ಕಾರ್ಯಕರ್ತರಲ್ಲಿ ಹುರುಪು ತುಂಬಿದ ಡಿಕೆಶಿ: ಪುಟಿದೇಳುವ ತವಕದಲ್ಲಿ ಕಾಂಗ್ರೆಸ್

By Suvarna NewsFirst Published Nov 22, 2020, 7:20 PM IST
Highlights

ಶಿರಾ ಹಾಗೂ ಆರ್‌ಆರ್‌ ನಗರ ಬೈ ಎಲೆಕ್ಷನ್‌ನಲ್ಲಿ ಸೋತು ಮುಖಂಭಗ ಅನುಭವಿಸಿರುವ ಕಾಂಗ್ರೆಸ್‌ ಇದೀಗ ಪುಟಿದೇಳುವ ತವಕದಲ್ಲಿದೆ. ಇದಕ್ಕೆ ಪೂರವೆಂಬಂತೆ ಡಿಕೆ ಶಿವಕುಮಾರ್ ಕಾರ್ಯರ್ತರಿಗೊಂದು ಕರೆ ಕೊಟ್ಟಿದ್ದಾರೆ. 

ಬಳ್ಳಾರಿ, (ನ.22): ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ನಾವೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ. ಇದಕ್ಕಾಗಿ ನಾನು ಇಲ್ಲಿಂದ ಪ್ರವಾಸ ಆರಂಭ ಮಾಡಿದ್ದು, ಇದು ಕಾಂಗ್ರೆಸ್ ಪಾಲಿಗೆ ವಿಜಯದ ನಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಹೊಸಪೇಟೆ ನಗರದಲ್ಲಿ  ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ಕಳೆದ ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಶಾಸಕರು, ಪರಾಜಿತರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರ ಶ್ರಮ ಇಂದು ಇಲ್ಲಿ ಸೇರಿದ್ದನ್ನು ನೋಡಿದರೆ ತಿಳಿಯುತ್ತದೆ. ಎಲ್ಲಾ ಹಂತದ ನಾಯಕರು ಜನರನ್ನು ಸೇರಿಸುತ್ತಾರೆ. ಆದರೆ ಪಕ್ಷದ ಬಲವರ್ಧನೆ ಆಗುತ್ತಿಲ್ಲ. ಈಗ ಇರುವ ಆತ್ಮವಿಶ್ವಾಸ ಬರುವ ಚುನಾವಣೆಗಳಲ್ಲಿ ಇರಬೇಕು. ಜಿಲ್ಲೆಯ ಹತ್ತೂ ಕ್ಷೇತ್ರಗಳಲ್ಲೀ ಪಕ್ಷ ಗೆಲ್ಲುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯ ಕಾಂಗ್ರೆಸ್ ಗೆ ಬಳ್ಳಾರಿ ಕಾರ್ಯಕರ್ತರು ತೋರಿಸಿದ್ದೀರಿ. ನಮ್ಮದು ಕೇಡರ್ ಬೇಸ್ ಪಾರ್ಟಿ ಆಗಬೇಕಿದೆ. ಆ ಮೂಲಕ ಇನ್ನಷ್ಟೂ ಪಕ್ಷ ಗಟ್ಟಿ ಆಗುವಂತೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

Latest Videos

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಣಕ್ಕಿಳಿಯುಲು ರೆಡಿ ಎಂದ ಕೈ ಕಲಿ..!

ಕೆಪಿಸಿಸಿ ಅಧ್ಯಕ್ಷನಾದರೂ ಓರ್ವ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯಲು ನಾನು ಸಿದ್ಧ. ನಮ್ಮಗಳ ಚುನಾವಣೆ ವೇಳೆ ನಮ್ಮ ಗೆಲುವಿಗಾಗಿ ನೀವು ಹೇಗೆ ಶ್ರಮಿಸುತ್ತೀರೋ ಅದೇ ರೀತಿ ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.

