ಮೈಸೂರಿಂದ ಸಾ.ರಾ.ಮಹೇಶ್‌ಗೆ ಟಿಕೆಟ್‌ ಕೊಡಿಸಲು ಎಚ್‌ಡಿಕೆ ಪ್ರಯತ್ನ: ಎಂ.ಲಕ್ಷ್ಮಣ್‌

By Kannadaprabha NewsFirst Published Jan 11, 2024, 12:30 AM IST
Highlights

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ. ಮಹೇಶ್‌ ಅವರಿಗೆ ಟಿಕೆಟ್‌ ಕೊಡಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. 

ಮೈಸೂರು (ಜ.11): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ. ಮಹೇಶ್‌ ಅವರಿಗೆ ಟಿಕೆಟ್‌ ಕೊಡಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಡಲು ಜೆಡಿಎಸ್ ತಯಾರಿಲ್ಲ. ಸಾ.ರಾ. ಮಹೇಶ್‌ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತಿನಲ್ಲಿಯೇ ಸ್ಪರ್ಧೆ ಬಗ್ಗೆ ಸುಳಿವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಕೆಲವು ದಿನಗಳಿಂದ ಪ್ರತಾಪ್ ಸಿಂಹ ಮತ್ತು ಅವರ ಸಹೋದರನ ವಿರುದ್ಧ ಮೃಧುಧೋರಣೆ ಅನುಸರಿಸುವ ಉದ್ದೇಶ ಏನು? 

ವಿಕ್ರಂ ಸಿಂಹ ಬಂಧನದಲ್ಲಿ ದೇವೇಗೌಡರ ಕುಟುಂಬದ ಕೈವಾಡ ಇದೆ ಎಂದು ಜನರು ಮಾತಾಡುತ್ತಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಯಾರನ್ನಾದರೂ ಹೊಗಳಿದರೆ ಅವರಿಗೆ ಗಂಡಾಂತರ ಕಾದಿದೆ. ಖೆಡ್ಡಾ ಯಾರು ಯಾರಿಗೆ ತೋಡಿದ್ದಾರೆ ಎಂಬುದನ್ನು ಪ್ರತಾಪ್ ಸಿಂಹ ಮತ್ತು ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೇರೆ ಕಡೆಯಿಂದ ಬೀಟೆ ಮರಗಳನ್ನು ಕಡಿದು ತಂದು ಹಾಕಲು ಅದೇನು ಕಡ್ಲೆಕಾಯಿ ಗಿಡವೇ? ಕುಮಾರಸ್ವಾಮಿ ಅವರು ಸಾಮಾನ್ಯ ಜ್ಞಾನ ಇಲ್ಲದವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಾರೆ. ಹಿಟ್‌ ಅಂಡ್‌ ರನ್‌ ಹೇಳಿಕೆ ಕೊಡುವುದನ್ನು ಅವರು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿ ಕೆಲಸಕ್ಕೂ ಸಲ್ಲದ ನಿಯಮದಿಂದ ಹೈರಾಣಾದ ಮಡಿಕೇರಿ ನಗರದ ಜನತೆ: ತಪ್ಪಿದ ಕೋಟ್ಯಂತರ ಆದಾಯ!

ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರದ ಮಂತ್ರಿ ಮಾಡಲು ಮಾತುಕತೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ನಾಲ್ಕರಲ್ಲೂ ಅವರ ಕುಟುಂಬದವರೇ ಸ್ಪರ್ಧೆ ಮಾಡಬೇಕು. ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌‍ ಗೆ ಬರುವ ಅವಶ್ಯಕತೆ ಇಲ್ಲ ಎಂದರು. ಕೆ.ಆರ್‌.ಎಸ್ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಹೈಕೋರ್ಟ್‌ ಆದೇಶವನ್ನು ಸ್ವಾಗತಿಸುತ್ತೇವೆ. ಮಂಡ್ಯ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಿ ಅಣೆಕಟ್ಟೆಯನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

ಮಾಸ್ಕ್‌, ಕೋವಿಡ್‌ ಕಿಟ್‌ ಸಹಿತವಾಗಿ ವೈದ್ಯ ಉಪಕರಣಗಳ ಖರೀದಿಯಲ್ಲಿ 40 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಸತ್ಯ ಹೇಳುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಸರ್ಕಾರದ ವತಿಯಿಂದ ಸನ್ಮಾನ ಮಾಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮಾಜಿ ಮೇಯರ್ ಚಿಕ್ಕಣ್ಣ, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ್‌, ಗಿರೀಶ್‌ ಮೊದಲಾದವರು ಇದ್ದರು.

ಡೈರಿ ಮಿಲ್ಕ್ ಚಾಕಲೇಟ್ ನೀಡಿಕೆ: ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ, ದೂರು ಪ್ರತಿ ದೂರು ದಾಖಲು

ಯುವ ಮತದಾರರ ನೋಂದಣಿಗೆ ಆನ್‌ ಲೈನ್‌ ನಲ್ಲಿ ಮಾತ್ರ ಅವಕಾಶ ನೀಡಿರುವ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಬಿಜೆಪಿ ಅನುಕೂಲಕ್ಕಾಗಿ ಹೀಗೆ ಮಾಡಲಾಗುತ್ತಿದೆಯೇ? ಕೇಂದ್ರ ಚುನಾವಣಾ ಆಯೋಗದಿಂದ ನಿರ್ದೇಶನ ಇದೆಯೇ? ಮನೆ ಮನೆಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು ನಿಮ್ಮ ಕರ್ತವ್ಯ ಅಲ್ಲವೇ? ಆನ್‌ ಲೈನ್‌ ನಲ್ಲಿ ಸ್ಲಂ, ಬಡ ಯುವಕರು ನೋಂದಣಿಗೆ ಕಷ್ಟವಾಗಲಿದೆ. ಅರ್ಜಿ ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕು.
- ಎಂ. ಲಕ್ಷ್ಮಣ, ಕೆಪಿಸಿಸಿ ವಕ್ತಾರ

click me!