಕೊಂಡು ರಾಹುಲ್‌ ಗಾಂಧಿಯವರಿಗೆ ಕಿರುಕುಳ ನೀಡಲಾಯಿತು. ಮಾನಸಿಕ ಹಿಂಸೆ ನೀಡಬೇಕು ಎಂಬ ಕಾರಣಕ್ಕಾಗಿಯೇ ಇಡಿಯನ್ನು ಬಿಜೆಪಿಯವರು ಬಳಸಿಕೊಂಡರು. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಹೆಣಗಾಡುತ್ತಿದೆ. ಅದಕ್ಕಾಗಿ ಕೋಟಿ ಕೋಟಿ ಹಣ ನೀಡಿ ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂದು ದೂರಿದರಲ್ಲದೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮನೆ ಎಂದ ಬಳಿಕ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಬಗೆಹರಿಸಿಕೊಳ್ಳುತ್ತೇವೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಸಮಾವೇಶದ ಬಗ್ಗೆ ಯಾವುದೇ ಸಂಶಯ ಬೇಡ. ಎಲ್ಲರೂ ಸೇರಿಕೊಂಡೇ ಸಮಾವೇಶ ಮಾಡುತ್ತಿದ್ದಾರೆ ಎಂದು ಖಂಡ್ರೆ ತಿಳಿಸಿದರು.
 

click me!