ಉಪಚುನಾಣೆಗಳಲ್ಲಿ ಕಾಂಗ್ರೆಸ್ ಗೆ ಆದ ಸೋಲನ್ನು ಒಪ್ಪಿಕೊಳ್ಳೋಣ. ಆ ಚುನಾವಣೆಗಳಲ್ಲಿ ಪಕ್ಷ ಯಾಕೆ ಸೋತಿತು ಎಂದು ಚಿಂತಿಸಬೇಡಿ. ಅದರ ಕುರಿತು ನಾವು ತೀರ್ಮಾನ ಮಾಡುತ್ತೇವೆ. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲೂ ಎಲ್ಲಾ ಹಂತದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಸಮಾಧಾನ ತರಿಸಿದೆ ಎಂದು ಸೋಲನ್ನ ಸಮರ್ಥಿಸಿಕೊಂಡರು.

ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ ಫಲವಾಗಿ ಉಗ್ರಪ್ಪ ಲಕ್ಷ ಓಟುಗಳ ಅಂತರದಿಂದ ಗೆದ್ದರು. ಇದಕ್ಕೆಲ್ಲ ನಿಮ್ಮ ಶ್ರಮವೇ ಕಾರಣ. ಬೈ ಎಲೆಕ್ಷನ್ ಗಳಲ್ಲಿ ನಮಗೆ ಬೇಕಾದ ಅಧಿಕಾರಿಗಳ, ಕಾರ್ಯಕರ್ತರ ಸೇರಿ ವಿವಿಧ ಶಕ್ತಿಗಳು ನಮಗೆ ಎಷ್ಟರಮಟ್ಟಿಗೆ ಸಿಗುತ್ತವೆ ಎಂದು ಗೊತ್ತಿರುವ ವಿಷಯ ಎಂದರು.

ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬರುವ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಾನು ತೀರ್ಮಾನ ಮಾಡಲ್ಲ. ನೀವೇ ತೀರ್ಮಾನ ಮಾಡಿ ಸೂಚಿಸಿದ ಹೆಸರಿನವರಿಗೆ ಟಿಕೆಟ್ ಕೊಡುತ್ತೇವೆ. ಕೆಳ ಹಂತದಿಂದ ಲೋಕಸಭಾ ಚುನಾವಣೆಗಳಲ್ಲಿ ಶ್ರಮವಹಿಸಿ ಚುನಾವಣೆ ನಡೆಸದೇ ಕೇವಲ ನಾಯಕರ ಬಾಲ ಹಿಡಿದು ಟಿಕೆಟ್ ಕೇಳಿದರೆ ಅದಕ್ಕೆ ರಾಹುಲ್ ಗಾಂಧಿ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಬೇರೆ ಪಕ್ಷದವರು ಕಾಂಗ್ರೆಸ್ ಸೇರುತ್ತಿದ್ದಾರೆ. ಇದು ಕಾಂಗ್ರೆಸ್ ಮೇಲೆ ಜನತೆ ಇಟ್ಟ ನಂಬಿಕೆಯಾಗಿದೆ ಎಂದು ತಿಳಿಸಿದರು.

ಮಸ್ಕಿ ಕ್ಷೇತ್ರದಲ್ಲಿ ಬಸವಗೌಡ ತುರ್ವಿಹಾಳ ಅಧಿಕೃತವಾಗಿ ನಾಳೆ (ಸೋಮವಾರ) ಪಕ್ಷ ಸೇರಲಿದ್ದಾರೆ. ಕಾಂಗ್ರೆಸ್ ಎಂದರೆ ಅದು ದೇಶದ ಶಕ್ತಿಯಾಗಿದೆ. ಬಿಜೆಪಿ, ಜೆಡಿಎಸ್ ನವರು ಕಾಂಗ್ರೆಸ್ ಸೇರಲು ಅನೇಕರು ನನ್ನನ್ನು ಭೇಟಿ ಆಗಿದ್ದಾರೆ. ಆಯಾ ಜಿಲ್ಲೆಗಳ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಟಿಕೆಟ್ ಕೊಡಲೇಬೇಕು ಎನ್ನುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ. ಆದರೆ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿದ್ದು, ದುಡಿಯುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

click me!