ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧದ ಕಾಂಗ್ರೆಸ್ ಯಾವುದೇ ಹೋರಾಟಕ್ಕೆ ಮುಂದಾದರೂ ಅದನ್ನು ತಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು(ಆ.23): ಕಾಂಗ್ರೆಸ್ ಪಕ್ಷ ಯಾವುದೇ ಹೋರಾಟಗಳಿಗೆ ಮುಂದಾದರೂ ಅದನ್ನು ತಡೆಯುವ ಕೆಲಸ ಮಾಡುತ್ತಿರುವುದನ್ನು ನೋಡಿದರೆ ರಾಜ್ಯ ಬಿಜೆಪಿ ಸರ್ಕಾರ ಬರೀ ಭಯದಲ್ಲೇ ಬದುಕುತ್ತಿದೆ ಎನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧದ ಕಾಂಗ್ರೆಸ್ ಯಾವುದೇ ಹೋರಾಟಕ್ಕೆ ಮುಂದಾದರೂ ಅದನ್ನು ತಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ನಾವು ಮಡಿಕೇರಿ ಚಲೋ ಘೋಷಿಸಿದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದೇ ಇದಕ್ಕೆ ಒಂದು ಉದಾಹರಣೆ. ಆ.26 ರಂದು ಮಡಿಕೇರಿ ಚಲೋ ನಡೆಸಲು ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಘೋಷಿಸಿದ ಬಳಿಕ ಅಲ್ಲಿನ ಜಿಲ್ಲಾಧಿಕಾರಿ ಮೂಲಕ ಸರ್ಕಾರ 144 ಸೆಕ್ಷನ್ ಜಾರಿ ಮಾಡಿಸಿದೆ. ನಾವೇನು ಅಲ್ಲಿ ಕುಸ್ತಿ ಮಾಡೋಕೆ ಹೋಗ್ತಿದ್ವಾ? ನಮ್ಮನ್ನು ಸರ್ಕಾರ ಯಾವಾಗಲೂ ಕಾಮಾಲೆ ಕಣ್ಣಿನಲ್ಲಿ ನೋಡುತ್ತಿದೆ, ಭಯದಲ್ಲೇ ಈ ಸರ್ಕಾರ ಬದುಕುತ್ತಿದೆ’ ಎಂದರು.
ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್, ಬಂಧನ ಭೀತಿಯಿಂದ ಬಚಾವ್
‘ನಾವು ಮಡಿಕೇರಿಗೆ ಹೋದರೆ 1 ಲಕ್ಷ ಜನ ಸೇರುತ್ತಾರಂತೆ. ಅಷ್ಟುಜನ ಸೇರಿದರೆ ಸಮಸ್ಯೆ ಆಗುತ್ತಂತೆ. ಮಡಿಕೇರಿ ಒಳಗಡೆ ಹೋಗುವ ಎಲ್ಲಾ ಬಾರ್ಡರ್ ಸೀಜ್ ಮಾಡ್ತಿದ್ದಾರಂತೆ. ಅಲ್ಲದೆ, ನಮ್ಮ ಶಾಸಕರ ಮೇಲೆ ಸರ್ಕಾರ ಕಣ್ಣಿಟ್ಟಿದೆ. ನನ್ನ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಸಿದ್ದರಾಮಯ್ಯ ಅವರು ಏನ್ ಮಾಡ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕ್ತಿದ್ದಾರೆ. ಇದಕ್ಕಾ ಸರ್ಕಾರ ಇರೋದು? ಇವರೇನು ಸರ್ಕಾರ ನಡೆಸುತ್ತಿದ್ದಾರಾ ಏನು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.