
ರಾಮನಗರ (ಏ.28): ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಇದರ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಹಾಗೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ 'ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಖಚಿತ, ಇದೇ ನನ್ನ ಅಂತಿಮ ದಿನಾಂಕ' ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಮನಗರದ ಕೇತುಹಳ್ಳಿ ಗ್ರಾಮದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, 'ಹಿಂದೆ ನಾನು ಎರಡು ಮೂರು ಬಾರಿ ದಿನಾಂಕಗಳನ್ನು ಹೇಳಿದ್ದೆ. ಆದರೆ, ಈ ಬಾರಿ ನಾನು ಅಂತಿಮವಾಗಿ ಹೇಳುತ್ತಿದ್ದೇನೆ, ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಅಧಿಕಾರ ಸಿಗಬೇಕು ಎಂಬುದು ಕೇವಲ ನನ್ನ ಆಸೆಯಲ್ಲ, ರಾಜ್ಯದ ನೂರಾರು ಶಾಸಕರ ಹಾಗೂ ಜನರ ಅಭಿಲಾಷೆಯಾಗಿದೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆಯಬೇಕು ಎಂಬುದು ಎಲ್ಲರ ಆಸೆ' ಎಂದರು.
ಮೇ 15 ಡಿ.ಕೆ. ಶಿವಕುಮಾರ್ ಅವರ ಜನ್ಮದಿನ. ಅಂದೇ ಅವರು ಸಿಎಂ ಆಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಇಕ್ಬಾಲ್ ಹುಸೇನ್, 'ನಮ್ಮೆಲ್ಲರಿಗೂ ಅದೇ ಆಸೆ ಇದೆ. ಅವರ ಜನ್ಮದಿನದಂದು ಅಧಿಕಾರದ ಗಿಫ್ಟ್ ಸಿಗಲಿ ಎಂಬುದು ನಮ್ಮ ಹಾರೈಕೆ. ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ರಕ್ತ ಸುರಿಸಿದ್ದಾರೆ, ಶ್ರಮ ಹಾಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ರಾಜ್ಯದ ಅಭಿವೃದ್ಧಿಯನ್ನು ನೋಡುವ ಹಂಬಲ ನಮಗಿದೆ' ಎಂದು ಭವಿಷ್ಯ ನುಡಿದರು.
ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೋಳಿ ಮತ್ತು ಎಚ್.ಸಿ. ಮಹಾದೇವಪ್ಪ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿರುವ ವಿಚಾರವಾಗಿಯೂ ಇಕ್ಬಾಲ್ ಹುಸೇನ್ ಮಾತನಾಡಿದರು. 'ಸತೀಶ್ ಜಾರಕಿಹೋಳಿ ಮತ್ತು ಮಹಾದೇವಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಟ್ಟು ಚರ್ಚೆ ಮಾಡಲು ಹೋಗಿರಬಹುದು ಅಥವಾ ತಮ್ಮ ವೈಯಕ್ತಿಕ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಹೋಗಿರಬಹುದು. ಅದನ್ನು ನಾವು ತಪ್ಪಾಗಿ ನೋಡಬೇಕಿಲ್ಲ' ಎಂದು ಪ್ರತಿಕ್ರಿಯಿಸಿದರು.
ಸಚಿವ ಕೆ.ಎನ್. ರಾಜಣ್ಣ ಅವರು ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂಬ ಬೇಡಿಕೆ ಇಟ್ಟಿರುವ ಬಗ್ಗೆ ಮಾತನಾಡಿದ ಇಕ್ಬಾಲ್, 'ರಾಜಕೀಯದಲ್ಲಿ ವಿಭಿನ್ನ ಅಭಿಪ್ರಾಯಗಳು ಇರುವುದು ಸಹಜ. ರಾಜಣ್ಣ ಅವರು ತಮ್ಮ ಅನಿಸಿಕೆ ಹೇಳಿದ್ದಾರೆ, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಪ್ರತಿಯೊಂದು ಜಾತಿ, ಪ್ರತಿ ಕ್ಷೇತ್ರದಲ್ಲೂ ಗುಂಪುಗಾರಿಕೆ ಇರುತ್ತದೆ. ನಾವೆಲ್ಲರೂ ಒಂದು ಬದಲಾವಣೆ ಬಯಸುತ್ತಿದ್ದೇವೆ ಅಷ್ಟೇ' ಎಂದು ಪರೋಕ್ಷವಾಗಿ ಸಿಎಂ ಬದಲಾವಣೆಯ ಪರವಾಗಿ ಬ್ಯಾಟ್ ಬೀಸಿದರು.
ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಕೇಳಿದ ಪ್ರಶ್ನೆಗೆ ಅತ್ಯಂತ ಸರಳವಾಗಿ ಉತ್ತರಿಸಿದ ಶಾಸಕರು, 'ನಾನು ಶಾಸಕನಾಗಿ ಜನರ ಕೆಲಸ ಮಾಡುತ್ತಿದ್ದೇನೆ, ಅಷ್ಟೇ ಸಾಕು. ನನ್ನ ಕ್ಷೇತ್ರದಲ್ಲಿ ನಾನೇ ಸಿಎಂ, ನಾನೇ ಸಚಿವ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಜನರ ಪ್ರೀತಿ ಮತ್ತು ವಿಶ್ವಾಸವಿದ್ದರೆ ಸಾಕು, ಬೇರಾವ ಸ್ಥಾನಮಾನವೂ ನನಗೆ ಬೇಡ' ಎಂದು ಹೇಳುವ ಮೂಲಕ ತಮ್ಮ ಸ್ವಾಭಿಮಾನ ಮೆರೆದರು.
ಒಟ್ಟಾರೆಯಾಗಿ, ಇಕ್ಬಾಲ್ ಹುಸೇನ್ ಅವರ ಈ 'ಮೇ 15' ಡೆಡ್ಲೈನ್ ಈಗ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದ್ದು, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.