Kodagu : ವಿರಾಜಪೇಟೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಫೈಟ್‌ಗೆ ರೆಡಿಯಾದ ಕಾಂಗ್ರೆಸ್

By Suvarna NewsFirst Published Mar 25, 2023, 5:43 PM IST
Highlights

ಬಿಜೆಪಿಯ ಭದ್ರಕೋಟೆ ಕೊಡಗಿನ ಎರಡು ಕ್ಷೇತ್ರಗಳ ಪೈಕಿ ಒಂದಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಿಸಿದೆ. ಅಭ್ಯರ್ಥಿ ಘೋಷಣೆಯ ಬೆನ್ನಲ್ಲೇ ಕೊಡಗು ಕಾಂಗ್ರೆಸ್‌ ಫುಲ್ ಆಕ್ಟೀವ್ ಆಗಿ ಫೀಲ್ಡಿಗೆ ಇಳಿದಿದೆ.

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.25): ಬಿಜೆಪಿಯ ಭದ್ರಕೋಟೆ ಕೊಡಗಿನ ಎರಡು ಕ್ಷೇತ್ರಗಳ ಪೈಕಿ ಒಂದಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಿಸಿದೆ. ಅಭ್ಯರ್ಥಿ ಘೋಷಣೆಯ ಬೆನ್ನಲ್ಲೇ ಕೊಡಗು ಕಾಂಗ್ರೆಸ್‌ ಫುಲ್ ಆಕ್ಟೀವ್ ಆಗಿ ಫೀಲ್ಡಿಗೆ ಇಳಿದಿದೆ. ಇತ್ತ ಮಡಿಕೇರಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗದೆ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.   ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಹಲವು ರಾಜಕೀಯ ಬೆಳವಣಿಗೆಗಳಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಅದ್ರಲ್ಲೂ ಪ್ರಮುಖ ವಿಚಾರ ಅಂದ್ರೆ ಕೊಡಗಿನ ಕಮಲ ಕೋಟೆಯಲ್ಲಿ ಕೈ ಅಬ್ಬರಿಸೋ ಮುನ್ಸೂಚನೆ ಸಿಕ್ಕಿರೋದು. ಕಳೆದ 25-30 ವರ್ಷಗಳಿಂದ ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ. ಬಿಜೆಪಿ ಇತರ ಪಕ್ಷಗಳನ್ನು ಹೆಸರಿಲ್ಲದಂತೆ ಕ್ಲೀನ್ ಸ್ವೀಪ್ ಮಾಡಿತ್ತು.

ಆದ್ರೆ ಈ ಬಾರಿ ಈ ಲೆಕ್ಕಾಚಾರ ಉಲ್ಟಾ ಆಗುವ ಲಕ್ಷಣ ಹೆಚ್ಚಾಗಿದೆ. ಯಾಕಂದ್ರೆ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಕೆ ಜಿ ಬೋಪಯ್ಯಗೆ ಕಾಂಗ್ರೆಸ್ ಬಿಗ್ ಫೈಟ್ ಕೊಡೋಕೆ ತಯಾರಾಗಿದೆ‌. ಇದರ ನಡುವೆ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಅಂತಾನೆ ಗುರುತಿಸಿಕೊಂಡು ಮೂರು ವರ್ಷಕ್ಕೂ ಮುಂಚಿನಿಂದಲೇ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿರೋ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ ಎಸ್ ಪೊನ್ನಣ್ಣಗೆ ಮೊದಲ ಲಿಸ್ಟ್‌ನಲ್ಲೇ ಟಿಕೆಟ್ ಘೋಷಣೆಯಾಗಿರುವುದು ವಿರಾಜಪೇಟೆ ಕ್ಷೇತ್ರದ ಕೈ-ಕಮಲ ಫೈಟ್‌‌ಗೆ ಅಖಾಡ ಸಿದ್ದವಾಗಿದೆ.

ಇನ್ನು ಇತ್ತ ಮಡಿಕೇರಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ ಮುಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತೊಡೆ ತಟ್ಟಲು ಸಿದ್ದವಾಗುತ್ತಿದ್ದಾರೆ. ಅದ್ರಲ್ಲೂ ಕಾಂಗ್ರೆಸ್ 7  ಕ್ಕೂ ಹೆಚ್ಚು ಆಕಾಂಕ್ಷಿಗಳನ್ನ ಹೊಂದಿದ್ದರೂ ಇಬ್ಬರಂತೂ ಬಿಜೆಪಿಗೆ ಬಿಗ್ ಫೈಟ್ ಕೊಡುವವರೇ ಆಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ.

ಜಾತಿವಾರು ಟಿಕೆಟ್ ಹಂಚಿದ ಕಾಂಗ್ರೆಸ್! ಯಾವ ಜಾತಿಗೆ ಎಷ್ಟು ಟಿಕೆಟ್ ಲಭಿಸಿದೆ? ವ್ಯಾಪಕ ಚರ್ಚೆ

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಮೌಳಿ, ಸದ್ಯದ ಪರಿಸ್ಥಿತಿಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಹೀಗಾಗಿ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಿದ್ದಾರೆ‌. 7 ಆಕಾಂಕ್ಷಿಗಳ ಪೈಕಿ 2 ಮಂದಿಯ ಹೆಸರು ಹೈಕಮಾಂಡ್ ಬಳಿ ಅಂತಿಮವಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಅಭ್ಯರ್ಥಿಯ ಹೆಸರನ್ನ ಘೋಷಿಸುತ್ತಾರೆ. ನಾನು ಕ್ಷೇತ್ರದ ಜನರ ಪ್ರೀತಿ ಗಳಿಸಿದ್ದೇನೆ, ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನನಗೆ ಯಾಕೆ ಟಿಕೆಟ್ ಕೊಡಬೇಕು ಎಂದು ಹೈಕಮಾಂಡ್‌ಗೆ ಮನವರಿಕೆ‌ ಮಾಡಿದ್ದೇನೆ. ಆದರೆ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷಕ್ಕಾಗಿ, ಪಕ್ಷದ ಗೆಲುವಿಗೆ ದುಡಿಯುತ್ತೇನೆ ಎಂದಿದ್ದಾರೆ.

ಕೈ ಟಿಕೆಟ್ ಘೋಷಣೆ ಬೆನ್ನಲ್ಲೇ ಬೆಳಗಾವಿಯಲ್ಲಿ ಭಿನ್ನಮತ ಸ್ಫೋಟ, ಸಿದ್ದರಾಮಯ್ಯ ನಿವಾಸಕ್ಕೆ

ಒಟ್ಟಿನಲ್ಲಿ ಒಂದು ಕ್ಷೇತ್ರದ ಕಾಂಗ್ರೆಸ್‌ನ ಮೊದಲ ಪಟ್ಟಿ ಹೊರಬೀಳ್ತಿದ್ದಂತೆ ಕೊಡಗು ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಸದ್ಯ ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಮತ್ತೊಂದು ಅಭ್ಯರ್ಥಿ ಘೋಷಣೆ ಆದ್ಮೇಲೆ ಕೊಡಗಿನ ಚುನಾವಣಾ ಕಣ ಮತ್ತಷ್ಟು ರಂಗೇರುವ ಸಾಧ್ಯತೆ ದಟ್ಟವಾಗಿದೆ.

click me!